ಕಾಂಗ್ರೆಸ್ ನಾಯಕರಿಗೇ ಬೇಡವಾಗಿದೆ ಸಮ್ಮಿಶ್ರ ಸರಕಾರ
Recommended Video
ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟು ಅಸಹ್ಯದ ಹಂತವನ್ನು ಮುಟ್ಟಿದೆ.
ಒಂದು ಕಡೆ ಮೂರು ಪಕ್ಷಗಳ ಜನನಾಯಕರು ರೆಸಾರ್ಟ್, ಪಂಚತಾರಾ ಹೋಟೆಲ್ಗಳನ್ನು ಸೇರಿಕೊಂಡಿದ್ದಾರೆ. ಇನ್ನೊಂದೆಡೆ ಜನಪ್ರತಿನಿಧಿಗಳ ಇಂತಹ ವರ್ತನೆ ವಿರುದ್ಧ ಆಕ್ರೋಶ ದಾಖಲಿಸುವ ಪ್ರಯತ್ನಗಳು ನಡೆಯುತ್ತಿವೆ. ಹೀಗಿರುವಾಗಲೇ ಸರಕಾರ ಹೋದರೆ ಹೋಗಲಿ ಎಂದು ಕೆಲವು ಹಿರಿಯ ಕಾಂಗ್ರೆಸ್ ನಾಯಕರೇ ಆಪ್ತ ವಲಯದಲ್ಲಿ ಮಾತನಾಡುತ್ತಿದ್ದಾರೆ.
ಸುಪ್ರೀಂ ಆದೇಶ LIVE: ಸ್ಪೀಕರ್ಗೆ ಸೂಚನೆ ಇಲ್ಲ, ಅತೃಪ್ತರಿಗೆ ವಿಪ್ ಇಲ್ಲ
"ಆರಂಭದಿಂದಲೂ ಜೆಡಿಎಸ್ ಜತೆ ಸೇರಿ ಸರಕಾರ ರಚಿಸಲು ಮನಸ್ಸು ಇರಲಿಲ್ಲ. ವಿರೋಧ ಪಕ್ಷದಲ್ಲಿ ಕುಳಿತಿದ್ದರೆ ಜನರ ವಿಶ್ವಾಸವನ್ನು ಉಳಿಸಿಕೊಳ್ಳಬಹುದಿತ್ತು ಎಂಬುದು ನಮ್ಮ ಕೆಲವು ಹಿರಿಯ ನಾಯಕರ ಸಲಹೆಯಾಗಿತ್ತು. ಆದರೆ ಫಲಿತಾಂಶ ಬಂದಾಗ ತರಾತುರಿಯಲ್ಲಿ ಬಿಜೆಪಿಯನ್ನು ಹೊರಗಿಡುವ ಉದ್ದೇಶದಿಂದ ಜೆಡಿಎಸ್ಗೆ ಬೆಂಬಲ ನೀಡಲು ಹೈಕಮಾಂಡ್ ತೀರ್ಮಾನ ಮಾಡಿತ್ತು. ಅವತ್ತಿಗಿದ್ದ ರಾಷ್ಟ್ರ ರಾಜಕೀಯ ಸನ್ನಿವೇಶದಲ್ಲಿ ಈ ತೀರ್ಮಾನ ಸರಿಯಾಗಿದ್ದರೂ ಕರ್ನಾಟಕದಲ್ಲಿ ನಮಗದು ದೊಡ್ಡ ಕಂಟಕವಾಯಿತು,'' ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ಅಸಮಾಧಾನ ಹೊರಹಾಕಿದರು.
ಖಾಸಗಿ ಮಾತುಕತೆಯೊಂದರಲ್ಲಿ ಸದ್ಯದ ರಾಜಕೀಯ ಸನ್ನಿವೇಶಗಳ ಕುರಿತು ಅವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು.
ಹೆಚ್ಚು ಕಡಿಮೆ ಇಂತಹದ್ದೇ ಆಲೋಚನೆ ಸರಕಾರದ ಭಾಗವಾಗಿರದ ಬಹುತೇಕ ಕಾಂಗ್ರೆಸ್ ನಾಯಕರಲ್ಲಿದೆ. ಕೆಪಿಸಿಸಿಯ ಹಿರಿಯ ಪದಾಧಿಕಾರಿಗಳಿಂದ ಹಿಡಿದು ತಳಮಟ್ಟದವರೆಗೂ ಸಮ್ಮಿಶ್ರ ಸರಕಾರದಿಂದಾಗಿ ಜನರ ವಿಶ್ವಾಸ ಕಳೆದುಕೊಳ್ಳುಂತಾಯಿತು ಎಂಬ ಭಾವನೆ ವ್ಯಕ್ತವಾಗುತ್ತಿದೆ.
ಅಲ್ಪಮತಕ್ಕೆ ಕುಸಿದ ಎಚ್ಡಿಕೆ ಸರ್ಕಾರ, ವಿಧಾನಸಭೆ ಸಂಖ್ಯಾಬಲ?
ಇಷ್ಟಿದ್ದರೂ ಕಾಂಗ್ರೆಸ್ ಹಿರಿಯ ನಾಯಕರು ಸರಕಾರ ಉಳಿಸಿಕೊಳ್ಳುವ ಬಹಿರಂಗ ಪ್ರಯತ್ನದಲ್ಲಿ ಯಾಕೆ ತೊಡಗಿದ್ದಾರೆ? ಹೀಗೊಂದು ಪ್ರಶ್ನೆಯನ್ನು ಮುಂದಿಟ್ಟರೆ ಮತ್ತದೇ ಬಿಜೆಪಿಯೇತರ ಸರಕಾರದ ಅಸ್ಥಿತ್ವದ ಸಂಗತಿಯನ್ನು ಕೈ ನಾಯಕರೊಬ್ಬರು ವಿವರಿಸುತ್ತಾರೆ.
'ಬಿಜೆಪಿ ಅಧಿಕಾರಕ್ಕೇರುವುದ ತಡೆಯುವ ಅವಶ್ಯಕತೆ ಇತ್ತು'
"ಕಾಂಗ್ರೆಸ್ ಮುಕ್ತ ಭಾರತದ ಹೆಸರಿನಲ್ಲಿ ವಿರೋಧ ಪಕ್ಷಗಳ ಮೇಲೆ ಬಿಜೆಪಿ ಸವಾರಿ ಮಾಡುತ್ತಿದೆ. ಹೀಗಿರುವಾಗ ದೊಡ್ಡ ರಾಜ್ಯಗಳಲ್ಲಿ ಒಂದಾದ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರದಂತೆ ತಡೆಯುವುದು ಅಗತ್ಯವಾಗಿದೆ. ಫಲಿತಾಂಶ ಬಂದ ಸಮಯದಲ್ಲಿ ಇದೇ ಆಲೋಚನೆಯಿಂದ ಹೈಕಮಾಂಡ್ ಜಾತ್ಯಾತೀತ ಪಕ್ಷಗಳ ಸಮ್ಮಿಶ್ರ ಸರಕಾರಕ್ಕೆ ಒಪ್ಪಿಗೆ ಸೂಚಿಸಿತ್ತು. ಅದಾದ ಮೇಲೆ ಲೋಕಸಭೆ ಚುನಾವಣೆ ನಡೆಯಿತು. ಈಗ ಎಐಸಿಸಿ ಅಧ್ಯಕ್ಷರೇ ರಾಜೀನಾಮೆ ನೀಡಿದ್ದಾರೆ. ಇಂತಹ ಸಮಯದಲ್ಲಿ ಈ ಬಿಕ್ಕಟ್ಟು ಎಲ್ಲರಿಗೂ ಬೇಡವಾಗಿದೆ,'' ಎನ್ನುತ್ತಾರೆ ಅವರು.
ಆರ್ಥಿಕ ವಿಚಾರಗಳ 'ಅಸಮಾನ ಹಂಚಿಕೆ'
ಇದು ಸರಕಾರ ಭಾಗವಾಗಿರದ ನಾಯಕರ ಮಾತುಗಳಾದರೆ, ಸರಕಾರದಲ್ಲಿ ಸ್ಥಾನಮಾನ ಪಡೆದುಕೊಂಡಿರುವ ಕಾಂಗ್ರೆಸ್ ನಾಯಕರ ನಿಲುವು ಬೇರೆಯೇ ಇದ್ದಂತಿದೆ. "ಏನಾದರೂ ಸರಿ ಸರಕಾರ ಉಳಿಸಿಕೊಳ್ಳಬೇಕು ಎಂಬುದು ನಮ್ಮದೇ ಪಕ್ಷದ ಕೆಲವು ಸಚಿವರ ಒತ್ತಾಸೆ. ಅದಕ್ಕೆ ಅವರು ಹಣಕಾಸಿನ ಕಮಿಟ್ಮೆಂಟ್ಗಳು ಕಾರಣ. ಎಚ್. ಡಿ. ರೇವಣ್ಣ ವಿರುದ್ಧ ಅಸಮಾಧಾನ ಏಳಲು ಆರ್ಥಿಕ ವಿಚಾರಗಳ 'ಅಸಮಾನ ಹಂಚಿಕೆ'ಯೇ ಮೂಲ ಕಾರಣ,'' ಎನ್ನುತ್ತಾರೆ ಕೆಪಿಸಿಸಿಯ ಸಾಮಾಜಿಕ ಮಾಧ್ಯಮ ವಿಭಾಗದ ಹಿರಿಯ ನಾಯಕರೊಬ್ಬರು.
ರಾಜ್ಯ ರಾಜಕೀಯ ; ರಾಜೀನಾಮೆಯಿಂದ ವಿಶ್ವಾಸಮತದ ತನಕ
ಎಐಸಿಸಿ ಅಧ್ಯಕ್ಷ ಸ್ಥಾನ ಗಾಂಧಿ ಕುಟುಂಬದಿಂದ ಹೊರಕ್ಕೆ
ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ ನಾಯಕತ್ವ ರಾಷ್ಟ್ರಮಟ್ಟದಲ್ಲಿಯೇ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅಧ್ಯಕ್ಷ ಸ್ಥಾನದಿಂದ ರಾಹುಲ್ ಗಾಂಧಿ ಹೊರಬರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಚುಕ್ಕಾಣಿಯನ್ನು ಗಾಂಧಿ ಕುಟುಂಬದಿಂದ ಹೊರತಾದವರಿಗೆ ನೀಡಬೇಕು ಎಂದು ಒಂದು ವರ್ಗ ಒತ್ತಾಯಿಸಿದರೆ ಪಕ್ಷದ ಹಿರಿಯ ನಾಯಕರು ಸೋನಿಯಾ ಗಾಂಧಿ ಅವರನ್ನೇ ಅಧ್ಯಕ್ಷ ಸ್ಥಾನಕ್ಕೆ ತರುವ ಉಮೇದು ವ್ಯಕ್ತಪಡಿಸುತ್ತಿದ್ದಾರೆ.
ಕರ್ನಾಟಕ ರಾಜಕೀಯ ಬಿಕ್ಕಟ್ಟು, ಪಕ್ಷಾಂತರ ನಿಷೇಧ ಕಾಯ್ದೆ ಎಂದರೇನು?
ಶಸ್ತ್ರ ತ್ಯಾಗಕ್ಕೆ ಮಾನಸಿಕವಾಗಿ ಸಿದ್ಧವಾಗಿದ್ದಾರೆ
ರಾಜ್ಯದಲ್ಲಿಯೂ ಕೆಪಿಸಿಸಿ ಅಧ್ಯಕ್ಷರಾಗಿರುವ ದಿನೇಶ್ ಗುಂಡೂರಾವ್ ಚುನಾವಣೆ ಸೋಲಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂಬ ಮಾತುಗಳು ಪಕ್ಷದ ಒಳಗಿಂದಲೇ ಕೇಳಿಬಂದಿದ್ದವು. ಆದರೆ ಸಿದ್ದರಾಮಯ್ಯ ಆಪ್ತವಲಯದಲ್ಲಿರುವ ಕಾರಣಕ್ಕೆ ದಿನೇಶ್ ಆ ಸ್ಥಾನದಲ್ಲಿ ಮುಂದುವರಿಯುತ್ತಿದ್ದಾರೆ ಎನ್ನಲಾಗುತ್ತಿದೆ. ಒಟ್ಟಾರೆ ಪಕ್ಷ ನಾಯಕತ್ವದ ಹಾಗೂ ಭವಿಷ್ಯದ ಬಿಕ್ಕಟ್ಟನ್ನು ಎದುರಿಸುತ್ತಿರುವ ದಿನಗಳಲ್ಲಿ ಎದುರಾಗಿರುವ ರಾಜ್ಯದ ರಾಜಕೀಯ ಅತಂತ್ರತೆ ಹಳೆಯ ಪಕ್ಷಕ್ಕೆ ವಿಶ್ವಾಸಾರ್ಹತೆಯ ಸವಾಲವನ್ನು ಮುಂದಿಟ್ಟಿದೆ. ಇದರಿಂದ ಹೊರಬರಲು ಸರಕಾರ ಹೋದರೆ ಹೋಗಲಿ ಎಂಬ ಮಾತುಗಳನ್ನು ಕೆಲವು ಕಾಂಗ್ರೆಸ್ ನಾಯಕರು ಹೇಳುವ ಮೂಲಕ 'ಶಸ್ತ್ರ ತ್ಯಾಗ'ಕ್ಕೆ ಮಾನಸಿಕವಾಗಿ ಸಿದ್ಧವಾಗಿರುವ ಮುನ್ಸೂಚನೆ ನೀಡಿದ್ದಾರೆ.