ಗದಗದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ
ಗದಗ, ನವೆಂಬರ್, 09 : ರಾಜ್ಯ ಸರ್ಕಾರ ಆಚರಿಸಲು ಉದ್ದೇಶಿಸಿರುವ ಟಿಪ್ಪುಸುಲ್ತಾನ್ ಜಯಂತಿಯನ್ನು ತೀವ್ರವಾಗಿ ವಿರೋಧಿಸಿದ ಶ್ರೀರಾಮ ಸೇನಾ ಕಾರ್ಯಕರ್ತರ ಮೇಲೆ ಯುವಕರ ತಂಡ ನವೆಂಬರ್ 8ರ ಭಾನುವಾರದಂದು ಹಲ್ಲೆ ನಡೆಸಿದೆ.
ಜುಮ್ಮಾ ಮಸೀದಿಯ ಹತ್ತಿರ ಶ್ರೀರಾಮ ಸೇನೆ ಕಾರ್ಯಕರ್ತ ಪರಶುರಾಮ ಆಡೀನ ಎಂಬುವರ ಮೇಲೆ ಕೋಲು ಮತ್ತು ಕಲ್ಲುಗಳಿಂದ ಹಲ್ಲೆ ಮಾಡಲಾಗಿದೆ. ಇದರ ಪರಿಣಾಮ ಪರಶುರಾಮ್ ನ ಎದೆ, ತಲೆ ಭಾಗಗಳಿಗೆ ತೀವ್ರ ಗಾಯಗಳಾಗಿದ್ದು, ಆತನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.['ಮಹಾತ್ಮಾ ಗಾಂಧೀಜಿಯಂತೆ ಗೋಡ್ಸೆ ಕೂಡಾ ದೇಶಭಕ್ತ']
ಶ್ರೀರಾಮ ಸೇನೆಯ ಕಾರ್ಯಕರ್ತ ಪರಶುರಾಮ ಆಡೀನ ಮೇಲಿನ ಹಲ್ಲೆಯಿಂದ ನಗರದ ಕಾನತೋಟ ಪ್ರದೇಶದಲ್ಲಿ ತೀವ್ರ ಉದ್ವಿಗ್ನ ವಾತಾವರಣ ತಲೆದೋರಿದ್ದು, ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ್, ಕಾರ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ರಾಜ್ಯ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ, ಜಿಲ್ಲಾ ಸಂಚಾಲಕ ರಾಜು ಖಾನಪ್ಪನವರ ಮುಂತಾದವರು ತೀವ್ರವಾಗಿ ಖಂಡಿಸಿದ್ದಾರೆ.[ಶ್ರೀರಾಮಸೇನೆ ಉಲ್ಲೇಖ ಸರಿ ಅಲ್ಲ: ಚೆನ್ನವೀರ ಕಣವಿ ಸ್ಪಷ್ಟನೆ]
ರಾಜ್ಯ ಸರ್ಕಾರ ನವೆಂಬರ್ 10ರಂದು ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸಲು ತೀರ್ಮಾನಿಸಿತ್ತು. ಆಗ ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ್ ಹಾಗೂ ಪರಶುರಾಮ ಆಡೀನ ಮತ್ತು ಇತರರು ನವೆಂಬರ್ 6ರ ಶನಿವಾರದಂದು ಗದಗಕ್ಕೆ ಭೇಟಿ ನೀಡಿದ ಇವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಸರ್ಕಾರ ಟಿಪ್ಪು ಸುಲ್ತಾನ ಜಯಂತಿ ಆಚರಣೆಯನ್ನು ಕೈಬಿಡಬೇಕೆಂದು ಆಗ್ರಹಿಸಿದ್ದರು.