40 ಪೈಸೆಗಾಗಿ ಎಂಪೈರ್ ಹೋಟೆಲ್ ವಿರುದ್ಧ ಕೇಸು ಜಡಿದ ವಕೀಲ್ ಸಾಬ್!
ಬೆಂಗಳೂರು, ಜ. 14: ಒಂದು ಬಿರಿಯಾನಿಗೆ ಹೆಚ್ಚುವರಿಯಾಗಿ 40 ಪೈಸೆ ಪಡೆದಿರುವ ಎಂಪೈರ್ ಹೋಟೆಲ್ ವಿರುದ್ಧ ಬೆಂಗಳೂರಿನ ವಕೀಲಸಾಬ್ ಕಂ ಸಾಮಾಜಿಕ ಕಾರ್ಯಕರ್ತ ಸಮರ ಸಾರಿದ್ದಾರೆ.
ಇದು ಮೇಲ್ನೋಟಕ್ಕೆ ಛೇ, ಏನಿದು ನಲವತ್ತು ಪೈಸೆಗೆ ಇಷ್ಟೆಲ್ಲಾ ಅನಿಸಬಹುದು. ಅದರೆ ಇದರ ಹಿಂದೆ ವಕೀಲ ನರಸಿಂಹಮೂರ್ತಿಗೆ ಇರುವ ಕಾಳಜಿಯೇ ಬೇರೆ. ಹೀಗಾಗಿ ಬಿರಿಯಾನಿಗೆ ಹೆಚ್ಚುವರಿ ಪಡೆದಿರುವ ನನ್ನ ನಲವತ್ತು ಪೈಸೆ ವಾಪಸು ಕೊಡಿಸಿ ಎಂದು ವಕೀಲ್ ಸಾಬ್ ಕೋರ್ಟ್ನಲ್ಲಿ ದಾವೆ ಹಾಕಿದ್ದಾರೆ.
ಅಚ್ಚರಿಯಾದರೂ ಇದು ಸತ್ಯ. ಸಾಮಾಜಿಕ ಕಾಳಜಿಗೆ, ಮಾನವ ಹಕ್ಕುಗಳ ರಕ್ಷಣೆಗೆ ತನ್ನ ಸೇವೆ ಸೀಮಿತಗೊಳಿಸಿರುವ ವಕೀಲ, ಸಾಮಾಜಿಕ ಕಾಯಕರ್ತ ನರಸಿಂಹಮೂರ್ತಿ ಎಂಪೈರ್ ಹೋಟೆಲ್ ವಿರುದ್ಧ ಸಮರ ಸಾರಿದ್ದಾರೆ. ಒಂದು ಬಿರಿಯಾನಿಗೆ ಹೆಚ್ಚುವರಿ 40 ಪೈಸೆ ಪಡೆದ ಎಂಪೈರ್ ಹೋಟೆಲ್ ವಿರುದ್ಧ ಗ್ರಾಹಕ ವೇದಿಕೆ ನ್ಯಾಯಾಲಯದಲ್ಲಿ ಕೇಸು ಹಾಕಿದ್ದಾರೆ. ಪ್ರಕರಣದ ವಿಚಾರಣೆ ಇತ್ತೀಚೆಗೆ ನಡೆದಿದ್ದು, ಪ್ರಕರಣದ ಸಾರಾಂಶ ಇಲ್ಲಿದೆ ನೋಡಿ.
ಹೋಟೆಲ್ನಲ್ಲಿ ನಡೆದಿದ್ದುಷ್ಟು:
ಇತ್ತೀಚೆಗೆ ವಕೀಲಸಾಬ್ ನರಸಿಂಹಮೂರ್ತಿ ಎಂ.ಜಿ. ರಸ್ತೆಯಲ್ಲಿರುವ ಎಂಪೈರ್ ಹೋಟೆಲ್ ಗೆ ಹೋಗಿದ್ದಾರೆ. ಅಲ್ಲಿ ಬಿರಿಯಾನಿ ಅರ್ಡರ್ ಮಾಡಿ ತಿಂದಿದ್ದಿದ್ದಾರೆ. ಬಿರಿಯಾನಿ ಬಿಲ್ ಜಿಎಸ್ ಟಿ ಒಳಗೊಂಡಂತೆ 264.60 ರೂ. ಆಗಿದೆ. ಬಿಲ್ ಪಾವತಿ ಮಾಡಿದಾಗ ಎಂಪೈರ್ ಹೋಟೆಲ್ನವರು 265 ರೌಂಡ್ ಫಿಗರ್ ಮಾಡಿ ಹೆಚ್ಚುವರಿ 40 ಪೈಸೆ ಪಡೆದಿದ್ದಾರೆ. ಇದಕ್ಕೆ ತರಕಾರು ಮಾಡಿದ ನರಸಿಂಹಮೂರ್ತಿ, ನೀವು ನನ್ನಿಂದ ಯಾಕೆ 40 ಪೈಸೆ ಹೆಚ್ಚುವರಿ ತೆಗೆದುಕೊಂಡಿದ್ದೀರಾ? ನನ್ನ ಬಾಕಿ 40 ಪೈಸೆ ವಾಪಸು ಕೊಡಿ, ನನಗೆ ಮಾತ್ರವಲ್ಲ, ಎಲ್ಲಾ ಗ್ರಾಹಕರಿಗೂ ನೀವು ಕೊಡಬೇಕು ಎಂದು ಕೇಳಿದ್ದಾರೆ. ಇದಕ್ಕೆ ಕ್ಯಾರೆ ಎನ್ನದ ಎಂಪೈರ್ ಆಡಳಿತ ಮಂಡಳಿ ಸುಮ್ಮನಾಗಿದ್ದಾರೆ.
ಬಿಲ್ ಸಮೇತ ವಕೀಲ ನರಸಿಂಹಮೂರ್ತಿ ಗ್ರಾಹಕ ವೇದಿಕೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಸ್ವಾಮಿ ನಾನು ಒಂದು ಬಿರಿಯಾನಿ ಪಡೆದೆ. ಜಿಎಸ್ಟಿ ತೆರಿಗೆ ಸೇರಿ ಅದರ ಮೊತ್ತ 264.60 ಪೈಸೆ. ನನ್ನಿಂದ ಹೆಚ್ಚುವರಿ 40 ಪೈಸೆ ಪಡೆದಿದ್ದಾರೆ. ಕೇಳಿದರೆ ಕೊಟ್ಟಿಲ್ಲ. ನನ್ನ ಒಬ್ಬನಿಂದ ನಲವತ್ತು ಪೈಸೆ ಒಂದು ದಿನಕ್ಕೆ ಹೆಚ್ಚುವರಿ ಪಡೆದರೆ, ವರ್ಷದಲ್ಲಿ ಎಷ್ಟು ಮಂದಿ ಬಿರಿಯಾನಿ ತಿನ್ನುತ್ತಾರೆ. ಎಷ್ಟು ಹಣ ಹೆಚ್ಚುವರಿಯಾಗಿ ಪಡೆದಂತಾಗುತ್ತದೆ. ಇವರಿಗೆ ಹೆಚ್ಚುವರಿಯಾಗಿ ಪಡೆಯಲು ಅನುಮತಿ ಇದೆಯೇ? ನನ್ನಿಂದ ಪಡೆದಿರುವ ಹೆಚ್ಚುವರಿ ಹಣ ವಾಪಸು ಕೊಡಿಸಿ. ಕಳೆದ ಮೂರು ತಿಂಗಳಿನಿಂದ ಹೆಚ್ಚುವರಿಯಾಗಿ ಸಂಗ್ರಹಿಸಿರುವ ಹಣವನ್ನು ಕರ್ನಾಟಕ ಸರ್ಕಾರದ ಖಜಾನೆಗೆ ಹದಿನೈದು ದಿನದಲ್ಲಿ ಡೆಪಾಸಿಟ್ ಮಾಡಬೇಕು ಎಂಬ ವಾದವನ್ನು ಮುಂದಿಟ್ಟಿದ್ದಾರೆ.
ಇದಕ್ಕೆ ವಕೀಲರ ಮೂಲಕ ಆಕ್ಷೇಪಣೆ ಸಲ್ಲಿಸಿರುವ ಎಂಪೈರ್ ಹೋಟೆಲ್, ಆರ್ಬಿಐ ಮಾರ್ಗಸೂಚಿ ಅನ್ವಯ 40 ಪೈಸೆ ಪಡೆದಿದ್ದೇವೆ. ಇದರಲ್ಲಿ ಹೆಚ್ಚುವರಿ ಪ್ರಶ್ನೆ ಇಲ್ಲ ಎಂದು ವಾದ ಮಂಡಿಸಿದೆ.
ಇದಕ್ಕೆ ಪ್ರತಿ ವಾದ ಮಂಡಿಸಿರುವ ವಕೀಲ ನರಸಿಂಹಮೂರ್ತಿ, ನಾನು ಹೋಟೆಲ್ ಗೆ ಹೋಗಿದ್ದೇನೆ. ಅಲ್ಲಿ ಹೋಟೆಲ್ ನಡೆಸುವ ಎಲ್ಲಾ ಪರವಾನಗಿ ಅಂಟಿಸಿದ್ದಾರೆ. ಅದರೆ, ಆರ್ಬಿಐ ಮಾರ್ಗಸೂಚಿ ಪ್ರಕಟಿಸಿಲ್ಲ. ಹೀಗಾಗಿ ಅವರು ಹೆಚ್ಚವರಿಯಾಗಿ ಗ್ರಾಹಕರಿಂದ ಪಡೆಯಲು ಅರ್ಹರಲ್ಲ, ನನಗೆ ನ್ಯಾಯ ಕೊಡಿ ಎಂದು ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಎರಡೂ ಕಡೆ ವಾದ ಆಲಿಸಿರುವ ಗ್ರಾಹಕ ವೇದಿಕೆ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ. ಅಂತೂ ತೀರ್ಪು ಏನು ಬರುತ್ತದೆ ಎಂಬುದನ್ನು ಕಾದು ನೋಡಬೇಕು.
ಈ ಹಿಂದೆ ಚಹಾಗೆ ಒಂದು ರೂಪಾಯಿ ಹೆಚ್ಚುವರಿ ಪಡೆದಿದ್ದ ಅಡಿಗಾಸ್ ಹೋಟೆಲ್ ಮೇಲೆ ನರಸಿಂಹಮೂರ್ತಿ ಇದೇ ರೀತಿಯ ಕೇಸು ದಾಖಲಿಸಿ ಪಾಠ ಕಲಿಸಿದ್ದರು. ರಾಷ್ಟ್ರೀಯ ಗ್ರಾಹಕ ವೇದಿಕೆ ನ್ಯಾಯಾಲಯದ ಮೊರೆ ಹೊಗಿದ್ದ ಅಡಿಗಾಸ್ ಗೆ ಮುಖಭಂಗವಾಗಿತ್ತು. ಹೆಚ್ಚುವರಿ ಒಂದು ರೂ. ಪಡೆದ ಅಡಿಗಾಸ್ ವಿರುದ್ಧ ಹೆಚ್ಚುವರಿ ಪಡೆದ ಒಂದು ರೂ. ಜತೆಗೆ ಐದು ಸಾವಿರ ರೂಪಾಯಿ ದಂಡ ವಿಧಿಸಿ ಆ ದಂಡದ ಮೊತ್ತವನ್ನು ವಕೀಲರಾದ ನರಸಿಂಹಮೂರ್ತಿ ಅವರಿಗೆ ನೀಡಲು ನ್ಯಾಯಾಲಯ ಆದೇಶಿಸಿತ್ತು. ಎಂಫೈರ್ ಹೋಟೆಲ್ ವಿರುದ್ಧದ 40 ಪೈಸೆ ಸಮರ ಎಲ್ಲಿ ಬಂದು ನಿಲ್ಲುತ್ತೋ ಕಾದು ನೋಡಬೇಕು.
ಹೋಟೆಲ್ನಲ್ಲಿ ಊಟ ಮಾಡುವಾಗ, ಸೇವೆ ಮಾಡುವ ಸರ್ವೆಂಟ್ಗೆ ಹತ್ತು ರೂ. ಟಿಪ್ಸ್ ಕೊಡ್ತೀವಿ ಅದು ಬೇರೆ ವಿಚಾರ. ಆದರೆ ತೆರಿಗೆ ಜತೆಗೆ ಹೆಚ್ಚುವರಿ ಪೈಸೆಗಳ ಲೆಕ್ಕದಲ್ಲಿ ಹೋಟೆಲ್ಗಳು ಹೆಚ್ಚುವರಿ ಹಣ ಪಡೆಯುವುದು ತಪ್ಪು ಅಲ್ಲವೇ ? ಒಂದು ವರ್ಷಕ್ಕೆ ಎಷ್ಟು ಹಣ ಅನಾಯಸವಾಗಿ ಜನ ಕೊಟ್ಟು ಬರ್ತಾರೆ. ಇದರ ಬಗ್ಗೆ ಜನರಿಗೆ ತಿಳವಳಿಕೆ ಅಗತ್ಯ. ಜತೆಗೆ ಹೋಟೆಲ್ ನವರು ಐದು ಪೈಸೆ ಕೂಡ ಹೆಚ್ಚುವರಿ ಪಡೆಯಬಾರದು ಎಂಬುದು ನನ್ನ ಉದ್ದೇಶ. ಹೀಗಾಗಿ ಎಂಫೈರ್ ಹೋಟೆಲ್ ವಿರುದ್ಧ 40 ಪೈಸೆಗಾಗಿ ಕೇಸುಹಾಕಿದ್ದೇನೆ ಎಂದು ವಕೀಲ ನರಸಿಂಹಮೂರ್ತಿ ಒನ್ ಇಂಡಿಯಾ ಕನ್ನಡಕ್ಕೆ ಸ್ಪಷ್ಟನೆ ನೀಡಿದ್ದಾರೆ.