ಅಂಗಡಿಯಲ್ಲಿ ನಿತ್ಕೊಂಡು ಹೊಗೆ ಬಿಡ್ಬೇಡಿ: ಜು1ರಿಂದ ಕಟ್ಟುನಿಟ್ಟಿನ ಆದೇಶ
ಜುಲೈ ಒಂದರಿಂದ ಅಂಗಡಿಯ ಬಳಿ ನಿಂತು ಧೂಮಪಾನ ಮಾಡುವಂತಿಲ್ಲ. ಬೀಡಿ, ಸಿಗರೇಟು ಸೇದುವವರು ಮತ್ತು ಮಾರುವವರನ್ನು ಸಮನಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ, ಆದೇಶ ಪಾಲಿಸದಿದ್ದರೆ ಇಬ್ಬರಿಗೂ ದಂಡ ವಿಧಿಸಲು ನಿರ್ಧರಿಸಿದೆ.
ಬೆಂಗಳೂರು, ಜುಲೈ 1: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿ ಸರ್ವೋಚ್ಚ ನ್ಯಾಯಾಲಯ ಈ ಹಿಂದೆಯೇ ಆದೇಶ ನೀಡಿದ್ದರೂ ಅದು ಪರಿಣಾಮಕಾರಿಯಾಗಿ ಪಾಲನೆಯಾಗುತ್ತಿರಲಿಲ್ಲ, ಈಗ ಪೊಲೀಸ್ ಇಲಾಖೆ ಈ ಸಂಬಂಧ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಜುಲೈ ಒಂದರಿಂದ ಅನ್ವಯವಾಗುವಂತೆ ಜಿಎಸ್ಟಿ, ಮತ್ತು ಹೆದ್ದಾರಿಗಳಲ್ಲಿ ಮದ್ಯ ಬಂದ್ ಎನ್ನುವ ಎರಡು ಮಹತ್ವದ ಕಾನೂನನ್ನು ಕೇಂದ್ರ ಸರಕಾರ ಜಾರಿಗೆ ಬಂದಿದೆ. ಈಗ, ಜುಲೈ ಒಂದರಿಂದ ಅಂಗಡಿಯ ಬಳಿ ನಿಂತೂ ಧೂಮಪಾನ ಮಾಡುವಂತಿಲ್ಲ.
ಮನುಕುಲಕ್ಕೆ ಮಾರಕವಾದ ತಂಬಾಕು ತ್ಯಜಿಸಲು ಈ ದಿನ ಸಕಾಲ
ಬೀಡಿ, ಸಿಗರೇಟು ಸೇದುವವರು ಮತ್ತು ಮಾರುವವರನ್ನು ಸಮನಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ, ಆದೇಶ ಪಾಲಿಸದಿದ್ದರೆ ಇಬ್ಬರಿಗೂ ದಂಡ ವಿಧಿಸಲು ನಿರ್ಧರಿಸಿದೆ. ಎಚ್ಚರಿಕೆ ಸಂದೇಶ ಸಾರುವ ಬ್ಯಾನರುಗಳು ಬೆಂಗಳೂರಿನ ಅಂಗಡಿ ಮುಂಗಟ್ಟುಗಳ ಮುಂದೆ ರಾರಾಜಿಸುತ್ತಿವೆ.
ಸಣ್ಣಪುಟ್ಟ ವ್ಯಾಪಾರಿಗಳಿಗೆ ಜಿಎಸ್ಟಿ ಬಿಸಿತಟ್ಟದಿದ್ದರೂ, ಪೊಲೀಸ್ ಇಲಾಖೆಯ ಈ ಆದೇಶ ಮಾತ್ರ ಸರಿಬಿಸಿಮುಟ್ಟಿಸಿದೆ. ಜೊತೆಗೆ, ದುಶ್ಚಟ ಅಂಟಿಸಿಕೊಂಡಿರುವವರು ಮನಬಂದಲ್ಲಿ ಇನ್ನು ಮುಂದೆ ಹೊಗೆ ಬಿಡುವಂತಿಲ್ಲ.
ಅಯಾಯ ಠಾಣೆಯ ಪೊಲೀಸರು ಈಗಾಗಲೇ ಪ್ರಮುಖವಾಗಿ ಹೋಟೆಲ್ ಬಳಿಯಿರುವ ಅಂಗಡಿ, ಕಾಂಡಿಮೆಂಟ್ಸ್, ಚಿಲ್ಲರೆ ಅಂಗಡಿಯ ಮಾಲೀಕರಿಗೆ ಎರಡು ದಿನಗಳಿಂದ ಈ ಬಗ್ಗೆ ಎಚ್ಚರಿಕೆ ನೀಡುತ್ತಾ ಬರುತ್ತಿದ್ದಾರೆ.
ಪೊಲೀಸ್ ಇಲಾಖೆ ಹೊರಡಿಸಿರುವ ಕೆಲವೊಂದು ಸೂಚನೆಗಳು, ಮುಂದೆ ಓದಿ..
ಬಿಡಿ ಸಿಗರೇಟ್/ಬೀಡಿ ನೀಡುವಂತಿಲ್ಲ.
ಪೊಲೀಸ್ ಇಲಾಖೆಯ ಆದೇಶದ ಪ್ರಕಾರ ಅಂಗಡಿಯವರು ಇನ್ನು ಮುಂದೆ ಬಿಡಿ ಸಿಗರೇಟ್/ಬೀಡಿ ಮಾರುವಂತಿಲ್ಲ. ಗ್ರಾಹಕ ಬೇಕಿದ್ದಲ್ಲಿ ಫುಲ್ ಪ್ಯಾಕ್ ತೆಗೆದುಕೊಳ್ಳಬೇಕು. ದಿನವೊಂದಕ್ಕೆ ನಾಲ್ಕೈದು ಸಿಗರೇಟ್ ಸೇದುವವನು ಒಂದಾ ಸಿಗರೇಟ್ ಚಟದಿಂದ ಮುಕ್ತನಾಗಬೇಕು, ಇಲ್ಲಾಂದ್ರೆ ಪ್ಯಾಕ್ ಸಿಗರೇಟ್ ತೆಗೆದುಕೊಳ್ಳಬೇಕು.
ತಂಬಾಕು ಪದಾರ್ಥಗಳನ್ನು ಕಾಣಿಸುವಂತೆ ಇಡುವಂತಿಲ್ಲ
ಅಂಗಡಿಯವರು ಸಿಗರೇಟ್, ಬೀಡಿ ಸಹಿತ ತಂಬಾಕು ಪದಾರ್ಥಗಳನ್ನು ಕಣ್ಣಿಗೆ ಕಾಣಿಸದಂತೆ ಇಡುವಂತಿಲ್ಲ, ಯುವ ಜನತೆಯ ಜೊತೆಗೆ ಸಾರ್ವಜನಿಕರು ಈ ಚಟದಿಂದ ದೂರವಾಗಬೇಕು ಎನ್ನುವುದು ಇಲಾಖೆಯ ಉದ್ದೇಶ.
ಸೇದಿದವನಿಗೂ, ಮಾರಿದವನಿಗೂ ಇಬ್ಬರಿಗೂ ದಂಡ
ಅಂಗಡಿ ಬಳಿ ಸಿಗರೇಟು/ಬೀಡಿ ಸೇದಬಾರದು, ತಂಬಾಕು ಪದಾರ್ಥಗಳನ್ನು ಸೇವಿಸಬಾರದು. ಇಲಾಖೆಯ ಆದೇಶ ಉಲ್ಲಂಘಿಸಿದರೆ, ಸೇದಿದವನಿಗೂ, ಮಾರಿದವನಿಗೂ ಇಬ್ಬರಿಗೂ ಇನ್ನೂರು ರೂಪಾಯಿ ಫೈನ್.
ಸಾರ್ವಜನಿಕರೂ ದೂರು ನೀಡಬಹುದು
ಯಾರೇ ಆಗಲಿ ಆದೇಶ ಉಲ್ಲಂಘಿಸಿದ್ದು ಕಂಡು ಬಂದಲ್ಲಿ ಸಾರ್ವಜನಿಕರೂ ಇಲಾಖೆಗೆ ದೂರು ನೀಡಬಹುದು. ಯಾವ ಅಂಗಡಿಯಲ್ಲಿ ಬಿಡಿ ಮಾರಾಟ ಮಾಡಲಾಗುತ್ತಿದೆ, ಯಾವ ಅಂಗಡಿ ಬಳಿ ಜನರು ಧೂಮಪಾನ ಮಾಡುತ್ತಿದ್ದಾರೆಂದು ತಿಳಿಸಿದರೆ, ಇಲಾಖೆಯವರು ಮುಂದಿನ ಕ್ರಮತೆಗೆದುಕೊಳ್ಳುತ್ತಾರೆ.
ಅಂಗಡಿ ಮಾಲೀಕನೇ ತನ್ನ ಗ್ರಾಹಕನಿಗೆ ಹೇಳಬೇಕು
ಅಂಗಡಿಯ ಬಳಿ ನಿಂತು ಧಮ್ ಹೊಡೆಯಬಾರದೆಂದು ಅಂಗಡಿ ಮಾಲೀಕನೇ ತನ್ನ ಗ್ರಾಹಕನಿಗೆ ಹೇಳಬೇಕು. ಬಹುತೇಕ ಚಿಲ್ಲರೆ ಅಂಗಡಿಗಳಿಗೆ ಇಲಾಖೆಯ ಹೊಸ ಆದೇಶ ತಲೆನೋವು ತಂದಿರುವುದು ಒಂದೆಡೆಯಾದರೆ, ವ್ಯಾಪಾರವೂ ತಗ್ಗುವ ಭೀತಿಯಲ್ಲಿದ್ದಾರೆ.