ಕರ್ನಾಟಕ : ಹಳ್ಳ ಹಿಡಿದ ಸ್ಮಾರ್ಟ್ ಸಿಟಿ ಯೋಜನೆ, ಅನುದಾನ ಖರ್ಚಾಗಿಲ್ಲ
ಬೆಂಗಳೂರು, ಜೂನ್ 06 : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆ ಕರ್ನಾಟಕದಲ್ಲಿ ಹಳ್ಳ ಹಿಡಿದಿದೆ. ಹೌದು, ಯೋಜನೆಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ನಿರಾಸಕ್ತಿ ತೋರಿಸಿದ್ದು, ಬಿಡುಗಡೆಗೊಂಡ ಅನುದಾನ ಖಜಾನೆಯಲ್ಲಿಯೇ ಉಳಿದಿದೆ.
ನಗರಾಭಿವೃದ್ಧಿ ಇಲಾಖೆ ನೀಡಿರುವ ಮಾಹಿತಿಯನ್ನು ನೋಡಿದರೆ ಸ್ಮಾರ್ಟ್ ಸಿಟಿ ಯೋಜನೆ ಜಾರಿ ವಿಚಾರದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಎದ್ದುಕಾಣುತ್ತದೆ. ಯೋಜನೆ ಆರಂಭವಾಗಿ 4 ವರ್ಷಗಳು ಕಳೆದರೂ ನಿರೀಕ್ಷಿತ ಮಟ್ಟದಲ್ಲಿ ಸುಧಾರಣೆ ಕಂಡಿಲ್ಲ.
ಸ್ಮಾರ್ಟ್ ಸಿಟಿ ಯೋಜನೆ : ಅನುದಾನ ಬಳಕೆಯಲ್ಲಿ ಕರ್ನಾಟಕ ಹಿಂದೆ
ಕರ್ನಾಟಕ ಸರ್ಕಾರ 4 ವರ್ಷಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿ ಶೇ 10ರಷ್ಟು ಮಾತ್ರ ಪ್ರಗತಿ ಸಾಧಿಸಿದೆ. ಕೇಂದ್ರ ಸರ್ಕಾರದ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿಲ್ಲ. 2018ರ ಬಳಿಕ ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಕಾಮಗಾರಿಗಳು ಚುರುಕಾಗಲಿವೆಯೇ? ಕಾದು ನೋಡಬೇಕು.
ಹೊಸ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ನಮ್ಮ ಬೆಂಗಳೂರು
ಕರ್ನಾಟಕದ 7 ನಗರಗಳನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆ ಮಾಡಲಾಗಿದೆ. ಬೆಳಗಾವಿ, ದಾವಣಗೆರೆ, ಹುಬ್ಳಳ್ಳಿ-ಧಾರವಾಡ, ಮಂಗಳೂರು, ಶಿವಮೊಗ್ಗ, ತುಮಕೂರು ಮತ್ತು ರಾಜ್ಯ ರಾಜಧಾನಿ ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸೇರಿವೆ......
ಸ್ಮಾರ್ಟ್ ಸಿಟಿ ಯೋಜನೆ
ನಗರಾಭಿವೃದ್ಧಿ ಇಲಾಖೆ ನೀಡಿರುವ ಮಾಹಿತಿಯಂತೆ 4 ವರ್ಷಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರ ಸರ್ಕಾರ 6,462 ಕೋಟಿ ಅನುದಾನ ನೀಡಿದೆ. ಇದರಲ್ಲಿ 30.97ರಷ್ಟು ಅನುದಾನವನ್ನು ಮಾತ್ರ ಖರ್ಚು ಮಾಡಲಾಗಿದೆ. ಸರ್ಕಾರ ಯೋಜನೆ ಜಾರಿ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದೆ.
98 ನಗರಗಳ ಪಟ್ಟಿ
ಕೇಂದ್ರ ಸರ್ಕಾರ ಮೊದಲು ಸ್ಮಾರ್ಟ್ ಸಿಟಿ ಯೋಜನೆ ಘೋಷಣೆ ಮಾಡಿದಾಗ 98 ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿತು. ಶಿವಮೊಗ್ಗ, ಮಂಗಳೂರು, ತುಮಕೂರು, ದಾವಣಗೆರೆ, ಹುಬ್ಭಳ್ಳಿ-ಧಾರಡವಾಡ, ಬೆಳಗಾವಿ ನಗರಗಳನ್ನು ಯೋಜನೆಗೆ ಆಯ್ಕೆ ಮಾಡಲಾಗಿತ್ತು. ಕೆಲವು ದಿನಗಳ ಬಳಿಕ ಬೆಂಗಳೂರು ನಗರವನ್ನು ಪಟ್ಟಿಗೆ ಸೇರಿಸಲಾಯಿತು.
ಯಾವುದಕ್ಕೆ ಎಷ್ಟು ಖರ್ಚು?
ಬೆಳಗಾವಿ ನಗರಕ್ಕೆ 14.41 ಕೋಟಿ, ಬೆಂಗಳೂರು ನಗರಕ್ಕೆ 3.79 ಕೋಟಿ ಹಣವನ್ನು ಖರ್ಚು ಮಾಡಲಾಗಿದೆ. ಕಚೇರಿ ಮತ್ತು ಆಡಳಿತಾತ್ಮಕ ವೆಚ್ಚಗಳಿಗೆ ರಾಜ್ಯ ಸರ್ಕಾರ ಹೆಚ್ಚು ವೆಚ್ಚಗಳನ್ನು ಮಾಡಿದೆ. ಕೇಂದ್ರ ಸರ್ಕಾರ ನಿರೀಕ್ಷೆ ಮಾಡಿದ ರೀತಿಯಲ್ಲಿ ಯೋಜನೆಗಳು ಕಾರ್ಯರೂಪಕ್ಕೆ ಬಂದಿಲ್ಲ.
ಕರ್ನಾಟಕ ಮಾತ್ರ ಹಿಂದೆ ಬಿದ್ದಿಲ್ಲ
ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನದ ವಿಚಾರದಲ್ಲಿ ಕರ್ನಾಟಕ ಮಾತ್ರ ಹಿಂದೆ ಉಳಿದಿಲ್ಲ. ತಮಿಳುನಾಡು, ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ಪಂಜಾಬ್ ರಾಜ್ಯಗಳು ಸಹ ನಿರೀಕ್ಷಿತ ಸಾಧನೆಯನ್ನು ಮಾಡಿಲ್ಲ.