ಕೆಪಿಸಿಸಿ ಕಚೇರಿಯಲ್ಲಿ ಎಸ್.ಎಂ.ಕೃಷ್ಣ ಭಾವಚಿತ್ರ ತೆರವು, ಪರಂ ಅಸಮಾಧಾನ
ಬೆಂಗಳೂರು, ಸೆಪ್ಟೆಂಬರ್ 17 : ಕೆಪಿಸಿಸಿ ಕಚೇರಿಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಭಾವಚಿತ್ರ ತೆರವುಗೊಳಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿತ್ರ ತೆರವು ಮಾಡಿದ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ವರ್ಣರಂಜಿತ ರಾಜಕಾರಣಿ ಎಸ್ ಎಂ ಕೃಷ್ಣ ನೇಪಥ್ಯಕ್ಕೆ ಸರಿದರೆ?
ಕೆಪಿಸಿಸಿ ಕಚೇರಿಯಲ್ಲಿ ಬೆಂಗಳೂರಿನ ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗಿತ್ತು. ಚಾಮರಾಜಪೇಟೆಯ ಕಾರ್ಯಕರ್ತರಾದ ಸರ್ದಾರ್ ಷರೀಫ್ ಹಾಗೂ ಶಫಿವುಲ್ಲಾ ಇದರಲ್ಲಿ ಪಾಲ್ಗೊಂಡಿದ್ದರು. ಕಚೇರಿಯ ಮೊದಲ ಮಹಡಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ಭಾವಚಿತ್ರಗಳನ್ನು ಸಾಲಾಗಿ ಜೋಡಿಸಲಾಗಿತ್ತು.
ಈ ಚಿತ್ರಗಳ ನಡುವೆ ಇದ್ದ ಎಸ್.ಎಂ.ಕೃಷ್ಣ ಭಾವಚಿತ್ರವನ್ನು ಸರ್ದಾರ್ ಷರೀಫ್ ಹಾಗೂ ಶಫಿವುಲ್ಲಾ ತೆಗೆದು ಪಕ್ಕದ ಕೊಠಡಿಯಲ್ಲಿಟ್ಟಿದ್ದರು. ಎಸ್.ಎಂ.ಕೃಷ್ಣ ಅವರು ಬಿಜೆಪಿ ಸೇರಿರುವ ಕಾರಣ ಅವರ ಚಿತ್ರವನ್ನು ಇಬ್ಬರು ಕಾರ್ಯಕರ್ತರು ತೆಗೆದು ಪಕ್ಕಕ್ಕೆ ಇಟ್ಟಿರಬಹುದು.
ಆದರೆ, ಈ ವಿಚಾರ ತಿಳಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರ ಕಾರ್ಯಕರ್ತರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಭಾವಚಿತ್ರವನ್ನು ಪಕ್ಕದಲ್ಲಿಟ್ಟ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಎಸ್ಎಂ ಕೃಷ್ಣಗೆ ಅವಮಾನ
'ಎಸ್.ಎಂ.ಕೃಷ್ಣ ಅವರು ಪಕ್ಷ ತ್ಯಜಿಸಿರಬಹುದು. ಆದರೆ, ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಕೆಪಿಸಿಸಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದವರು. ಅವರ ಬಗ್ಗೆ ಪಕ್ಷಕ್ಕೆ ಹಿಂದಿನಷ್ಟೇ ಗೌರವವಿದೆ' ಎಂದು ಪರಮೇಶ್ವರ ಹೇಳಿದರು.
ಪರಮೇಶ್ವರ ಅವರ ಅಸಮಾಧಾನದ ಬಳಿಕ ಎಸ್.ಎಂ.ಕೃಷ್ಣ ಅವರ ಭಾವಚಿತ್ರವನ್ನು ತಂದು ಮೊದಲಿದ್ದ ಸ್ಥಳದಲ್ಲಿ ಹಾಕಲಾಯಿತು. ಇಂತಹ ಘಟನೆ ಮತ್ತೆ ನಡೆಯಬಾರದು ಎಂದು ಪರಮೇಶ್ವರ ಅವರು ಸೂಚನೆ ನೀಡಿದ್ದಾರೆ.