ಗೌರಿ ಹಂತಕರ ಲಿಸ್ಟಲ್ಲಿ ಜಾಮದಾರ್, ನಿಜಗುಣಾನಂದ, ನಾಗಮೋಹನ್ ದಾಸ್
Recommended Video
ಬೆಂಗಳೂರು, ಜೂನ್ 14: ಗೌರಿ ಲಂಕೇಶ್ ಹಂತಕರು ಕೇವಲ ಗೌರಿ ಹತ್ಯೆಗೆ ಮಾತ್ರ ಸೀಮಿತವಾಗಿರಲಿಲ್ಲ. ಇನ್ನೂ ಹಲವರ ತಲೆಗೆ ಅವರು ಗುರಿ ಇಟ್ಟಿದ್ದರು ಎಂಬ ಸ್ಪೋಟಕ ಮಾಹಿತಿಗಳು ಹೊರಬರುತ್ತಿವೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತರಾದ ಪರುಶುರಾಮ್ ವಾಲ್ಮೋರೆ, ಸುಜಿತ್ ಅಲಿಯಾಸ್ ಪ್ರವೀಣ್, ಅಮೋಲ್ ಕಾಳೆಯವರ ಬಳಿಯಿದ್ದ ವಸ್ತುಗಳನ್ನುಪೊಲೀಸ್ ಅಧಿಕಾರಿಗಳು ತಪಾಸಣೆ ವೇಳೆ ವಶಕ್ಕೆ ಪಡೆದಿದ್ದು ಈ ಆಘಾತಕಾರಿ ಮಾಹಿತಿಗಳು ಸಿಕ್ಕಿವೆ.
ಗೌರಿ ಕೊಲೆ ಪ್ರಕರಣ: ಪರಶುರಾಮ್ ವಾಗ್ಮೋರೆ ಬೆನ್ನತ್ತಿದ ರೋಚಕ ಕಥೆ
11 ಜನರ ಹತ್ಯೆಗೆ ಸ್ಕೆಚ್
ಆರೋಪಿಗಳ ಬಳಿಯಿಂದ ವಶಕ್ಕೆ ಪಡೆದುಕೊಂಡ ಪುಸ್ತಕ, ಡೈರಿಗಳಲ್ಲಿ ಒಟ್ಟು 11 ಜನರ ಹೆಸರುಗಳಿತ್ತು ಎಂದು ತಿಳಿದು ಬಂದಿದೆ. ಇವರಲ್ಲಿ ಮೂರು ಜನರ ಹೆಸರನ್ನು ಪ್ರತ್ಯೇಕವಾಗಿ ಅಂತಿಮಗೊಳಿಸಲಾಗಿತ್ತು.
ಅವರು ಮತ್ಯಾರೂ ಅಲ್ಲ. ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ. ಜಾಮದಾರ್, ನಿಜಗುಣಾನಂದ ಸ್ವಾಮೀಜಿ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್. ಇವರೆಲ್ಲಾ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಬೇರೆ ಬೇರೆ ರೀತಿಯಲ್ಲಿ ತೊಡಗಿಸಿಕೊಂಡಿದ್ದರು ಎಂಬುದು ಗಮನಾರ್ಹ.
ಈ ನಾಯಕರ ಭಾಷಣಗಳು ಆರೋಪಿಗಳ ಬಳಿ ಸಿಕ್ಕಿವೆ ಎನ್ನಲಾಗಿದೆ. ಜೊತೆಗೆ ನಿಜಗುಣಾನಂದ ಸ್ವಾಮೀಜಿಯವರ ಬಗ್ಗೆ ವಿವರಗಳನ್ನೂ ಕಲೆ ಹಾಕಿದ್ದರು. ಅವರು ಸಂಚರಿಸುವ ಕಾರಿನ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿದ್ದರು ಎಂದು ತಿಳಿದು ಬಂದಿದೆ.
ಈ ಮೂವರಲ್ಲದೆ ಮೈಸೂರು ವಿವಿ ಪ್ರಧ್ಯಾಪಕ ಮಹೇಶ್ ಚಂದ್ರ ಗುರು ಅವರ ಹೆಸರುಗಳು ಈ ಪಟ್ಟಿಯಲ್ಲಿದ್ದವು ಎಂದು ಪೊಲೀಸರು ಮೂಲಗಳು ಹೇಳಿವೆ. ಹೀಗಾಗಿ ಇವರಿಗೆಲ್ಲಾ ಎಚ್ಚರಿಕೆಯಲ್ಲಿರುವಂತೆ ಸೂಚನೆ ನೀಡಲಾಗಿದೆ. ಮಹೇಶ್ ಚಂದ್ರ ಗುರು ಅವರಿಗೆ ಇದೀಗ ಪೊಲೀಸ್ ಭದ್ರತೆಯೂ ನೀಡಲಾಗಿದೆ.
ಹಿಟ್ ಲಿಸ್ಟ್ ನಲ್ಲಿದ್ದವರ ಕಥೆ ಹೀಗಾದರೆ ಸದಾ ವಿವಾದಗಳ ತರಂಗಗಳನ್ನು ಎಬ್ಬಿಸುವ ಸಾಹಿತಿ ಕೆ.ಎಸ್. ಭಗವಾನ್ ಹತ್ಯೆಗೆ ತಂಡ ಅಂತಿಮ ತಯಾರಿಯನ್ನೇ ನಡೆಸಿತ್ತು. ವಿಧಾನಸಭೆ ಚುನಾವಣೆ ಮುನ್ನವೇ ಭಗವಾನ್ ಕತೆ ಮುಗಿಸಲು ಹಂತಕರು ಸಿದ್ಧರಾಗಿದ್ದರು ಎಂದು ಗೊತ್ತಾಗಿದೆ.