ಅನ್ನಭಾಗ್ಯ ಯೋಜನೆ : ಭೈರಪ್ಪ ಮಾತಿಗೆ ಯಾರು, ಏನು ಹೇಳಿದರು?
ಬೆಂಗಳೂರು, ಜೂ. 15 : 'ಕರ್ನಾಟಕ ಸರ್ಕಾರ ಅನ್ನಭಾಗ್ಯ, ಶಾದಿಭಾಗ್ಯದಂತಹ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನರನ್ನು ಸೋಮಾರಿಗಳನ್ನಾಗಿಸುತ್ತಿದೆ. ಜನ ಸೋಮಾರಿಗಳಾದರೆ ಯಾವುದೇ ದೇಶ ಉದ್ಧಾರವಾಗಲು ಸಾಧ್ಯವೇ ಇಲ್ಲ' ಎಂಬ ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಹೇಳಿಕೆ ಈಗ ಚರ್ಚೆ ಹುಟ್ಟು ಹಾಕಿದೆ.
ಎಸ್.ಎಲ್.ಭೈರಪ್ಪ ಅವರ ಮಾತಿಗೆ ಸಾಹಿತಿ ಕುಂ.ವೀರಭದ್ರಪ್ಪ ಸಹಮತ ವ್ಯಕ್ತಪಡಿಸಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿರುವ ಅವರು, 'ರಾಜ್ಯ ಸರ್ಕಾರದ ಭಾಗ್ಯ ಯೋಜನೆಗಳು ಉತ್ತಮ ಆಡಳಿತದ ಲಕ್ಷಣವಲ್ಲ, ಅನ್ನ ಸಿಗಲಾರದಷ್ಟು ಬಡತನ ನಮ್ಮ ರಾಜ್ಯದಲ್ಲಿಲ್ಲ' ಎಂದು ಹೇಳಿದ್ದಾರೆ. [ದುಬೈ ಕುರಿಗಾಹಿಯನ್ನು ಹುಟ್ಟೂರಿಗೆ ಕರೆ ತಂದ ಅನ್ನಭಾಗ್ಯ]
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, 'ಬೆವರು ಸುರಿಸದವರೇ ಇಂದು ಅನ್ನಭಾಗ್ಯ ಯೋಜನೆ ಬಗ್ಗೆ ಕೊಂಕು ನುಡಿಗಳನ್ನಾಡುತ್ತಿದ್ದಾರೆ. ಯಾರು ಬಡತನ, ಹಸಿವನ್ನು ಅನುಭವಿಸಿದ್ದಾರೋ ಅವರಿಗೆ ಅನ್ನದ ಮಹತ್ವ ಗೊತ್ತು ಎಂದು ತಿರುಗೇಟು' ನೀಡಿದ್ದಾರೆ. [ಸಿಎಂ ಸಿದ್ರಾಮಣ್ಣನ ಅನ್ನಭಾಗ್ಯ ಸ್ಕೀಂನಲ್ಲಿ ಉಂಡವನೇ ಜಾಣ]
ಶನಿವಾರ ಚಿಕ್ಕಮಗಳೂರಿನಲ್ಲಿ ಮಾತನಾಡಿದ್ದ ಎಸ್.ಎಲ್.ಭೈರಪ್ಪ ಅವರು, 'ಅನ್ನಭಾಗ್ಯದಂತಹ ಯೋಜನೆಗಳಿಂದ ಜನ ಸ್ವಾವಲಂಬಿಗಳಾಗಿ ಬದುಕಲು ಸಾಧ್ಯವಿಲ್ಲ. ಉಚಿತ ಅಕ್ಕಿ ಪಡೆಯುವ ಬಹುತೇಕ ಜನ ಅದನ್ನು 10 ರೂ.ಗೆ ಅಂಗಡಿ, ಹೋಟೆಲ್ಗಳಿಗೆ ಮಾರಾಟ ಮಾಡುತ್ತಿದ್ದಾರೆ' ಎಂದು ಹೇಳಿಕೆ ನೀಡಿದ್ದರು. ಅನ್ನಭಾಗ್ಯದ ಬಗ್ಗೆ ಯಾರು, ಏನು ಹೇಳಿದರೂ ನೋಡೋಣ ಬನ್ನಿ...
ಎಲ್.ಎಲ್.ಭೈರಪ್ಪ ಹೇಳಿದ್ದೇನು?
'ಅನ್ನಭಾಗ್ಯದಂತಹ ಯೋಜನೆಗಳಿಂದ ಜನ ಸ್ವಾವಲಂಬಿಗಳಾಗಿ ಬದುಕಲು ಸಾಧ್ಯವಿಲ್ಲ. ಉಚಿತ ಅಕ್ಕಿ ಪಡೆಯುವ ಬಹುತೇಕ ಜನ ಅದನ್ನು 10 ರೂ.ಗೆ ಅಂಗಡಿ, ಹೋಟೆಲ್ಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇದರ ಬದಲು ಕಾರ್ಖಾನೆಗಳನ್ನು ತೆರೆಯುವ ಮೂಲಕ ಉದ್ಯೋಗ ಸೃಷ್ಟಿಸುವ ಕೆಲಸವನ್ನು ಸರ್ಕಾರ ಮಾಡಲಿ' ಎಂದು ಎಲ್.ಎಲ್.ಭೈರಪ್ಪ ಅವರು ಶನಿವಾರ ಹೇಳಿದ್ದರು.
'ಭಾಗ್ಯ ಯೋಜನೆಗಳು ಉತ್ತಮ ಆಡಳಿತದ ಲಕ್ಷಣವಲ್ಲ'
ಎಸ್.ಎಲ್.ಭೈರಪ್ಪ ಅವರ ಮಾತಿಗೆ ಸಾಹಿತಿ ಕುಂ.ವೀರಭದ್ರಪ್ಪ ಅವರು ಸಹಮತ ವ್ಯಕ್ತಪಡಿಸಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿರುವ ಅವರು, 'ರಾಜ್ಯ ಸರ್ಕಾರದ ಭಾಗ್ಯ ಯೋಜನೆಗಳು ಉತ್ತಮ ಆಡಳಿತದ ಲಕ್ಷಣವಲ್ಲ, ಅನ್ನ ಸಿಗಲಾರದಷ್ಟು ಬಡತನ ನಮ್ಮ ರಾಜ್ಯದಲ್ಲಿಲ್ಲ. ಭಾಗ್ಯದ ಹಿಂದೆ ಓಡುತ್ತಿರುವ ಸಿಎಂ ಮುಂದೆ ಬರುವವರಿಗೆ ಏನನ್ನೂ ಉಳಿಸುವಂತೆ ಕಾಣುತ್ತಿಲ್ಲ' ಎಂದು ಹೇಳಿದ್ದಾರೆ.
'ಇವರ ಟೀಕೆಗೆ ತಲೆಕೆಡಿಸಿಕೊಳ್ಳುವುದಿಲ್ಲ'
ಅನ್ನಭಾಗ್ಯ ಯೋಜನೆ ಬಗ್ಗೆ ಎದ್ದಿರುವ ಚರ್ಚೆಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಯಾರು ಬಡತನ ಹಸಿವನ್ನು ಅನುಭವಿಸಿದ್ದಾರೋ? ಅವರಿಗೆ ಅನ್ನದ ಮಹತ್ವ ಗೊತ್ತೇ ಹೊರತು, ಹಸಿವಿನ ಅನುಭವವಿಲ್ಲದವರಿಗಲ್ಲ. ಬೆವರು ಸುರಿಸದವರೇ ಇಂದು ಅನ್ನಭಾಗ್ಯ ಯೋಜನೆ ಬಗ್ಗೆ ಕೊಂಕು ನುಡಿಗಳನ್ನಾಡುತ್ತಿದ್ದಾರೆ' ಇವರ ಟೀಕೆಗೆ ತಲೆಕೆಡಿಸಿಕೊಳ್ಳುವುದಿಲ್ಲ' ಎಂದು ಖಡಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
'ಭೈರಪ್ಪ ಅವರ ಅಭಿಪ್ರಾಯ ವೈಯಕ್ತಿಕವಾದದ್ದು'
'ಅನ್ನಭಾಗ್ಯ, ಕ್ಷೀರಭಾಗ್ಯಗಳು ಸಮಾಜಕ್ಕೆ ಅವಶ್ಯ, ಅತ್ಯಂತ ಕಡುಬಡತನದಲ್ಲಿರುವವರ ಸಹಾಯಕ್ಕಾಗಿ ಯೋಜನೆ ಜಾರಿಗೊಳಿಸಲಾಗಿದೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಸಾಹಿತಿ ಎಸ್.ಎಲ್.ಭೈರಪ್ಪ ಅವರ ಅಭಿಪ್ರಾಯ ವೈಯಕ್ತಿಕವಷ್ಟೇ' ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಪ್ರತಿಕ್ರಿಯೆ ಕೊಟ್ಟಿದ್ದಾರೆ.
'ಅನ್ನಭಾಗ್ಯ' ಹುಟ್ಟು ಹಾಕಿದ ಎಸ್.ಎಲ್.ಭೈರಪ್ಪ
'ಹಸಿವು ಗೊತ್ತಿದ್ದರೆ ಭೈರಪ್ಪ ಅನ್ನಭಾಗ್ಯ ಟೀಕಿಸುತ್ತಿರಲಿಲ್ಲ. ಬಡವರ ಹಸಿವಿನ ಬಗ್ಗೆ ಅರಿವು ಇಲ್ಲದ ಸಾಹಿತಿ ಎಸ್.ಎಲ್ ಭೈರಪ್ಪ ಅವರಿಗೆ ಅನ್ನಭಾಗ್ಯ ಯೋಜನೆಯನ್ನು ಟೀಕಿಸುವ ನೈತಿಕತೆ ಇಲ್ಲ' ಎಂಬ ತಿಳುವಳಿಕೆಯನ್ನು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ನೀಡಿದ್ದಾರೆ. ಆಂಜನೇಯ ಅವರಲ್ಲಿ ಒಂದು ಮನವಿ. ಭೈರಪ್ಪನವರ ಆತ್ಮಕಥೆ 'ಭಿತ್ತಿ" ಒಮ್ಮೆ ಓದಿ. ನಂತರ ಅವರ ನೈತಿಕತೆ ಬಗ್ಗೆ ಮಾತನಾಡುವ ಅರ್ಹತೆ ಸಂಪಾದಿಸಿ' ಎಂದು ಬಿಜೆಪಿ ನಾಯಕ ಸುರೇಶ್ ಕುಮಾರ್ ಫೇಸ್ಬುಕ್ ಪುಟದಲ್ಲಿ ಬರೆದಿದ್ದಾರೆ.