ಪ್ರಶಸ್ತಿ ಹಿಂದಿರುಗಿಸುತ್ತಿರುವ ನಾಡಿನ ಸಾಹಿತಿಗಳಿಗೆ 6 ಪ್ರಶ್ನೆಗಳು
ನಾಡಿನ ಹಿರಿಯ ಸಂಶೋಧಕ ಎಂ ಎಂ ಕಲಬರ್ಗಿ ಹತ್ಯೆಯ ಹಿನ್ನೆಲೆ/ತನಿಖೆ ವಿಚಾರದಲ್ಲಿ ಸರಕಾರ ನಿರ್ಲಕ್ಷ್ಯವಹಿಸುತ್ತಿದೆ, ಹಂತಕರನ್ನು ಪತ್ತೆಹಚ್ಚುವಲ್ಲಿ ಸರಕಾರ ವಿಫಲವಾಗಿದೆ ಎಂದು ಸಾಹಿತಿಗಳು ತಮಗೆ ಸಂದ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದಾರೆ. ಸಮೂಹಸನ್ನಿ ಹೀಗೂ ಇರುತ್ತದಾ!
ಕಲಬುರ್ಗಿಯವರ ಸಾವು ದೇಶಕ್ಕಾದ ಬಹುದೊಡ್ಡ ನಷ್ಟ. ಇಂತಹ ಸುಪ್ರಸಿದ್ದ ಸಾಹಿತಿಗೇ ಹೀಗಾದರೆ, ಜನಸಾಮಾನ್ಯರ ಪಾಡೇನು ಎನ್ನುವ ಸಾರ್ವಜನಿಕರ ಭಯಕ್ಕೆ ರಾಜ್ಯ ಸರಕಾರ ಮಾತ್ರ ಉತ್ತರ ನೀಡಲು ಸಾಧ್ಯ. ಇಲ್ಲಿ ಭಯಗಳು, ಆತಂಕಗಳು ಇರುತ್ತವೆಯೇ ವಿನಾ, ಉತ್ತರಗಳು ಸಿಕ್ಕುವುದೇ ಇಲ್ಲ.
ಕಲಬುರ್ಗಿಯವರ ಹಂತಕರನ್ನು ಪತ್ತೆಹಚ್ಚುವಲ್ಲಿ ಸರಕಾರ ಹಿನ್ನಡೆ ಅನುಭವಿಸುತ್ತಿರುವುದಕ್ಕೆ ಚಂದ್ರಶೇಖರ ಪಾಟೀಲ್ (ಚಂಪಾ) ಮೊದಲು ಪ್ರಶಸ್ತಿ ಹಿಂದಿರುಗಿಸಿ ಪ್ರತಿಭಟನೆಗೆ ನಾಂದಿ ಹಾಡಿದರು. ಪ್ರಶಸ್ತಿ ಹಿಂದಿರುಗಿಸುವ ಮೂಲಕ ನಡೆಯುತ್ತಿರುವ ಪ್ರತಿಭಟನೆಗೆ ಸಾಹಿತಿಗಳಿಂದ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. (ಕಲಬುರ್ಗಿ ಹತ್ಯೆ: ಪೊಲೀಸರ ಹಿನ್ನಡೆಗೆ ಕಾರಣ ಏನಿರಬಹುದು)
ಸಾಮಾಜಿಕ ತಾಣದಲ್ಲಿ ಈ ವಿಚಾರದ ಬಗ್ಗೆ ಪರ, ವಿರೋಧ ವಾಗ್ಯುದ್ದಗಳು ಅವಶ್ಯಕತೆಗಿಂತ ಹೆಚ್ಚೇ ನಡೆಯುತ್ತಿದೆ. ಕಲಬುರ್ಗಿಯವರ ಹಂತಕರು ಯಾರು ಎನ್ನುವ ಕರಾರುವಕ್ಕಾದ ಮಾಹಿತಿ ಸಿಐಡಿ ಅಧಿಕಾರಿಗಳಿಗೇ ಅಂತಿಮವಾಗದಿರುವ ಈ ಸಮಯದಲ್ಲಿ ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗಳು, ಕೋಪತಾಪಗಳು ವೃಥಾ ಕಾಲಹರಣ ಎನ್ನೋಣವೇ? ನೊನೊ! ಘೋಡಾ ಹೈ, ಮೈದಾನ್ ಹೈ!
ಪ್ರಶಸ್ತಿ ಹಿಂದಿರುಗಿಸುವ ನಿರ್ಧಾರ ಅವರವರ ವೈಯಕ್ತಿಕ ವಿಚಾರ, ಈ ಮೂಲಕ ಸರಕಾರಕ್ಕೆ ಬಿಸಿಮುಟ್ಟಿಸುವ ಸದುದ್ದೇಶ ಇದ್ದರೂ, " ಹಿಂತಿರುಗಿಸುವ ಚಳವಳಿ" ಹಲವು ಅನುಮಾನಗಳಿಗೆ ಅವಕಾಶ ಮಾಡಿಕೊಟ್ಟಿರುವುದಂತೂ ನಿಜ. (ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸಿದವರ ಪಟ್ಟಿ)
ಯಾರ ಸಾವೇ ಆಗಿರಲಿ, ಸಾವು ಸಾವೇ. ಎಲ್ಲರ ರಕ್ತವೂ ಕೆಂಪೇ, ಅದಕ್ಕೆ ಕೋಮು ಬಣ್ಣ ಬಂದಿರುವುದೇ ಇಲ್ಲಾಗಿರುವ ದುರಂತ. ಪ್ರತಿಭಟನೆಯ ಹಿಂದೆ ಪ್ರತಿಫಲದ ನಿರೀಕ್ಷೆಯ ಹೋರಾಟ ಕ್ಷಣಿಕ, ಶಾಶ್ವತವಲ್ಲ. ಮುಂದಿನ ಪೀಳಿಗೆಗಳಿಗೆ ಇದು ಮಾದರಿ ಆಗುವುದಿಲ್ಲ.
ಯಾವ ಪಂಥಕ್ಕೂ ಸೇರದೇ ಪ್ರಶಸ್ತಿ ಹಿಂದಿರುಗಿಸುತ್ತಿರುವ ಸಾಹಿತಿಗಳಿಗೆ ಕೆಲವೊಂದು ನಿಯತ್ತಿನ ಪ್ರಶ್ನೆಗಳು..
ಪ್ರಶಸ್ತಿಗೆ ಅಗೌರವ ಮಾಡಿದಂತಾಗುವುದಿಲ್ಲವೇ?
ನಾಡಿಗಾಗಿ ಸೇವೆ ಸಲ್ಲಿಸಿದ ಹಲವು ಗಣ್ಯರ, ದಾರ್ಶನಿಕರ ಹೆಸರಿನಲ್ಲಿ ನೀಡುವ ಪ್ರಶಸ್ತಿಗೆ ಬೆಲೆಯಿಲ್ಲವೇ? ಪ್ರಶಸ್ತಿ ಹಿಂದಿರುಗಿಸುವ ಮೂಲಕ ಮಹಾನುಭಾವರ ಹೆಸರಿಗೆ ಅವಮಾನ ಮಾಡಿದಂತಾಗುವುದಿಲ್ಲವೇ? ಪ್ರಶಸ್ತಿ ಹಿಂದಿರುಗಿಸುವ ಬದಲು ಚಂದ್ರಶೇಖರ ಕಂಬಾರರು ಹೇಳಿದಂತೆ ಸಾಹಿತ್ಯ ಅಕಾಡೆಮಿಗೆ ಸಾಮೂಹಿಕ ರಾಜೀನಾಮೆ ನೀಡಿ ಪ್ರತಿಭಟನೆ ಸಲ್ಲಿಸಬಹುದಿತ್ತಲ್ಲವೇ?
ಅನ್ನದಾತರ ಸಾವು ನಿಮಗೆ ಲೆಕ್ಕಕ್ಕಿಲ್ಲವೇ?
ಸಾಲ, ಬರಪರಿಹಾರ, ಕೈಕೊಟ್ಟ ಫಸಲು, ಅನಾವೃಷ್ಟಿ, ಬೆಂಬಲ ಬೆಲೆ ಹೀಗೆ ಹಲವಾರು ಕಾರಣಗಳಿಂದ ದೇಶದಲ್ಲಿ ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ರೈತನ ಸಾವಿನ ವಿಚಾರದಲ್ಲಿ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದೆ. ರಾಜ್ಯವೊಂದರಲ್ಲೇ ಸುಮಾರು 550ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ. ರೈತರ ಸಾವಿನ ವಿಷಯದಲ್ಲಿನ ರಾಜಕೀಯದಿಂದಾಗಿ ಬೇಸತ್ತು ಪ್ರಶಸ್ತಿ ಹಿಂದಿರುಗಿಸುವ ಯೋಚನೆ ಸಾಹಿತಿಗಳಿಗ್ಯಾಕೆ ಬಂದಿರಲಿಲ್ಲ?
ಕಳಸಾ ಬಂಡೂರಿ, ಕಾವೇರಿ ವಿವಾದ
ಕಳಸಾ ಬಂಡೂರಿ ಯೋಜನೆ ರಾಜ್ಯದ ಮೂರು ಜಿಲ್ಲೆಗಳಿಗೆ ಮತ್ತು ಕಾವೇರಿ ನದಿನೀರು ರಾಜ್ಯದ ಐದು ಜಿಲ್ಲೆಗಳ ಜೀವಾಳ. ಈ ಯೋಜನೆ ಮತ್ತು ನೀರು ಹಂಚಿಕೆ ವಿವಾದ ಇಂದು ನಿನ್ನೆಯದಲ್ಲ, ಈ ಭಾಗದ ಜನರು ಇದನ್ನೇ ಅವಲಂಬಿಸಿಕೊಂಡಿದ್ದಾರೆ including ಬೆಂಗಳೂರು. ಕೇಂದ್ರದಲ್ಲಿ, ರಾಜ್ಯದಲ್ಲಿ ಯಾವುದೇ ಸರಕಾರವಿರಲಿ, ರಾಜಕೀಯ ಮೇಲಾಟದಿಂದ ರಾಜ್ಯಕ್ಕೆ ಹಿನ್ನಡೆ ಆಗುತ್ತಲೇ ಇದೆ. ಜನರ ದೈನಂದಿನ ಜೀವನದ ಪ್ರಶ್ನೆ ಸ್ವಾಮಿ ಇದು. ಈ ಎರಡು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಬೇಕೆಂದು ಒತ್ತಾಯಿಸಿ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಪ್ರಶಸ್ತಿ ಹಿಂದಿರುಗಿಸುವ ಮೂಲಕ ಬಿಸಿಮುಟ್ಟಿಸುವ ಕೆಲಸ ನಿಮ್ಮಿಂದ ಯಾಕಾಗಿಲ್ಲಾ?
ಅತ್ಯಾಚಾರದ ಬಗ್ಗೆ?
ಇಡೀ ಮಾನವ ಸಮಾಜವೇ ತಲೆತಗ್ಗಿಸುವಂತಹ ಅತ್ಯಾಚಾರ ಪ್ರಕರಣಗಳು ದೇಶದಲ್ಲಿ ನಡೆಯುತ್ತಿದೆ. ಕಂದಮ್ಮಗಳ ಮೇಲೆ, ಮಹಿಳೆಯರು, ವೃದ್ದೆಯರು, ಲಿಂಗಬೇಧವಿಲ್ಲದೇ ಅತ್ಯಾಚಾರದ ಘಟನೆಗಳು ವರದಿಯಾಗುತ್ತಲೇ ಇದೆ. ಗೃಹ ಸಚಿವರೇ ಏನು ಕೆಲಸ ಮಾಡುತ್ತಿದ್ದೀರಾ? ಎಂದು ಪ್ರಶಸ್ತಿ ಹಿಂದಿರುಗಿಸುವ ಕೆಲಸಕ್ಕೆ ಮುಂದಾಗಿದ್ದರೆ ಅದರೆ ತೂಕವೇ ಬೇರೆ ಇರುತ್ತಿತ್ತು, ಅಲ್ವಾ ಸಾಹಿತಿಗಳೇ?
ಒಂದು ಕೋಮಿಗೆ ಸೀಮಿತವಾಗದಿರಲಿ
ಪ್ರಶಸ್ತಿ ಹಿಂದಿರುಗಿಸುತ್ತಿರುವವರ ಪಟ್ಟಿ ಬೆಳೆಯುತ್ತಿರುವುದು ಯಾವುದಾದರೂ ಪಕ್ಷ ಅಧಿಕಾರದಲ್ಲಿ ಇರುವ ಅವಧಿಗೆ ಮಾತ್ರ ಸೀಮಿತವಾಗಿದೆಯೋ ಹೇಗೆ?. ಕಲಬುರ್ಗಿ, ದಾದ್ರಿ ಘಟನೆ ಖಂಡನಾರ್ಹ, ಇದಕ್ಕೆ ಬೇಸರಿಸಿ ಪ್ರಶಸ್ತಿ ಹಿಂದಿರುಗಿಸುತ್ತಿರುವುದಾದರೆ, ಕೇರಳದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರ ಮೇಲೆ ಅನಾಮತ್ತಾಗಿ ಮುಂದುವರಿಯುತ್ತಿರುವ ಹತ್ಯೆ ಮತ್ತು ಬಂಟ್ವಾಳದಲ್ಲಿ ಅಲ್ಪಸಂಖ್ಯಾತ ಕೋಮಿನವರು ಎನ್ನಲಾಗುವ ವ್ಯಕ್ತಿಗಳು ಹಾಡುಹಗಲೇ ಭಜರಂಗದಳದ ಕಾರ್ಯಕರ್ತನನ್ನು ಹತ್ಯೆ ಮಾಡಿದ್ದಾರಲ್ಲಾ ಅದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಪ್ರಶಸ್ತಿ ಹಿಂದಿರುಗಿಸಲು ಸಾಹಿತಿಗಳೇ ಆಗಬೇಕೇ
ಸಾಹಿತಿಗಳ ಹತ್ಯೆ ಮತ್ತು ಸಾಹಿತಿಗಳ ಮೇಲಾಗುತ್ತಿರುವ ಹತ್ಯೆ ಖಂಡಿಸಿ ದೇಶಾದ್ಯಂತ ಸಾಹಿತಿಗಳು ಸಮರೋಪಾದಿಯಲ್ಲಿ ಪ್ರಶಸ್ತಿ ಹಿಂದಿರುಗಿಸುತ್ತಿದ್ದಾರೆ. ಸೋ, ಪ್ರಶಸ್ತಿ ಹಿಂದಿರುಗಿಸಲು ರೈತರ ಸಾವು, ಮಾನವರ ಸಾವು, ಸಾಮಾಜಿಕ ಶೋಷಣೆ ಲೆಕ್ಕಕ್ಕೆ ಬರುವುದಿಲ್ಲ ಎಂದಾಯಿತು.
ಹಾಗಿದ್ದಲ್ಲಿ, ಬಹುಸಂಖ್ಯಾತರ ಪೂಜಾಪದ್ದತಿ, ದೇವರು, ದಿಂಡ್ರು, ರಾಮ, ಕೃಷ್ಣ, ಗಣೇಶ, ಸೀತೆ, ದ್ರೌಪದಿ, ಭೂತದ ಕಲ್ಲಿನ ಮೇಲೆ ಮೂತ್ರ ಹುಯ್ಯುವುದು.. ಮುಂತಾದ ಅನಾವಶ್ಯಕ ಹೇಳಿಕೆಗಳನ್ನು ನೀಡಿ, ನಿಮ್ಮ ಕೃತಿಯನ್ನು ಓದಿ ನಿಮಗೆ ಬಲ, ಗೌರವ ನೀಡಿದ ಸಾರ್ವಜನಿಕರ ಮುಂದೆ ನಿಮ್ಮ ಸಮರ್ಥಿಸಿಕೊಳ್ಳುವುದಕ್ಕೆ ನಿಮಗೆ ನೈತಿಕ ಹಕ್ಕು ಏನಾದರೂ ಇದೆಯಾ? ನಿಮ್ಮ ಸಮರ್ಥನೆಗೆ ಸಾರ್ವಜನಿಕರು ಸೊಪ್ಪು ಹಾಕಬೇಕೆಂದು ಇದೆಯೇ?