ರಾಜ್ಯದ ಆರು ನಗರಸಭೆ, ಪುರಸಭೆ, ಪಂಚಾಯಿತಿ ಚುನಾವಣೆ: ಸಿದ್ಧತೆಗೆ ಸೂಚನೆ
ಬೆಂಗಳೂರು, ಜನವರಿ 08: ರಾಜ್ಯದ ಆರು ನಗರಸಭೆಗಳಿಗೆ ಚುನಾವಣೆ ನಡೆಸಲು ಸಿದ್ಧತೆ ಆರಂಭಿಸುವಂತೆ ರಾಜ್ಯ ಚುನಾವಣಾ ಆಯೋಗವು ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ತಾಲ್ಲೂಕು ಅಧಿಕಾರಿಗಳಿಗೆ ಸೂಚನೆ ರವಾನಿಸಿದೆ.
ಹೊಸಕೋಟೆ, ಚಿಕ್ಕಬಳ್ಳಾಪುರ, ಹುಣಸೂರು, ಶಿರಗುಪ್ಪ ನಗರಸಭೆ, ಸಿಂಧಗಿ ಪುರಸಭೆ, ತೆಕ್ಕಲಕೋಟೆ ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆಸಬೇಕಿದ್ದು, ಚುನಾವಣೆಗೆ ಸಂಬಂಧಿಸಿದಂತೆ ಸಿದ್ಧತೆ ಆರಂಭಿಸಿರೆಂದು ಸೂಚನೆ ರವಾನೆ ಆಗಿದೆ.
ಹೊಸಕೋಟೆ ನಗರಸಭೆಗೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ, ಹುಣಸೂರಿಗೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾಧಿಕಾರಿ ಹೀಗೆ ಚುನಾವಣೆ ನಡೆಯಲಿರುವ ಕ್ಷೇತ್ರಗಳು ಒಳಪಡುವ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಮತದಾರರ ಪಟ್ಟಿ, ಮತದಾನದ ಕೇಂದ್ರ ಗುರುತಿಸುವಿಕೆ, ವಿದ್ಯುನ್ಮಾನ ಯಂತ್ರ ಸಂಗ್ರಹ, ಚುನಾವಣಾಧಿಕಾರಿಗಳ ನೇಮಕ, ಚುನಾವಣಾ ಸಿಬ್ಬಂದಿ ನೇಮಕ ಮತ್ತು ತರಬೇತಿ ಇನ್ನಿತರೆ ವಿಷಯಗಳ ಬಗ್ಗೆ ಸಿದ್ಧತೆ ಆರಂಭಿಸಿರೆಂದು ಹೇಳಲಾಗಿದೆ.
ನಗರಸಭೆಗಳಿಗೆ ಉಪವಿಭಾಗಾಧಿಕಾರಿ ಹುದ್ದೆಗೆ ಸರಿಸಮನಾದ ಹುದ್ದೆಯ ಅಧಿಕಾರಿಯನ್ನು ಚುನಾವಣೆಯ ರಿಟರ್ನಿಂಗ್ ಅಧಿಕಾರಿಯಾಗಿ, ಪುರಸಭೆ, ಪಟ್ಟಣ ಪಂಚಾಯ್ತಿಗಳಿಗೆ ತಹಸೀಲ್ದಾರ್ ಅಥವಾ ಸರಿಸಮನಾದ ಅಧಿಕಾರಿಯನ್ನು ನೇಮಕ ಮಾಡಿಕೊಳ್ಳುವಂತೆ ಸೂಚಿಸಿದೆ. ಅಭ್ಯರ್ಥಿಗಳ ಚುನಾವಣಾ ವೆಚ್ಚದ ಪರಿಶೀಲನೆಗೆ ಸಾರ್ವಜನಿಕ ಲೆಕ್ಕಪತ್ರ ಇಲಾಖೆ ಅಧಿಕಾರಿಗಳ ತಂಡವನ್ನು ನೇಮಕ ಮಾಡಿಕೊಳ್ಳಬೇಕು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.
ಹಲವು ಪುರಸಭೆ, ನಗರಸಭೆ, ಪಂಚಾಯಿತಿಗಳ ಚುನಾವಣೆಗೆ ಸಂಬಂಧಿಸಿದ ಪ್ರಕರಣಗಳು ವಿಚಾರಣೆ ಹಂತದಲ್ಲಿರುವ ಕಾರಣ ಅಂತಹುಗಳ ಚುನಾವಣೆ ಘೋಷಣೆ ಆಗಿಲ್ಲ.