ಕೇರಳದಿಂದ ರಾಜ್ಯಕ್ಕೂ ವಕ್ಕರಿಸಿದ ಹಕ್ಕಿ ಜ್ವರ?
ಬೆಂಗಳೂರು, ಜ. 07: ಕೊರೊನಾ ವೈರಸ್ ಮಧ್ಯೆ ದೇಶದ ಜನರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ದೇಶದ ಹಲವು ಭಾಗಗಳಲ್ಲಿ ಹಕ್ಕಿ ಜ್ವರ (H5N8) ಸೋಂಕು ಕಾಣಿಸಿಕೊಂಡಿದ್ದು, ಇದೀಗ ರಾಜ್ಯದಲ್ಲಿಯೂ ಸೋಂಕು ಹರಡಿಸರುವ ಭೀತಿ ಎದುರಾಗಿದೆ. ಕೇರಳದ ಆಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಬಾತುಕೋಳಿಗಳಲ್ಲಿ ಹಕ್ಕಿಜ್ವರ (H5N8) ಸೋಂಕು ದೃಢಪಟ್ಟಿದೆ.
ಹೀಗಾಗಿ ರಾಜ್ಯದಲ್ಲಿಯೂ ರೋಗ ಕಾಣಿಸಿಕೊಳ್ಳುವ ಸಾಧ್ಯತೆಗಳಿರುವುದರಿಂದ ರೋಗ ಹರಡದಂತೆ ತಡೆಯಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಹೈಅಲರ್ಟ್ ಘೋಷಿಸಲಾಗಿದೆ. ಕೇರಳಕ್ಕೆ ಹೊಂದಿಕೊಂಡಂತಿರುವ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಆತಂಕದ ವಿಚಾರ ಬಂದಿದೆ.
ಹಕ್ಕಿ ಜ್ವರ: ರಾಜ್ಯದ ಈ ಎಲ್ಲ ಜಿಲ್ಲೆಗಳಲ್ಲಿ ಹೈಅಲರ್ಟ್ ಘೋಷಿಸಿದ ರಾಜ್ಯ ಸರ್ಕಾರ!
ಕೇರಳ ಗಡಿಗೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಕ್ಕಿ ಜ್ವರದ ಸೋಂಕು ಹರಡಿರುವ ಶಂಕೆ ವ್ಯಕ್ತವಾಗಿದೆ. ವಿಧಾನಸೌಧದಲ್ಲಿ ಈ ಕುರಿತು ಮಾತನಾಡಿರುವ ಆರೋಗ್ಯ ಸಚಿವ ಡಾ. ಸುಧಾಕರ್ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರು ಕಾಗೆಗಳು ಸತ್ತಿರುವ ಘಟನೆ ವರದಿಯಾಗಿದೆ. ಅವುಗಳ ಸ್ಯಾಂಪಲ್ನ್ನು ಪರೀಕ್ಷೆಗೆ ಕಳುಹಿಸಿದ್ದೇವೆ. ಅದು ಹಕ್ಕಿ ಜ್ವರವಾ? ಎಂಬುದು ಇನ್ನೂ ದೃಢಪಟ್ಟಿಲ್ಲ. ಆ ಬಗ್ಗೆ ಪರೀಕ್ಷಾ ವರದಿಯಿಂದ ದೃಢಪಡಬೇಕಿದೆ ಎಂದಿದ್ದಾರೆ.
ಮೈಸೂರು, ಕೊಡಗು ಜಿಲ್ಲೆ ಜಿಲ್ಲೆ ಸೇರಿದಂತೆ ಎಲ್ಲಾ ಕಡೆಯೂ ಸೋಂಕು ಬರದಂತೆ ತಡೆಯುವ ಕಾರ್ಯ ನಡೆಯುತ್ತಿದೆ. ಮಾಂಸಾಹಾರ ಸೇವನೆ ಮಾಡುವವರು ಚೆನ್ನಾಗಿ ಬೇಯಿಸಿ ತಿನ್ನಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ಸೂಚಿಸಿದೆ. ಎಲ್ಲರೂ ಹಾಗೆ ಮಾಡಬೇಕು ಎಂದು ಡಾ. ಸುಧಾಕರ್ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಕಾಏಕಿ ಕಾಗೆಗಳು ಸತ್ತಿರುವುದು ಇದೀಗ ಆತಂಕ ಮೂಡಿಸಿದೆ.