ಗೌರಿ ಲಂಕೇಶ್ ಹತ್ಯೆ : ಬಂಧಿತನಿಂದ ಸ್ಟೋಟಕ ಮಾಹಿತಿ
ಬೆಂಗಳೂರು, ಮಾರ್ಚ್ 05: ಗೌರಿ ಲಂಕೇಶ್ ಹತ್ಯೆಕೋರರಿಗೆ ಸಹಾಯ ಮಾಡಿದ್ದಾನೆ ಎನ್ನಲಾಗಿರುವ ನವೀನ್ ಕುಮಾರ್ ನಿಂದ ಎಸ್ಐಟಿ ತಂಡ ಭಾರಿ ಸ್ಪೋಟಕ ಮಾಹಿತಿಯನ್ನು ಕಲೆ ಹಾಕಿದೆ.
ಮದ್ದೂರಿನ ಯುವ ಹಿಂದೂಸೇನೆಯ ಕಾರ್ಯಕರ್ತ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ ನನ್ನು ಎಸ್ಐಟಿ ತಂಡವು ನ್ಯಾಯಾಲಯದ ವಿಶೇಷ ಅನುಮತಿ ಮೇರೆಗೆ 8 ದಿನ ವಶಕ್ಕೆ ಪಡೆದಿತ್ತು. ವಿಚಾರಣೆ ವೇಳೆ ಸ್ಪೋಟಕ ಸುದ್ದಿಯೊಂದು ಹೊರಬಂದಿದೆ.
ಶಂಕಿತ ಗೌರಿ ಹಂತಕರ ಸದಸ್ಯನಿಂದ ಮತ್ತೊಬ್ಬ ವಿಚಾರವಾದಿ ಕೊಲೆಗೆ ಸಂಚು!
ನವೀನ್ ಕುಮಾರ್ ಉತ್ತರ ಭಾರತದ ಮೂವರಿಗೆ ಮಂಗಳೂರಿನ ಹಿಂದೂ ಸಮಾಜ ಆಶ್ರಮವೊಂದರಲ್ಲಿ ವಾಸ್ತವ್ಯಕ್ಕೆ ಸಹಾಯ ಮಾಡಿದ್ದ ಇದೇ ವ್ಯಕ್ತಿಗಳು ಗೌರಿ ಲಂಕೇಶ್ ಅವರ ಹತ್ಯೆ ಮಾಡಿದ್ದರು ಎಂದು ಅನುಮಾನಿಸಲಾಗಿದ್ದು, ಆ ವ್ಯಕ್ತಿಗಳು ಗೌರಿ ಹತ್ಯೆಯ ನಂತರ ನವೀನ್ ಅನ್ನು ಸಂಪರ್ಕಿಸಿಲ್ಲ ಎನ್ನಲಾಗಿದೆ.
ಎಸ್ಐಟಿಯು ಈಗಾಗಲೇ ಎರಡು ತಂಡಗಳನ್ನು ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಕ್ಕೆ ಕಳಿಸಿದ್ದು, ತನಿಖೆಯನ್ನು ತೀವ್ರಗೊಳಿಸಿದೆ.
ಗೌರಿ ಲಂಕೇಶರನ್ನು ಹತ್ಯೆ ಮಾಡಲು ಬಳಸಿದ್ದ ಬಂದೂಕು ಮತ್ತು ನವೀನ್ ಕುಮಾರ್ ನಿಂದ ವಶಪಡಿಸಿಕೊಂಡಿರುವ ಬಂದೂಕು ಒಂದೇ ಮಾದರಿಯವು ಎನ್ನಲಾಗಿದೆ. ಗನ್ ಹಾಗೂ ಜೀವಂತ ಗುಂಡುಗಳನ್ನು ಆತನಿಗೆ ಯಾರು ಸರಬರಾಜು ಮಾಡುತ್ತಿದ್ದರು ಎಂಬುದರ ಬಗ್ಗೆ ವಿಚಾರಣೆ ನಡೆಸುತ್ತಿರುವ ಅಧಿಕಾರಿಗಳು ಶೀಘ್ರದಲ್ಲೇ ಹಂತಕರನ್ನ ಸೆರೆ ಹಿಡಿಯುವ ವಿಶ್ವಾಸದಲ್ಲಿದ್ದಾರೆ.