ಗೌರಿ ಹಂತಕರಿಗೆ ಸಹಾಯ ಮಾಡಿದವನನ್ನು ವಶಕ್ಕೆ ಪಡೆದ ಎಸ್ಐಟಿ
ಬೆಂಗಳೂರು, ಮಾರ್ಚ್ 02: ಫೆಬ್ರವರಿ 23ರಂದು ಉಪ್ಪಾರಪೇಟೆ ಪೊಲೀಸರು ಅಕ್ರಮ ಶಸ್ತ್ರಾಸ್ತ್ರ ಮತ್ತು ಜೀವಂತ ಗುಂಡು ಹೊಂದಿದ್ದ ಆರೋಪದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದ ಆರೋಪಿಯೋರ್ವನನ್ನು ಗೌರಿ ಲಂಕೇಶ್ ಹತ್ಯೆ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡ 7 ದಿನ ವಶಕ್ಕೆ ಪಡೆದಿದೆ.
ಮಾರ್ಚ್ 02ರಂದು ನ್ಯಾಯಾಲಯಕ್ಕೆ ವಿಶೇಷ ಅರ್ಜಿ ಸಲ್ಲಿಸಿ ಆರೋಪಿ ಕೆ.ಟಿ.ನವೀನ್ ಕುಮಾರ್ ವಶಕ್ಕೆ ಪಡೆದಿರುವ ಎಸ್ಐಟಿ ತಂಡ ಆತನ್ನು ತೀವ್ರ ವಿಚಾರಣೆಗೆ ಒಳಪಡಿಸಲಿದೆ.
ಉಪ್ಪಾರಪೇಟೆ ಪೋಲೀಸರು ಈತನನ್ನು ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯ ಬಂಧಿಸಿದ್ದರು, ಬಂಧಿಸಿದ ನಂತರ ಈತನು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಕೋರರಿಗೆ ಸಹಾಯ ಮಾಡಿದ್ದ ಎಂಬ ಅಂಶ ತಿಳಿದು ಬಂದಿತ್ತು.
ಗೌರಿ ಲಂಕೇಶ್ ಹತ್ಯೆ ಕೇಸಲ್ಲಿ ಸಿಕ್ಕಿದೆ ಬಿಗ್ ಲೀಡ್
ಹೊಟ್ಟೆ ನವೀನ್ ಅಲಿಯಾಸ್ ಕೆ.ಟಿ.ನವೀನ್ ಕುಮಾರ್ ಎಂಬಾತ ಹಿಂದೂ ಪರ ಸಂಘಟನೆಯೊಂದರ ಜೊತೆ ಗುರುತಿಸಿಕೊಂಡಿದ್ದು, ಈತ ಗೌರಿ ಲಂಕೇಶ ಅವರನ್ನು ಹತ್ಯೆ ಮಾಡಿದ್ದ ತಂಡಕ್ಕೆ ಸಹಾಯ ಮಾಡಿದ್ದ ಅವರು ರಾಜ್ಯ ಬಿಟ್ಟು ಹೋಗಲು ಈತ ಸಹಾಯ ಮಾಡಿದ್ದ ಎಂದು ಅನುಮಾನಿಸಲಾಗಿದೆ.
ಗೌರಿ ಲಂಕೇಶ್ ಹತ್ಯೆ ನಂತರ ಆರೋಪಿಗಳು ಈತನನ್ನು ಸಂಪರ್ಕವೇ ಮಾಡಿಲ್ಲವಾದ ಕಾರಣ ಹಂತಕರನ್ನು ಪತ್ತೆ ಮಾಡುವುದು ಎಸ್ಐಟಿಗೆ ದೊಡ್ಡ ಹಿನ್ನೆಡೆಯಾಗಲಿದೆ. ಇದೀಗ ಎಸ್ಐಟಿ ತಂಡದವರು ಈತನನ್ನು ವಶಕ್ಕೆ ಪಡೆದಿದ್ದು, ಹೆಚ್ಚಾನು ಹೆಚ್ಚು ಮಾಹಿತಿ ಕಲೆ ಹಾಕಬಹುದು ಹಾಗೂ ಕೊಂದವರನ್ನು ಗುರುತಿಸಲು ಸಾಧ್ಯವಾಗುವ ಸಾಧ್ಯತೆ ಇದೆ.