ನರೇಂದ್ರ ದಾಬೋಲ್ಕರ್ ಹತ್ಯೆ ಆರೋಪಿಯನ್ನು ವಿಚಾರಣೆಗೆ ಕರೆತಂದ ಎಸ್ಐಟಿ
ಬೆಂಗಳೂರು, ಸೆಪ್ಟೆಂಬರ್ 21: ಗೌರಿ ಹತ್ಯೆ ತನಿಖೆ ವೇಗ ಪಡೆದುಕೊಂಡ ನಂತರ ಮಹಾರಾಷ್ಟ್ರ ಪೊಲೀಸರು (ಎಎಸ್ಟಿ) ನರೇಂದ್ರ ದಾಬೋಲ್ಕರ್ ಹತ್ಯೆ ಆರೋಪಿಗಳನ್ನು ಬಂಧಿಸಿದ್ದರು. ಈಗ ಈ ಎರಡೂ ಹಂತಕರ ಗುಂಪಿಗೆ ಪರಸ್ಪರ ನಿಕಟ ಸಂಪರ್ಕ ಇರುವ ಅನುಮಾನ ವ್ಯಕ್ತವಾಗಿದೆ.
ಅಷ್ಟೆ ಅಲ್ಲ ಈ ವರೆಗೆ ನಡೆದಿರುವ ಎಲ್ಲ ವಿಚಾರವಾದಿಗಳ ಹತ್ಯೆಯನ್ನು ಒಂದೇ ಸಂಘಟನೆಯ ಸದಸ್ಯರು ಮಾಡಿದ್ದಾರೆ ಎಂಬ ಅನುಮಾನ ಮಹಾರಾಷ್ಟ್ರ ಹಾಗೂ ಕರ್ನಾಟಕ ಪೊಲೀಸರಿಗೆ ವ್ಯಕ್ತವಾಗಿದೆ ಈ ನಿಟ್ಟಿನಲ್ಲಿ ತನಿಖೆ ಚುರುಕುಗೊಂಡಿದೆ.
ಗೌರಿ ಹತ್ಯೆಗೆ ವರ್ಷ: ತನಿಖೆಯಲ್ಲಿ ಇಲ್ಲಿವರೆಗೆ ನಡೆದಿರುವುದೇನು?
ಗೌರಿ ಹತ್ಯೆ ಪ್ರಕರಣದ ಮಾಸ್ಟರ್ ಮೈಂಡ್ ಅಮೋಲ್ ಕಾಳೆ, ಮನೋಹರ ಯಡವೆಯನ್ನು ಮಹಾರಾಷ್ಟ್ರ ಪೊಲೀಸರು ವಿಚಾರಣೆಗೆಂದು ವಶಕ್ಕೆ ಪಡೆದಿದ್ದರು. ಈಗ ಕರ್ನಾಟಕ ವಿಶೇಷ ಪೊಲೀಸರ ತಂಡ ಎಸ್ಐಟಿಯು ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದ ಆರೋಪಿ ಶರತ್ ಕಲಾಸ್ಕರ್ ಎಂಬಾತನನ್ನು ವಿಚಾರಣೆಗೆಂದು ವಶಕ್ಕೆ ಪಡೆದಿದೆ.
ನರೇಂದ್ರ ದಾಬೋಲ್ಕರ್ ಹತ್ಯೆ ಆರೋಪಿಗಳು
ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರಿಂದ ಬಂಧಿತನಾಗಿರುವ ಶರತ್ ಕಲಾಸ್ಕರ್ ನನ್ನು ಎಸ್ಐಟಿ ಪೊಲೀಸರು ವಿಚಾರಣೆಗಾಗಿ 20 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ. ಗೌರಿ ಹತ್ಯೆ ಪ್ರಕಾರಣದ ವಿಚಾರಣೆಗೆಂದು ಮಹಾರಾಷ್ಟ್ರದಿಂದ ಬೆಂಗಳೂರಿಗೆ ಕರೆತಂದ ಮೂರನೇ ಆರೋಪಿ ಈತ.
ಗೌರಿ ಹತ್ಯೆ ಕೇಸ್ನಲ್ಲಿ ಮಹಾರಾಷ್ಟ್ರದ ಮಾಜಿ ಕಾರ್ಪೊರೇಟರ್ ಕೈವಾಡ!
ಗೌರಿ ಕೊಂದಿದ್ದ ಬಂದೂಕಿನ ಜೊತೆ 19 ಪಿಸ್ತೂಲು ವಶ
ಮುಂಬೈ ಮತ್ತು ಪುಣೆಯಲ್ಲಿ ಎಎಸ್ಟಿ ತಂಡ ನಡೆಸಿದ ದಾಳಿಯಲ್ಲಿ ಶರತ್ ಕಲಾಸ್ಕರ್ ಬಳಿ ಬರೋಬ್ಬರಿ 19 ನಾಡಬಂದೂಕುಗಳು ಪತ್ತೆಯಾಗಿದ್ದವು. ಅದರಲ್ಲಿ ಒಂದು ಗೌರಿ ಹತ್ಯೆಗೆ ಬಳಸಲಾಗಿದ್ದ ಬಂದೂಕು ಎಂಬ ಅನುಮಾನ ಇದೆ. ಮುಂಬೈ ಪೊಲೀಸರು ದಾಳಿ ನಡೆಸಿದ್ದ ವೇಳೆ ಬಂದೂಕಿನ ಜೊತೆ ಹಲವು ನಾಡ ಬಾಂಬ್ಗಳು ಸಹ ಪತ್ತೆಯಾಗಿದ್ದವು. ಈ ಪ್ರಕರಣದಲ್ಲಿ ಹಲವು ಜನರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಗೌರಿ ಹತ್ಯೆ ಪ್ರಕರಣ ಮತ್ತೊಬ್ಬ ಪ್ರಮುಖ ಆರೋಪಿ ಎಸ್ಐಟಿ ವಶಕ್ಕೆ
ಮೆಕ್ಯಾನಿಕಲ್ ಎಂಜಿನಿಯರ್ ಸುಧನ್ವ ಗೊಂಧೇಲ್ಕರ್ ವಶ
ಶರತ್ ಕಲಾಸ್ಕರ್ಗೂ ಮುನ್ನಾ ಸುಧನ್ವ ಗೊಂಧೇಲ್ಕರ್ ಎಂಬಾತನನ್ನು ಎಸ್ಐಟಿ ಪೊಲೀಸರು ವಶಪಡಿಸಿಕೊಂಡು ಬೆಂಗಳೂರಿಗೆ ಕರೆತಂದಿದ್ದರು. ಈತನ ಬಂಧನ ಅವಧಿಯನ್ನು 10 ದಿನಗಳಿಂದ ಇನ್ನೂ ಕೆಲವು ದಿನಗಳಿಗೆ ಮುಂದುವರೆಸುವಂತೆ ಎಸ್ಐಟಿ ಈಗಾಗಲೇ ಮನವಿ ಸಹ ಸಲ್ಲಿಸಿದೆ. ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದ ಈತ ವಿಚಾರವಾದಿಗಳ ಹತ್ಯೆಯಲ್ಲಿ ಸಕ್ರಿಯನಾಗಿ ಭಾಗಿಯಾಗಿದ್ದ ಎನ್ನಲಾಗಿದೆ.
ಮಾಜಿ ಕಾರ್ಪೊರೇಟರ್ ಬಂಧನ ಮತ್ತು ವಿಚಾರಣೆ
ಈ ಮಧ್ಯೆ ಮಹಾರಾಷ್ಟ್ರ ಜಲ್ನಾ ಜಿಲ್ಲೆಯ ಶಿವಸೇನೆಯ ಮಾಜಿ ಕಾರ್ಪೊರೇಟರ್ ಶ್ರೀಕಾಂತ್ ಪನ್ಗಾರ್ಕರ್ ಎಂಬಾತನನ್ನೂ ಪೊಲೀಸರು ಗೌರಿ ಹತ್ಯೆ ತನಿಖೆಕೆಗೆಂದು ಬೆಂಗಳೂರಿಗೆ ಕರೆತಂದಿದ್ದಾರೆ. ಈತನಿಗೂ ಗೌರಿ ಹತ್ಯೆ ಮಾಸ್ಟರ್ ಮೈಂಡ್ ಅಮೋಲ್ ಕಾಳೆಗೂ ನಿಕಟ ಸಂಪರ್ಕ ಇದ್ದುದ್ದರಿಂದ ಈತನನ್ನು ಎಸ್ಐಟಿಯು ವಿಚಾರಣೆ ನಡೆಸಿದೆ.
ಹತ್ಯೆಗೆ ಆರ್ಥಿಕ ಸಹಾಯ ಮಾಡುತ್ತಿದ್ದ
ಮಾಜಿ ಕಾರ್ಪೊರೇಟರ್ ಶ್ರೀಕಾಂತ್ ಪನ್ಗಾರ್ಕರ್, ವಿಚಾರವಾದಿಗಳ ಕೊಲೆಗೆ ಆರ್ಥಿಕ ಸಹಾಯ ಮಾಡುತ್ತಿದ್ದ ಎಂಬ ಆರೋಪದ ಮೇಲೆ ಮಹಾರಾಷ್ಟ್ರದ ವಿಶೇಷ ಪೊಲೀಸ್ ಪಡೆ ಎಎಸ್ಟಿಯು ಈತನನ್ನು ಬಂಧಿಸಿತ್ತು. ಗೌರಿ ಹತ್ಯೆಗೂ ಈತ ಹಣ ಸಹಾಯ ಮಾಡಿದ್ದ ಎಂಬ ಗುಮಾನಿಯಿಂದ ಎಸ್ಐಟಿಯು ಈತನ್ನು ಬಾಡಿ ವಾರೆಂಟ್ ಮೇಲೆ ವಿಚಾರಣೆಗೆ ಕರೆತಂದಿದೆ