ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ: ಎಸ್ಐಟಿಯಿಂದ 650 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ
ಬೆಂಗಳೂರು, ಮೇ 30: ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ (ಎಸ್ಐಟಿ) 650 ಪುಟಗಳ ಚಾರ್ಜ್ಶೀಟ್ಅನ್ನು ಸಲ್ಲಿಸಿದೆ.
ಗೌರಿ ಲಂಕೇಶ್ ಅವರ ಹತ್ಯೆ ನಡೆದು ಎಂಟು ತಿಂಗಳ ಬಳಿಕ ಚಾರ್ಜ್ಶೀಟ್ಅನ್ನು 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಬುಧವಾರ ಸಲ್ಲಿಸಲಾಯಿತು.
ನವೀನ್ ಬಂಧನ : ಎಸ್ಐಟಿ ವಿರುದ್ಧ ಕೇಸು ಹಾಕುವ ಎಚ್ಚರಿಕೆ!
ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಬಂಧಿತ ಆರೋಪಿಗಳು, ತನಿಖಾ ಅಧಿಕಾರಿಗಳು ಸೇರಿದಂತೆ ಒಟ್ಟು 131 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿದೆ.
2017ರ ಸೆಪ್ಟೆಂಬರ್ 5ರಂದು ರಾಜರಾಜೇಶ್ವರಿ ನಗರದಲ್ಲಿರುವ ಗೌರಿ ಲಂಕೇಶ್ ಅವರ ಮನೆಯ ಎದುರೇ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಗೆ ಸಂಚು ರೂಪಿಸಿದ ಆರೋಪದಲ್ಲಿ ಕೆ.ಟಿ. ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.
ನವೀನ್ ನೀಡಿದ ಮಾಹಿತಿ ಆಧಾರದಲ್ಲಿ ಮಂಗಳೂರು ಮೂಲದ ಪ್ರವೀಣ್ ಕುಮಾರ್ ಅಲಿಯಾಸ್ ಸುಜಿತ್ ಕುಮಾರ್, ಎಂಬಾತನನ್ನು ಬಂಧಿಸಲಾಗಿದೆ. ಅವರ ಜತೆಗೆ ಇನ್ನೂ ಮೂವರನ್ನು ಬಂಧಿಸಿರುವುದಾಗಿ ಮೂಲಗಳು ಹೇಳಿವೆ.
ಪುಣೆಯ ಅಮೂಲ್ ಕಾಳೆ, ಮಹಾರಾಷ್ಟ್ರದ ಅಮಿತ್ ದಿಗ್ವೇಕರ್, ವಿಜಯಪುರದ ಮನೋಹರ ದುಂಡಪ್ಪ ಯಾವಡೆ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಗೌರಿ ಹತ್ಯೆಯಲ್ಲಿ ಭಾಗಿಯಾದ ಆರೋಪಿಗಳು ಕೆ.ಎಸ್. ಭಗವಾನ್ ಅವರ ಹತ್ಯೆಗೂ ಸಂಚು ರೂಪಿಸಿದ್ದರು. 2015ರ ಸೆಪ್ಟೆಂಬರ್ 9ರಂದು ಬೆದರಿಕೆ ಪತ್ರ ಬರೆದಿದ್ದರು. ಎಂ.ಎಂ. ಕಲಬುರ್ಗಿ ಮತ್ತು ನರೇಂದ್ರ ದಾಬೋಲ್ಕರ್ ಅವರ ಬಳಿಕ ಮುಂದಿನದ್ದು ನಿನ್ನ ಸರದಿ ಎಂದು ಬೆದರಿಕೆ ಹಾಕಿದ್ದರು.