ಗೌರಿ ಲಂಕೇಶ್ ಹಂತಕ ಕರ್ನಾಟಕ ಪೊಲೀಸರ ಸೆರೆಯಲ್ಲಿ?
Recommended Video
ಬೆಂಗಳೂರು, ಜೂನ್ 12: ಪತ್ರಕರ್ತೆ ಗೌರಿ ಲಂಕೇಶ್ ಹಂತಕ ಕರ್ನಾಟಕ ಪೊಲೀಸರ ವಿಶೇಷ ತನಿಖಾ ದಳದ ವಶದಲ್ಲಿದ್ದಾನಾ? ಈ ಅನುಮಾನಗಳಿಗೆ ಸ್ಪಷ್ಟ ಉತ್ತರ ಇಲ್ಲವಾದರೂ, ಗೌರಿ ಲಂಕೇಶ್ ಮೇಲೆ ಗುಂಡು ಹಾರಿಸಿರಬಹುದಾದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ಎಸ್ಐಟಿ ತಂಡ ಮಹಾರಾಷ್ಟ್ರದ ಪ್ರದೇಶವೊಂದರಿಂದ ಮರಾಠಿ ಮಾತನಾಡುವ ವ್ಯಕ್ತಿಯೊಬ್ಬನನ್ನು ಬಂಧಿಸಿದೆ. ಈತನೇ ಗೌರಿ ಲಂಕೇಶ್ ಮೇಲೆ ಪ್ರತ್ಯಕ್ಷ ಗುಂಡು ಹಾರಿಸಿರಬಹುದು ಎಂಬ ಅನುಮಾನಗಳು ಕರ್ನಾಟಕ ಪೊಲೀಸರನ್ನು ಕಾಡುತ್ತಿದೆ.
ಗೌರಿಲಂಕೇಶ್ ಹತ್ಯೆ: ಹಿಂದೂ ಸಂಘಟನೆ ಪಾತ್ರದ ಬಗ್ಗೆ ಸ್ಫೋಟಕ ಮಾಹಿತಿ
ಬಂಧಿತ ವ್ಯಕ್ತಿ 30ರ ಆಸುಪಾಸಿನವನಾಗಿದ್ದು, ಐದು ಅಡಿ ಒಂದಿಂಚು ಎತ್ತರ, 75-80 ಕೆಜಿ ತೂಕವಿದ್ದು ಮರಾಠಿ ಮಾತನಾಡುತ್ತಾನೆ ಎಂದು ಎಸ್ಐಟಿ ಮೂಲಗಳು ಹೇಳಿವೆ. ಈತನ ಬಳಿಯಲ್ಲಿ ಯಾವುದೇ ಪಿಸ್ತೂಲ್ ಆಗಿ ಮಾರಕಾಸ್ತ್ರಗಳಾಗಲಿ ಸಿಕ್ಕಿಲ್ಲ. ಯಾವುದೇ ಪ್ರತಿಕ್ರಿಯೆ ನೀಡುವುದಕ್ಕೂ ಮುನ್ನ ನಾವು ಈತನನ್ನು ವಿಚಾರಣೆಗೆ ಒಳಪಡಿಸಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.
ಇನ್ನು ಈ ಸಂಬಂಧ ಈ ಹಿಂದೆ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ವರದಿ ನೀಡಿದ್ದ ವಿಧಿ ವಿಜ್ಞಾನ ಪ್ರಯೋಗಾಲಯ, ಹಂತಕನ ಎತ್ತರ 5 ಅಡಿ 1 ಇಂಚು ಅಥವಾ 2 ಇಂಚು ಮತ್ತು ತೂಕ 70-80 ಕೆಜಿ ಎಂದು ಹೇಳಿತ್ತು. ಈ ಸಿಸಿಟಿವಿ ದೃಶ್ಯಾವಳಿ ಮತ್ತು ತನಿಖೆ ವೇಳೆ ದೊರೆತ ಇತರ ಮಾಹಿತಿಗಳನ್ನು ಕೆಲ ಹಾಕಿ ಎಸ್ಐಟಿ ಶಂಕಿತರ ನಾಲ್ಕು ಚಿತ್ರಗಳನ್ನೂ ರಚಿಸಿದೆ. ಇದರಲ್ಲಿ ಗುಂಡು ಹಾರಿಸಿದ ಹಂತಕನ ರೇಖಾ ಚಿತ್ರವೂ ಇದೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಕೆ.ಟಿ. ನವೀನ್ ಕುಮಾರ್ ಗೆಳೆಯ ಶ್ರೀರಂಗಪಟ್ಟಣದ ಅನಿಲ್ ಕುಮಾರ್ ಸಹಾಯದಿಂದ ಈ ರೇಖಾಚಿತ್ರಗಳನ್ನು ರಚಿಸಲಾಗಿದೆ.
ಗೌರಿ ಲಂಕೇಶ್ ಹತ್ಯೆ ಆರೋಪಿ ನವೀನ್ ನ್ಯಾಯಾಂಗ ಬಂಧನ ವಿಸ್ತರಣೆ
ಈಗಾಗಲೇ ಎಸ್ಐಟಿ ಅನಿಲ್ ಕುಮಾರ್ ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಆತನ ಹೇಳಿಕೆಯನ್ನು ಸಾಕ್ಷಿಯಾಗಿ ಸ್ವೀಕರಿಸಿದೆ. ಎಸ್ಐಟಿ ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್ ಶೀಟ್ ಪ್ರಕಾರ, ಕೆ.ಟಿ. ನವೀನ್ ಕುಮಾರ್ ಗೌರಿ ಲಂಕೇಶ್ ಹತ್ಯೆಗೆ ಪ್ರವೀಣ್ ಕುಮಾರ್ ಜೊತೆ ಸೇರಿ ಸಂಚು ರೂಪಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಪ್ರವೀಣ್ ಕುಮಾರ್ ಅಲಿಯಾಸ್ ಸುಜಿತ್ ಕುಮಾರ್ ಮತ್ತೋರ್ವ ವಿಚಾರವಾದಿ ಕೆ.ಎಸ್. ಭಗವಾನ್ ಕೊಲೆಗೆ ನವೀನ್ ಸಹಾಯ ಕೇಳಿದ್ದ ಎನ್ನಲಾಗಿದೆ.