ಬೋಪಯ್ಯ ನೇಮಕ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋದ ಕಾಂಗ್ರೆಸ್
ಬೆಂಗಳೂರು, ಮೇ 18: ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಬಿಜೆಪಿಯ ಕೆಜಿ ಬೋಪಯ್ಯರನ್ನು ರಾಜ್ಯಪಾಲ ವಜೂಭಾಯಿ ವಾಲಾ ನೇಮಿಸಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ಕಾಂಗ್ರೆಸ್ ನಾಯಕರು ಮತ್ತು ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಮತ್ತು ಕಪಿಲ್ ಸಿಬಲ್ ಸುಪ್ರೀಂ ಕೋರ್ಟ್ ನ ರಿಜಿಸ್ಟ್ರಾರ್ ಗೆ ಈ ಸಂಬಂಧ ಅರ್ಜಿ ಸಲ್ಲಿಸಿದ್ದಾರೆ.
ಬಹುಮತ ಸಾಬೀತಿಗೆ ಸುಪ್ರೀಂ ಸೂಚನೆ : ತೀರ್ಪಿನ ಪ್ರಮುಖ ಅಂಶಗಳು
ಹಿರಿಯರನ್ನು ಕಡೆಗಣಿಸಿ ಕೇವಲ ಮೂರು ಬಾರಿ ಶಾಸನಸಭೆ ಪ್ರತಿನಿಧಿಸಿರುವ ಕೆಜಿ ಬೋಪಯ್ಯರನ್ನು ರಾಜ್ಯಪಾಲರು ಸ್ಪೀಕರ್ ಮಾಡಿದ್ದಾರೆ. ಈ ತೀರ್ಮಾನವನ್ನು ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಈ ಅರ್ಜಿಯನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಸಿಂಘ್ವಿ ಮತ್ತು ಸಿಬಲ್ ಕೋರಿದ್ದಾರೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಮೊನ್ನೆಯಷ್ಟೇ ಯಡಿಯೂರಪ್ಪನವರ ಪ್ರಮಾಣ ವಚನಕ್ಕೆ ಸಂಬಂಧಿಸಿದಂತೆ ರಾತ್ರಿಯೆಲ್ಲಾ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆದಿತ್ತು.
ಹಂಗಾಮಿ ಸ್ಪೀಕರ್ ಕೆ.ಜಿ. ಬೋಪಯ್ಯ ನೇಮಕ ಪ್ರಶ್ನಿಸಿ ಸುಪ್ರೀಂಗೆ ಕಾಂಗ್ರೆಸ್
ಇದೀಗ ಮತ್ತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಮಧ್ಯ ರಾತ್ರಿ ವಿಚಾರಣೆ ನಡೆಯುವ ಸಾಧ್ಯತೆ ಇದೆ.
ಹಿರಿಯರಿಗಿಲ್ಲ ಮಣೆ
ಅತ್ಯಂತ ಹಿರಿಯ, 8 ಬಾರಿಯ ಶಾಸಕ ಆರ್. ವಿ. ದೇಶಪಾಂಡೆಯವರನ್ನು ಬದಿಗೊತ್ತಿ ಇದೀಗ ಕೇವಲ 4ನೇ ಬಾರಿ ಗೆದ್ದಿರುವ ಶಾಸಕ ಕೆಜಿ ಬೋಪಯ್ಯರನ್ನು ಹಂಗಾಮಿ ಸಭಾಧ್ಯಕ್ಷರನ್ನಾಗಿ ರಾಜ್ಯಪಾಲರು ನೇಮಿಸಿದ್ದರು.
ಇದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿ ನ್ಯಾಯಾಲಯಕ್ಕೆ ತೆರಳುವುದಾಗಿ ಹೇಳಿತ್ತು. ಅದರಂತೆ ಇದೀಗ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.