ಸಿಂಧಗಿ ಉಪಚುನಾವಣೆ ಜೆಡಿಎಸ್- ಬಿಜೆಪಿ ಮಧ್ಯೆ ಮಾತ್ರ: ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ ಎಂದ ಕುಮಾರಸ್ವಾಮಿ!
ಬೆಂಗಳೂರು, ಅ.19: ಸಿಂಧಗಿ ಕ್ಷೇತ್ರದ ಉಪಚುನಾವಣೆ ಜೆಡಿಎಸ್ ಮತ್ತು ಬಿಜೆಪಿ ಮಧ್ಯೆ ಮಾತ್ರ ಇರುವ ಹೋರಾಟ. ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಸಿಂಧಗಿಯಲ್ಲಿ ಅವರು ಜೆಡಿಎಸ್ ಅಭ್ಯರ್ಥಿ ನಾಜಿಯಾ ಶಖೀಲ್ ಅಂಗಡಿ ಪರವಾಗಿ ಪ್ರಚಾರ ಕಾರ್ಯ ಮುಗಿಸಿ ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
"ಕಳೆದ ಐದು ದಿನಗಳ ಕಾಲ ಪ್ರಚಾರ ಮಾಡಿದ್ದೇನೆ. ಸಿಂಧಗಿ ಕ್ಷೇತ್ರದಲ್ಲಿ ಹಿಂದಿನ ಎರಡು ಮೂರು ಚುನಾವಣೆಗಳನ್ನು ನೋಡಿದರೆ ಇಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮಧ್ಯೆ ಮಾತ್ರ ಪೈಪೋಟಿ ಕಂಡುಬರುತ್ತಿದೆ. ಕಾಂಗ್ರೆಸ್ ಯಾವಾಗಲೂ ಮೂರನೇ ಸ್ಥಾನದಲ್ಲಿಯೇ ಇದೆ. ಈ ಬಾರಿಯ ಉಪಚುನಾವಣೆಯೂ ಸಹ ಜೆಡಿಎಸ್ ಮತ್ತು ಬಿಜೆಪಿ ಮಧ್ಯೆ ಮಾತ್ರ ಎಂದು ಹೇಳಿದರು.
"ಕಾಂಗ್ರೆಸ್ ನಾಯಕರು ಪದೇ ಪದೇ ಕೆಣಕಿ ನನಗೆ ಆಹಾರ ಒದಗಿಸುತ್ತಿದ್ದಾರೆ. ನಮ್ಮ ಪಕ್ಷದಿಂದ ಯಾರಿಗೆ ಟಿಕೆಟ್ ನೀಡಬೇಕು ಎಂಬುದು ನಮಗೆ ಬಿಟ್ಟಿದ್ದು. ಮತ ಒಡೆಯುವುದಕ್ಕಾಗಿ ಅಲ್ಪಸಂಖ್ಯಾತರಿಗೆ ಜೆಡಿಎಸ್ ಟಿಕೆಟ್ ನೀಡಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಿದ್ದರಾಮಯ್ಯ ಹೇಳಿದರು. ಹಾಗಿದ್ದರೆ ಅವರೇ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕಿತ್ತು. ಆಗ ನಾವು ಬೇರೆ ಅಭ್ಯರ್ಥಿಗೆ ಟಿಕೆಟ್ ನೀಡುತ್ತಿದ್ದೆವು. ನಾಜಿಯಾ ಶಕೀಲಾ ಆಂಗಡಿ ಅವರ ಕುಟುಂಬ ಜೆಡಿಎಸ್ ಪಕ್ಷಕ್ಕೆ ನಿಷ್ಟಾವಂತರಾಗಿದ್ದಾರೆ. ಅಲ್ಲದೆ, ನಾಜಿಯಾ ಅವರು ಎಂ.ಎ. ಪದವೀಧರರಾಗಿದ್ದು, ಉತ್ತಮ ಶಿಕ್ಷಣ ಪಡೆದವರಿಗೆ ಟಿಕೆಟ್ ನೀಡಿದ್ದೇವೆ. ಇದನ್ನು ಸಹಿಸಲಾಗದೆ ಕಾಂಗ್ರೆಸ್ ನಾಯಕರು ಮನಸ್ಸಿಗೆ ಬಂದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ" ಎಂದು ಹೇಳಿದರು.
"ಸಿಂಧಗಿಯಲ್ಲಿ ಜೆಡಿಎಸ್ಗೆ ಉತ್ತಮವಾದ ವಾತಾವರಣ ಇದೆ. ಆದರೆ, ಕಾಂಗ್ರೆಸ್ನ ಅಪಪ್ರಚಾರ ಮಾಡುತ್ತಿದೆ. ಬಿಜೆಪಿಯ ಬಿ ಟೀಂ ಎಂದು ಹೇಳುತ್ತಿದೆ. ನಾವು ಅಭ್ಯರ್ಥಿಯನ್ನು ಹಾಕುವುದು ಗೆಲ್ಲುವುದಕ್ಕೆ ಹೊರತು ಮತ್ತೊಬ್ಬರಿಗೆ ಅನುಕೂಲ ಮಾಡುವುದಕ್ಕೆ ಅಲ್ಲ. ಮತದಾರರು ಇದಕ್ಕೆ ಗಮನ ಕೊಡಬಾರದು. ಕಾಂಗ್ರೆಸ್ ನಾಯಕರ ಅಪ ಪ್ರಚಾರಕ್ಕೆ ಇಲ್ಲಿನ ಮತದಾರರು ಅಂತಿಮ ತೆರೆ ಎಳೆಯುತ್ತಾರೆ" ಎಂದರು.
"ಸಿಂಧಗಿಯಲ್ಲಿ ಮತ ಕೇಳಲು ಈ ಕ್ಷೇತ್ರಕ್ಕೆ ಹಲವು ಕೊಡುಗೆಗಳನ್ನು ನೀಡಿದ್ದೇವೆ. ದೇವೇಗೌಡರು ಪ್ರಧಾನಿಯಾಗಿದ್ದಾಗ ಮತ್ತು ನಾನು ಮುಖ್ಯಮಂತ್ರಿ ಆಗಿದ್ದಾಗ ನೂರಾರು ಕೋಟಿ ಅನುದಾನ ನೀಡಿದ್ದೇವೆ. ಆದರೆ, 2019-20 ರ ಬಜೆಟ್ನಲ್ಲಿ ನಾನು ವಿಜಯಪುರ ಜಿಲ್ಲೆಯ ಯೋಜನೆಗಳಿಗೆ ಅನುದಾನ ಮೀಸಲಿಟ್ಟಿದ್ದೆ. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅದನ್ನು ತಡೆಹಿಡಿದಿದೆ. ಕಾಂಗ್ರೆಸ್ನವರು ಏನನ್ನೂ ಮಾಡದೆ ಹುಸಿ ಮಾತುಗಳ ಮೂಲಕ ಮತ ಕೇಳಲು ಹೊರಟಿದ್ದಾರೆ'' ಎಂದರು.
ವಿರೋಧ ಪಕ್ಷದ ಸ್ಥಾನದ ಬಗ್ಗೆ ಗೌರವ
"ನನಗೆ ವಿರೋಧ ಪಕ್ಷದ ಸ್ಥಾನದ ಬಗ್ಗೆ ಗೌರವ ಇದೆ. ಆ ಹುದ್ದೆಯ ಬಗ್ಗೆ ನಾನು ಯಾವತ್ತೂ ಕೆಟ್ಟ ಮಾತುಗಳನ್ನು ಆಡಿಲ್ಲ. ಆದರೆ, ಸಿದ್ದರಾಮಯ್ಯ ಅವರು ತಮ್ಮ ವೈಯಕ್ತಿಕ ಆಸೆಗೋಸ್ಕರ ಉತ್ತಮವಾಗಿ ನಡೆಯುತ್ತಿದ್ದ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಕೆಳಗಿಳಿಸುವಂತೆ ಮಾಡಿದರು. ಅವರ ಈ ಕುತಂತ್ರದ ಬಗ್ಗೆ ಬೇಸರ ವ್ಯಕ್ತಪಡಿಸಿ ಮಾತನಾಡಿದ್ದೆ" ಎಂದು ಹೇಳಿದರು.
ಬಿಜೆಪಿ ಮತ್ತು ಕಾಂಗ್ರೆಸ್ನವರು ಪರಸ್ಪರ ಕಚ್ಚಾಡಿಕೊಂಡೇ ಇರುತ್ತಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಕರ್ನಾಟಕಕ್ಕೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, "ಸಿದ್ದರಾಮಯ್ಯನವರದು 10 ಪರ್ಸೆಂಟ್ ಕಮಿಷನ್ ಸರ್ಕಾರ" ಎಂದು ಹೇಳಿದ್ದರು. ಕಾಂಗ್ರೆಸ್ನವರು ಅದಕ್ಕೆ ಪ್ರತ್ಯುತ್ತರವಾಗಿ ಬಿಜೆಪಿಯದು "20 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಹೇಳಿದರು. ಅವರಿಬ್ಬರದೂ ಪರ್ಸೆಂಟೇಜ್ ಜಗಳ ಮೊದಲಿನಿಂದಲೂ ಇದೆ. ನಾಡಿನ ಜನತೆಯ ದುಡ್ಡು ಸದ್ವಿನಿಯೋಗ ಆಗುವುದಕ್ಕೆ ಮತ್ತು ಗುಣಾತ್ಮಕ ಕೆಲಸಗಳಿಗೆ ಜನರು ಜೆಡಿಎಸ್ಗೆ ಆಶೀರ್ವಾದ ಮಾಡಬೇಕು ಎಂದು ಹೇಳಿದರು.
ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿದೆಯಲ್ಲ ಎಂಬ ಪ್ರಶ್ನೆಗೆ, "ಅದು ಬಿಜೆಪಿಯವರ ಆಂತರಿಕ ವಿಚಾರ. ಯಾರನ್ನು ಬೇಕಾದರೂ ಆಧ್ಯಕ್ಷರನ್ನಾಗಿ ಮಾಡಿಕೊಳ್ಳಲಿ. ನಮಗೆ ಮಾಡುವುದಕ್ಕೆ ಬೇರೆ ಕೆಲಸಗಳಿವೆ" ಎಂದಷ್ಟೇ ಹೇಳಿದರು.
Recommended Video