2018ರ ಚುನಾವಣೆಯ ನಂತರ ಜೆಡಿಎಸ್ ಕಳೆದುಕೊಂಡ ಕ್ಷೇತ್ರಗಳು
ಕಳೆದ ಅಸೆಂಬ್ಲಿ ಮತ್ತು ಲೋಕಸಭಾ ಚುನಾವಣೆಯ ನಂತರ ದೇವೇಗೌಡ ನೇತೃತ್ವದ ಜೆಡಿಎಸ್ ಮೇಲೆ ಮುಖಂಡರ ಮತ್ತು ಕಾರ್ಯಕರ್ತರ ವಿಶ್ವಾಸ ಕಮ್ಮಿಯಾಗುತ್ತಿದೆಯೇ ಅಥವಾ ಪಕ್ಷದ ಪ್ರಮುಖ ಮುಖಂಡರಿಗೆ ಇದೆಲ್ಲಾ ಬೇಕಾಗಿಲ್ಲವೇ ಎನ್ನುವ ಪ್ರಶ್ನೆ ಕಾಡುವುದು ಸಹಜ.
Recommended Video
ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ತೀವ್ರ ಹಿನ್ನಡೆಯನ್ನು ಎದುರಿಸಬೇಕಾಯಿತು. ಪ್ರಜ್ವಲ್ ರೇವಣ್ಣ ಬಿಟ್ಟರೆ ಖುದ್ದು ದೇವೇಗೌಡ್ರು ಮತ್ತು ಅವರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಕೂಡಾ ಸೋಲು ಅನುಭವಿಸಿದರು. ಇವರೆಲ್ಲಾ ಸೋತಿದ್ದು ಪಕ್ಷದ ಭದ್ರಕೋಟೆಯಲ್ಲೇ.
ಶಿರಾ: ಬಿ.ವೈ.ವಿಜಯೇಂದ್ರ ಮುಂದೆ ಮಂಡಿಯೂರಿದ ಪ್ರಜ್ವಲ್ ರೇವಣ್ಣ ಕಾರ್ಯತಂತ್ರ
ಅಸೆಂಬ್ಲಿ ಚುನಾವಣೆಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ಸಿಗದೇ ಇದ್ದಾಗ, ಕಾಂಗ್ರೆಸ್, ಜೆಡಿಎಸ್ ಮನೆಬಾಗಿಲಿಗೆ ಹೋಯಿತು. ಎಚ್.ಡಿ.ಕುಮಾರಸ್ವಾಮಿಯವರು ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾದರು. ಆದರೆ, ಸರಕಾರ ಜಾಸ್ತಿ ದಿನ ಉಳಿಯಲಿಲ್ಲ ಎನ್ನುವುದು ಗೊತ್ತಿರುವ ವಿಚಾರ.
ಶಿರಾದಲ್ಲಿ ಜೆಡಿಎಸ್ಗೆ ಗೆಲುವು ತಂದುಕೊಡಲಿಲ್ಲ ಅನುಕಂಪ!
ಬಿಜೆಪಿಯ ಆಪರೇಶನ್ ಕಮಲದ ನಂತರ ಹಲವು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಿತು. ಇದಲ್ಲದೇ, ಕ್ಷೇತ್ರದ ಶಾಸಕರು ವಿಧಿವಶವಾಗಿದ್ದರಿಂದಲೂ ಚುನಾವಣೆಯೂ ನಡೆಯಿತು. 2018ರಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ 37 ಸ್ಥಾನ ಗೆದ್ದಿದ್ದ ಜೆಡಿಎಸ್, ಅದರಲ್ಲಿ ನಾಲ್ಕು ಸ್ಥಾನವನ್ನು ಕಳೆದುಕೊಂಡಿತು. ಅದು ಹೀಗಿದೆ:
ಜೆಡಿಎಸ್ ಕಳೆದುಕೊಂಡ ಕ್ಷೇತ್ರಗಳು - ಕೆ.ಆರ್.ಪೇಟೆ
ಮಂಡ್ಯ ಜಿಲ್ಲೆಯ ಎಲ್ಲಾ ಏಳು ಸ್ಥಾನವನ್ನು ಜೆಡಿಎಸ್ ಗೆದ್ದಿತ್ತು. ಅದರಲ್ಲಿ ಕೆ.ಆರ್.ಪೇಟೆ ಕೂಡಾ. ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಾರಾಯಣ ಗೌಡ 17, 119 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ, ಆಪರೇಶನ್ ಕಮಲಕ್ಕೆ ಒಳಗಾಗಿ ಬಿಜೆಪಿಗೆ ಸೇರ್ಪಡೆಗೊಂಡರು. ಮತ್ತೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಗೌಡ್ರು, ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜ್ ಅವರನ್ನು ಸುಮಾರು 9,700 ಮತಗಳಿಂದ ಸೋಲಿಸಿದ್ದರು.
ಜೆಡಿಎಸ್ ಕಳೆದುಕೊಂಡ ಕ್ಷೇತ್ರಗಳು - ಮಹಾಲಕ್ಷ್ಮೀ ಲೇಔಟ್
ಬೆಂಗಳೂರು ನಗರ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಒಂದಾದ ಮಹಾಲಕ್ಷ್ಮೀ ಲೇಔಟ್ ನಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕೆ.ಗೋಪಾಲಯ್ಯ 41,100 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರು. ಇವರು ಕೂಡಾ ಆಪರೇಶನ್ ಕಮಲಕ್ಕೆ ಒಳಗಾಗಿದ್ದರಿಂದ ಮತ್ತೆ ಚುನಾವಣೆ ಎದುರಾಯಿತು. ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೋಪಾಲಯ್ಯ ಮತ್ತೆ 54,386 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಜೆಡಿಎಸ್ ಕಳೆದುಕೊಂಡ ಕ್ಷೇತ್ರಗಳು - ಹುಣಸೂರು
ಮೈಸೂರು ಜಿಲ್ಲೆಯ ಹುಣಸೂರು ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಎಚ್.ವಿಶ್ವನಾಥ್, 8,575 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆಪರೇಶನ್ ಕಮಲಕ್ಕೆ ಒಳಗಾಗಿ, ಮತ್ತದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ವಿರುದ್ದ ಐವತ್ತು ಸಾವಿರಕ್ಕೂ ಅಧಿಕ ಮತಗಳಿಂದ ಹೀನಾಯವಾಗಿ ವಿಶ್ವನಾಥ್ ಸೋತಿದ್ದರು.
ಜೆಡಿಎಸ್ ಕಳೆದುಕೊಂಡ ಕ್ಷೇತ್ರಗಳು - ಶಿರಾ
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ತುಮಕೂರು ಜಿಲ್ಲೆ, ಶಿರಾ ಅಸೆಂಬ್ಲಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಬಿ.ಸತ್ಯನಾರಾಯಣ ನಿಧನ ಹೊಂದಿದ್ದರು. ಈ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಅವರ ಪತ್ನಿ ಅಮ್ಮಾಜಮ್ಮ ಕಣಕ್ಕಿಳಿದಿದ್ದರು. ಆದರೆ, ಇಲ್ಲಿ ಜೆಡಿಎಸ್ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಬಿಜೆಪಿ ಈ ಕ್ಷೇತ್ರವನ್ನು ಗೆದ್ದುಕೊಂಡಿದೆ.