ಕೆಎಸ್ ಭಗವಾನ್ ವಿರುದ್ಧ ಸಹಿ ಸಂಗ್ರಹ ಅಭಿಯಾನ
ಬೆಂಗಳೂರು, ಸೆಪ್ಟೆಂಬರ್. 20: ಶ್ರೀರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಪ್ರೊ. ಕೆ.ಎಸ್ ಭಗವಾನ್ ಅವರಿಗೆ ಸಾಹಿತ್ಯ ಅಕಾಡೆಮಿ 2013 ನೇ ಸಾಲಿನ ಗೌರವ ಪ್ರಶಸ್ತಿ ಘೋಷಣೆ ಮಾಡಿರುವ ಬಗ್ಗೆ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ಭಗವಾನ್ ಹೆಸರನ್ನು ಪ್ರಶಸ್ತಿ ಪಟ್ಟಿಯಿಂದ ಕೈ ಬಿಡಬೇಕು ಎಂದು ಒತ್ತಾಯಿಸಿ ಸಹಿ ಸಂಗ್ರಹ ಅಭಿಯಾನವೂ ಆರಂಭವಾಗಿದೆ. ರಾಜ್ಯದ ಮುಖ್ಯಮಂತ್ರಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಿಗೆ ಆನ್ ಲೈನ್ ಮೂಲಕ ಸಹಿ ಸಂಗ್ರಹ ಮಾಡಿ ಸಲ್ಲಿಕೆ ಮಾಡಲಾಗುತ್ತದೆ.
ಪತ್ರಕರ್ತ ರೋಹಿತ್ ಚಕ್ರತೀರ್ಥ ಸಹಿ ಸಂಗ್ರಹ ಅಭಿಯಾನದ ಮುಂದಾಳತ್ವ ವಹಿಸಿಕೊಂಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಶ್ರೀ ರಾಮನ ಜನ್ಮದ ಬಗ್ಗೆ ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.[ಪ್ರಶಸ್ತಿಗೆ ಪಾತ್ರರಾದವರ ಸಾಧನೆಯನ್ನು ಅಕಾಡಮಿ ತಿಳಿಸಲಿ]
ಇದನ್ನು ಖಂಡಿಸಿ ಸಹಿ ಸಂಗ್ರಹ ಅಭಿಯಾನ ಆರಂಭವಾಗಿದೆ. ಅಲ್ಲದೇ ಅಭಿಯಾನದಲ್ಲಿ ಕೆಲವೊಂದು ಬೇಡಿಕೆಯನ್ನು ಇಡಲಾಗಿದ್ದು ಸಾಹಿತ್ಯ ಅಕಾಡೆಮಿಯಿಂದ ಸ್ಪಷ್ಟನೆ ಕೇಳಲಾಗಿದೆ.
* ಪ್ರಶಸ್ತಿ ಆಯ್ಕೆಯಲ್ಲಿ ಪಾಲ್ಗೊಂಡಿದ್ದ ನಿರ್ಣಾಯಕರ ಹೆಸರನ್ನು ಬಹಿರಂಗ ಮಾಡಬೇಕು.
* ಪ್ರಶಸ್ತಿಗೆ ಆಯ್ಕೆಯಾದ ಬರಹಗಾರರ ಸಾಧನೆಯನ್ನು ಜನತೆಗೆ ತಿಳಿಸಬೇಕು
* ಸಾರ್ವಜನಿಕವಾಗಿ ಸದಾ ವಿವಾದಾತ್ಮಕ ಹೇಳಿಕೆ ನೀಡುವ ಭಗವಾನ್ ಅವರಿಗೆ ಪ್ರಶಸ್ತಿ ನೀಡಿದ ಕುರಿತು ಸರ್ಕಾರ ಮತ್ತು ಅಕಾಡೆಮಿ ಉತ್ತರ ನೀಡಬೇಕು.
* ಪ್ರಶಸ್ತಿ ಆಯ್ಕೆ ಸುತ್ತಿನ ಕೊನೆಯಲ್ಲಿ ಯಾವ ಯಾವ ಸಾಹಿತಿಗಳ ಹೆಸರಿತ್ತು ಎಂಬುದನ್ನು ಬಹಿರಂಗ ಮಾಡಬೇಕು.
ಸಹಿ ಸಂಗ್ರಹ ಅಭಿಯಾನವನ್ನು ವೀಕ್ಷಿಸಿ