ಟ್ಯಾಕ್ಸ್ ಟೆರರಿಸಂಗೆ ಸಿದ್ಧಾರ್ಥ ಬಲಿ: ಸಿದ್ದರಾಮಯ್ಯ
Recommended Video
ಬೆಂಗಳೂರು, ಜುಲೈ 31: ಕಾಫಿ ಕಿಂಗ್ ವಿಜಿ ಸಿದ್ಧಾರ್ಥ ಅವರ ಅಕಾಲಿಕ ಮರಣದ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಸಾವಿನ ಕಾರಣದ ಬಗ್ಗೆ ಶಂಕೆಯನ್ನೂ ವ್ಯಕ್ತಪಡಿಸಿದ್ದಾರೆ.
ಸಿದ್ಧಾರ್ಥ ಅವರ ಸಾವಿನ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಸುದ್ದಿಯಿಂದ ತೀವ್ರ ಆಘಾತಗೊಂಡಿದ್ದೇನೆ ಎಂದಿದ್ದಾರೆ. ಅದರ ಜೊತೆಗೆ ಸಿದ್ಧಾರ್ಥ ಅವರ ಸಾವಿನ ಬಗ್ಗೆ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ.
VG Siddhartha Death LIVE: ಚಿಕ್ಕಮಗಳೂರಿನತ್ತ ಹೊರಟ ಸಿದ್ಧಾರ್ಥ ಮೃತದೇಹ ಹೊತ್ತ ಆಂಬುಲೆನ್ಸ್
ಉದ್ಯಮಿ ವಿ.ಜಿ.ಸಿದ್ಧಾರ್ಥ ಅವರ ಸಾವು ಎಷ್ಟು ಎಷ್ಟು ದಾರುಣವೋ, ಅದರ ಹಿನ್ನೆಲೆ ಅಷ್ಟೇ ನಿಗೂಢವಾದುದು. ಅವರನ್ನು ಇಂತಹದ್ದೊಂದು ದುರಂತಕ್ಕೆ ತಳ್ಳಿದ ಕಾರಣಗಳು ಮತ್ತು ಅದರ ಹಿಂದಿನ ಕಾಣದ ಕೈಗಳ ಬಗ್ಗೆ ಸಮಗ್ರ ತನಿಖೆಯಾದರೆ ಮಾತ್ರ ಅವರಿಗೆ ನಾವು ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ವಿ.ಜಿ.ಸಿದ್ಧಾರ್ಥ ಅವರ ಸಾವಿಗೆ ಐಟಿ ಇಲಾಖೆಯ ಕಿರುಕುಳ ಕಾರಣವಾಗಿರ ಬಹುದೆಂಬ ಸಂಶಯ ಹುಟ್ಟಿಸುವಂತಿದೆ ಅವರು ಕೊನೆಯಲ್ಲಿ ಬರೆದಿರುವ ಪತ್ರದಲ್ಲಿನ ವಿವರಗಳು. ಕಳೆದ ಐದು ವರ್ಷಗಳಲ್ಲಿ ಐಟಿ ಇಲಾಖೆಯ ಕಾರ್ಯನಿರ್ವಹಣೆ ಈ ಸಂಶಯವನ್ನು ಇನ್ನಷ್ಟು ಪುಷ್ಠೀಕರಿಸುತ್ತದೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಲೇಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸುತ್ತಿದ್ದಾರೆ.
ರಾಜ್ಯದ ಖ್ಯಾತ ಉದ್ಯಮಿ ಸಿದ್ಧಾರ್ಥ ನಿಧನ: ಗಣ್ಯರ ಶೋಕದ ನುಡಿ
ಸಿದ್ಧಾರ್ಥ ಅವರು 27 ರಂದು ತಮ್ಮ ಉದ್ಯೋಗಿಗಳಿಗೆ ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ, ಅವರು ಐಟಿ ಅಧಿಕಾರಿಯ ಕಿರುಕುಳವನ್ನು ಉಲ್ಲೇಖಿಸಿದ್ದಾರೆ. ಇದು ಬಹು ಚರ್ಚೆಗೆ ಕಾರಣವಾಗಿದ್ದು, ಪ್ರಮಾಣಿಕ ಉದ್ಯಮಿ ಆಗಿದ್ದ ಅವರ ಮೇಲೆ ಐಟಿ ದಾಳಿ ಆದ ನಂತರ ಅವರು ಮಾನಸಿಕವಾಗಿ ಕುಗ್ಗಿದ್ದರು, ಐಟಿ ಇಲಾಖೆಯ ದಿಗ್ಭಂದನದಿಂದಾಗಿ ಇತರೆ ಷೇರುಗಳನ್ನೂ ಮಾರಲು ಆಗದೆ ತೊಂದರೆ ಅನುಭವಿಸಿದ್ದರು.