ರಮೇಶ್ ಜಾರಕಿಹೊಳಿ ಅಪ್ಪಟ ಕಾಂಗ್ರೆಸ್ಸಿಗ: ಸಿದ್ದರಾಮಯ್ಯ
Recommended Video
ಬೆಂಗಳೂರು, ಡಿಸೆಂಬರ್ 27: ಸಂಪುಟ ವಿಸ್ತರಣೆ ಕಾಂಗ್ರೆಸ್ಗೆ ಮತ್ತೆ ಉರುಳಾಗಿದೆ. ಹಲವು ತಿಂಗಳ ಬೇಡಿಕೆಯಂತೆ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ಸಂಪುಟ ವಿಸ್ತರಣೆ ಮಾಡಿದೆ. ಆದರೆ, ಅದರ ಬೆನ್ನಲ್ಲೇ ಅಸಮಾಧಾನವೂ ತೀವ್ರಗೊಂಡಿದೆ. ಅದರಲ್ಲಿಯೂ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರ ನಡೆ ಪಕ್ಷದಲ್ಲಿ ತಳಮಳ ಉಂಟುಮಾಡಿದೆ.
ತಮ್ಮನ್ನು ಸಂಪುಟದಿಂದ ಕೈಬಿಡುತ್ತಿದ್ದಂತೆಯೇ ಕೋಪಗೊಂಡ ರಮೇಶ್, ರಾಜೀನಾಮೆ ನೀಡುವುದಾಗಿ ಹೇಳಿ ಊರಿಗೆ ಮರಳಿದ್ದಾರೆ. ಅಲ್ಲಿಂದ ಅವರು ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ.
ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತವಿಲ್ಲ: ಕೆ.ಸಿ. ವೇಣುಗೋಪಾಲ್
ರಮೇಶ್ ಜಾರಕಿಹೊಳಿ ಅವರನ್ನು ಸಂಪರ್ಕಿಸಲು ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸತತ ಪ್ರಯತ್ನ ನಡೆಸಿದ್ದಾರೆ. ಆದರೆ, ಅವರಿಂದಲೂ ಸಾಧ್ಯವಾಗಿಲ್ಲ. ಹೀಗಾಗಿ ಅವರ ಸಹೋದರ ಲಖನ್ ಅವರ ಮೂಲಕ ರಮೇಶ್ ಅವರೊಂದಿಗೆ ಮಾತುಕತೆ ನಡೆಸಲು ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದಾರೆ.
ಈ ನಡುವೆ ಅಸಮಾಧಾನ ತಣ್ಣಗಾಗಿಸಲು ಮತ್ತು ಇದರ ಲಾಭ ಪಡೆದುಕೊಳ್ಳಲು ಬಯಸುತ್ತಿರುವ ಬಿಜೆಪಿ ವಿರುದ್ಧ ಹರಿಹಾಯಲು ಸಿದ್ದರಾಮಯ್ಯ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡಿದ್ದಾರೆ.
ಬಗೆಹರಿಯದ ಖಾತೆ ಹಂಚಿಕೆ ಬಿಕ್ಕಟ್ಟು, ಪಟ್ಟಿ ಹೈಕಮಾಂಡ್ಗೆ ರವಾನೆ
ಗುರುವಾರ ಸರಣಿ ಟ್ವೀಟ್ಗಳನ್ನು ಮಾಡಿರುವ ಅವರು ರಮೇಶ್ ಜಾರಿಕಿಹೊಳಿ ಕಾಂಗ್ರೆಸ್ ತೊರೆಯುವುದಿಲ್ಲ ಎಂದು ಹೇಳಿದ್ದಾರೆ.
|
ಅಪ್ಪಟ ಕಾಂಗ್ರೆಸ್ಸಿಗ
ರಮೇಶ್ ಜಾರಕಿಹೊಳಿ ಮಾತ್ರವಲ್ಲ ಅವರ ಇಡೀ ಕುಟುಂಬ ಹಲವಾರು ವರ್ಷಗಳಿಂದ ನನಗೆ ಗೊತ್ತು. ರಮೇಶ್ ಅಪ್ಪಟ ಕಾಂಗ್ರೆಸಿಗ, ಅವರು ಪಕ್ಷ ಬಿಟ್ಟುಹೋಗುವುದಿಲ್ಲ. ಬಿಜೆಪಿ ಪ್ರಯತ್ನ ಯಶಸ್ಸಾಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
|
ಯಡಿಯೂರಪ್ಪನೇ ಬುದ್ಧಿ ಹೇಳಿದ್ದಾರೆ
ಶಾಸಕ ಉಮೇಶ್ ಕತ್ತಿಯವರ ಹೇಳಿಕೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿಲ್ಲ. ಅವರ ಅಧ್ಯಕ್ಷರಾದ ಯಡಿಯೂರಪ್ಪನವರೇ ಕತ್ತಿಯವರಿಗೆ ಬುದ್ದಿ ಹೇಳಿದ್ದಾರೆ. ಸರ್ಕಾರ ಪತನದ ಕನಸು ಕೈ ಬಿಟ್ಟು, ಮೊದಲು ಅವರೊಳಗಿನ ಭಿನ್ನಾಭಿಪ್ರಾಯವನ್ನು ಸರಿಮಾಡಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.
ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್ನಲ್ಲಿ ಒಳಜಗಳ ಹೆಚ್ಚಾಗಿದೆ: ಶೆಟ್ಟರ್
|
ಅತೃಪ್ತ ಆತ್ಮಗಳು
ರಾಜ್ಯದಲ್ಲಿರುವ ನಿಜವಾದ ಅತೃಪ್ತ ಆತ್ಮಗಳೆಂದರೆ ಅಧಿಕಾರವಿಲ್ಲದೆ ಹತಾಶರಾಗಿರುವ ಯಡಿಯೂರಪ್ಪ, ಉಮೇಶ್ ಕತ್ತಿ, ಈಶ್ವರಪ್ಪ ಮೊದಲಾದವರು. ಈ ಅತೃಪ್ತಿ, ಹತಾಶೆಗಳಿಂದಲೇ ಇವರೆಲ್ಲ ಇತರರ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
|
ಪರಾಮರ್ಶಿಸಿ ವರದಿ ಮಾಡಿ
ಡಾ.ಜಿ.ಪರಮೇಶ್ವರ್ ಮತ್ತು ನನ್ನ ನಡುವೆ ಭಿನ್ನಾಭಿಪ್ರಾಯವೇ ಇಲ್ಲ, ನಿನ್ನೆಯ ಸಭೆಯಲ್ಲಿ ಆ ರೀತಿಯ ಯಾವುದೇ ಚರ್ಚೆ-ವಾಗ್ವಾದ ನಡೆದಿಲ್ಲ. ಇದನ್ನು ಹೇಳಿದವರು ಯಾರು? ವಿರೋಧ ಪಕ್ಷಗಳ ಕೆಲವು ನಾಯಕರು ಹತಾಶರಾಗಿ ಹರಡುತ್ತಿರುವ ಸುದ್ದಿಗಳನ್ನು ಮಾಧ್ಯಮಗಳು ವರದಿ ಮಾಡುವ ಮೊದಲು ಪರಾಮರ್ಶಿಸಿದರೆ ಒಳ್ಳೆಯದು ಎಂದು ಅಸಮಾಧಾನ ಹೊರಹಾಕಿದ್ದಾರೆ.
|
ಸುಳ್ಳು ವರದಿಗಳು
ನಾನು ಮುಖ್ಯಮಂತ್ರಿಯಾಗಿದ್ದ ೫ ವರ್ಷಗಳ ಕಾಲ ನನ್ನ ಮತ್ತು ಡಾ.ಪರಮೇಶ್ವರ್ ಸಂಬಂಧ ಕೆಡಿಸುವ ಪ್ರಯತ್ನವನ್ನು ವಿರೋಧ ಪಕ್ಷಗಳ ನಾಯಕರು ಮಾಡುತ್ತಲೇ ಇದ್ದರು. ಅದು ಈಗಲೂ ಮುಂದುವರಿದಿದೆ. ಅಂತಹ ಯಾವ ಪ್ರಯತ್ನವೂ ಯಶಸ್ವಿಯಾಗುವುದಿಲ್ಲ. ಇಂತಹ ಸುದ್ದಿಗಳನ್ನು ಕೇಳಿ ನಾವಿಬ್ಬರೂ ನಕ್ಕು ಸುಮ್ಮನಾಗುತ್ತೇವೆ ಎಂದು ತಮ್ಮ ಮತ್ತು ಪರಮೇಶ್ವರ್ ನಡುವೆ ವಾಗ್ವಾದ ನಡೆದಿದೆ ಎಂಬ ಸುದ್ದಿಗೆ ಪ್ರತಿಕ್ರಿಯೆ ನೀಡಿದ್ದಾರೆ.
|
ನಾವ್ಯಾರೂ ಮಕ್ಕಳಲ್ಲ
ಸಚಿವ ಖಾತೆ ಮರುಹಂಚಿಕೆ ಬಗ್ಗೆ ನಿನ್ನೆಯ ಸಭೆಯಲ್ಲಿ ಚರ್ಚೆ ಸೌಹಾರ್ದತಯುತವಾಗಿಯೇ ನಡೆದಿದೆ. ಸಭೆಯಲ್ಲಿದ್ದ ನಾಯಕರೆಲ್ಲ ಹಿರಿಯರು, ಅನುಭವಿಗಳು, ಈ ರೀತಿ ಜಗಳವಾಡಲು ನಮ್ಮಲ್ಲಿ ಯಾರೂ ಮಕ್ಕಳಿಲ್ಲ. ಕಪೋಲ ಕಲ್ಪಿತ ಸುದ್ದಿಗಳನ್ನು ನಂಬಬೇಡಿ, ಹರಡಬೇಡಿ ಎಂದಿದ್ದಾರೆ.
|
ರಾಹುಲ್ ಗಾಂಧಿ ಅಂತಿಮ ನಿರ್ಧಾರ
ಸಚಿವ ಖಾತೆ ಮರುಹಂಚಿಕೆ ಬಗ್ಗೆ ನಿನ್ನೆ ನಡೆದ ಸಭೆಯಲ್ಲಿ ಎಲ್ಲ ನಾಯಕರಿಂದ ವ್ಯಕ್ತವಾದ ಅಭಿಪ್ರಾಯಗಳನ್ನು ಕೆ.ಸಿ.ವೇಣುಗೋಪಾಲ್ ಅವರು ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತರುತ್ತಾರೆ. ಅಂತಿಮ ತೀರ್ಮಾನವನ್ನು ರಾಹುಲ್ ಗಾಂಧಿ ಕೈಗೊಳ್ಳುತ್ತಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.