ರಾಜ್ಯಪಾಲರಿಗೆ ಪತ್ರ ಬರೆದ ವಿಪಕ್ಷ ನಾಯಕ ಸಿದ್ದರಾಮಯ್ಯ!
ಬೆಂಗಳೂರು, ಜು. 24: ಕೋವಿಡ್ ಕಾಲದ ವೈದ್ಯಕೀಯ ಸಲಕರಣೆಗಳ ಖರೀದಿ ಹಗರಣದ ಆರೋಪದ ಬೆನ್ನಲ್ಲೆ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದಾರೆ. ಆದರೆ ಈ ಬಾರಿ ಅವರು ಪ್ರಸ್ತಾಪ ಮಾಡಿರುವುದು ಸಾಮಾಜಿಕ ನ್ಯಾಯದ ವಿಚಾರವನ್ನು. ಅದೂ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಹಾಗೂ ಕರ್ನಾಟಕ ರಾಜ್ಯ ಮಾನವ ಧರ್ಮ ಪೀಠದ ಸ್ವಾಮೀಜಿಗಳ ಸಲಹೆಯಂತೆ ಪತ್ರ ಬರೆದು ಸರ್ಕಾರದ ಗಮನ ಸೆಳೆದಿದ್ದಾರೆ.
Recommended Video
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಸಾಮಾಜಿಕ ನ್ಯಾಯದ ಪ್ರಕಾರ ಪರಿಶಿಷ್ಟ ಜಾತಿಗೆ ಸೇರಿದ ವಿದ್ವಾಂಸರುಗಳನ್ನು ಕುಲಪತಿಗಳನ್ನಾಗಿ ನೇಮಕ ಮಾಡಿಲ್ಲ ಮತ್ತು ಕೆ.ಪಿ.ಎಸ್.ಸಿ. ಹಾಗೂ ಸಂವಿಧಾನಾತ್ಮಕ ಸಂಸ್ಥೆಗಳ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ನೇಮಕ ಮಾಡುವಾಗಲೂ ಸಾಮಾಜಿಕ ನ್ಯಾಯವನ್ನು ಅನುಸರಿಸಿಲ್ಲ ಎಂದ ಅಂಶವನ್ನು ನನ್ನ ಗಮನಕ್ಕೆ ತಂದಿದ್ದಾರೆ.
ಸಿದ್ದರಾಮಯ್ಯ ಆರೋಪ: ಸಿಎಂ ಯಡಿಯೂರಪ್ಪ ಗಲಿಬಿಲಿ ಯಾಕೆ?
ರಾಜ್ಯದಲ್ಲಿ 25 ವಿಶ್ವವಿದ್ಯಾಲಯಗಳಿದ್ದರೂ ಜಾನಪದ ವಿವಿ ಕುಲಪತಿಗಳನ್ನು ಹೊರತು ಪಡಿಸಿ ಉಳಿದ ಯಾವುದೇ ವಿಶ್ವವಿದ್ಯಾಲಯಗಳಲ್ಲೂ ಪರಿಶಿಷ್ಟ ಜಾತಿಗೆ ಸೇರಿದ ಕುಲಪತಿಗಳಿಲ್ಲ. ಈ ಅಂಶಗಳು ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆಯ ಸೆಕ್ಷನ್ 14(4)ನಂತೆ ಸಾಮಾಜಿಕ ನ್ಯಾಯವನ್ನು ಕಡ್ಡಾಯವಾಗಿ ಅನುಸರಿಸಬೇಕೆಂಬ ನ್ಯಾಯಕ್ಕೆ ವಿರುದ್ಧ ನಡೆಯಾಗಿದೆ.
ಆದ್ದರಿಂದ ಈ ಕೂಡಲೇ ಖಾಲಿಯಿರುವ ಮತ್ತು ಖಾಲಿಯಾಗುವ ವಿಶ್ಯವಿದ್ಯಾಲಯಗಳ ಕುಲಪತಿಗಳ ಹುದ್ದೆಗೆ ಪರಿಶಿಷ್ಟ ಜಾತಿ ಮುಂತಾದ ದಮನಿತ ವರ್ಗಗಳಿಗೆ ಸಾಮಾಜಿಕ ನ್ಯಾಯ ತತ್ವದ ಆಧಾರದ ಮೇಲೆ ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆ 2000 ಪ್ರಕಾರ ನೇಮಕ ಮಾಡಬೇಕು. ಹಾಗೂ ಕೆಪಿಎಸ್ಸಿ ಮುಂತಾದ ಸಾಂವಿಧಾನಾತ್ಮಕ ಸಂಸ್ಥೆಗಳಲ್ಲಿ ಖಾಲಿಯಿರುವ ಹಾಗೂ ಖಾಲಿಯಾಗುವ ಅಧ್ಯಕ್ಷರು, ಸದಸ್ಯರುಗಳ ಹುದ್ದೆಗಳಿಗೆ ಸಾಮಾಜಿಕ ನ್ಯಾಯ ತತ್ವವನ್ನು ಗೌರವಿಸಿ ನೇಮಕ ಮಾಡಬೇಕೆಂದು ಎಂದು ಸಿದ್ದರಾಮಯ್ಯ ಅವರು ರಾಜ್ಯಪಾಲ ವಜೂಬಾಯಿ ವಾಲಾ, ಸಿಎಂ ಯಡಿಯೂರಪ್ಪ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.