ಸಿದ್ದರಾಮಯ್ಯ ಎಲೆಕ್ಷನ್ ಬಜೆಟ್ ಬತ್ತಳಿಕೆ: ಜ.18ರಿಂದ ಚಿಂತನ ಮಂಥನ!
ಬೆಂಗಳೂರು, ಜನವರಿ 10: ಬಿಜೆಪಿಯ ಮೋದಿ ಅಲೆಗೆ ಪ್ರತಿಯಾಗಿ ಮುಂದಿನ ವಿಧಾನಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಾರಿ ಅಹಿಂದ ಮಾತ್ರವಲ್ಲದೆ ಎಲ್ಲ ಸ್ತರದ ಹಾಗೂ ಎಲ್ಲ ಜಾತಿ ಸಮುದಾಯಗಳನ್ನು ಓಲೈಸುವುದು ಗ್ಯಾರಂಟಿ.
ಹೀಗಾಗಿಯೇ ರಾಜ್ಯದಲ್ಲಿ ಈಗಾಗಲೇ ಎರಡು ಹಂತಗಳ ಪ್ರವಾಸ ಮುಗಿಸಿರುವ ಸಿಎಂ ಸಿದ್ದರಾಮಯ್ಯ ಜನವರಿ 18ರಿಂದ ಬಜೆಟ್ ಪೂರ್ವ ಸಭೆಗಳನ್ನು ಆರಂಭಿಸಲಿದ್ದಾರೆ.
ಫೆ. 16ರಂದು ಸಿದ್ದರಾಮಯ್ಯ ಅವರಿಂದ ಕೊನೆಯ ಬಜೆಟ್ ಮಂಡನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2018-19 ನೇ ಸಾಲಿನ ರಾಜ್ಯ ಬಜೆಟ್ ಪೂರ್ವಭಾವಿ ಇಲಾಖಾವಾರು ಸಭೆಗಳನ್ನು ಜನವರಿ 18 ರಿಂದ ನಡೆಸುವುದರೊಂದಿಗೆ ಮುಖ್ಯಮಂತ್ರಿಯಾಗಿ ತಮ್ಮ ಆರನೇ ಹಾಗೂ ರಾಜ್ಯದ ಹಣಕಾಸು ಸಚಿವರಾಗಿ ತಮ್ಮ ಹದಿಮೂರನೇ ಆಯವ್ಯಯ ಮಂಡನೆಗೆ ತಾಲೀಮು ಪ್ರಾರಂಭಿಸಲಿದ್ದಾರೆ.
ರೈತ ಪ್ರತಿನಿಧಿಗಳೊಂದಿಗೆ ಸಭೆ
ಪ್ರಪ್ರಥಮವಾಗಿ ಜನವರಿ 18 ರಂದು ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿಯವರು ರೈತ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸುವುದರೊಂದಿಗೆ ರಾಜ್ಯ ಮುಂಗಡ ಪತ್ರದ ತಯಾರಿ ಪ್ರಾರಂಭವಾಗಲಿದೆ.
ಜನವರಿ 19 ರಿಂದ ಫೆಬ್ರವರಿ 1 ರವರೆಗೆ ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಗೂ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಗಳು ಕರ್ನಾಟಕ ವಿದ್ಯುತ್ ನಿಗಮದ ಶಕ್ತಿ ಭವನದ ಸಭಾಂಗಣದಲ್ಲಿ ನಡೆಯಲಿವೆ.
ಜನವರಿ 19 ರಂದು ವೈದ್ಯಕೀಯ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಉನ್ನತ ಶಿಕ್ಷಣ, ಕಾರ್ಮಿಕ, ಕೌಶಲ್ಯಾಭಿವೃದ್ಧಿ, ಅರಣ್ಯ, ಪರಿಸರ ಮತ್ತು ಜೀವಿ ಶಾಸ್ತ್ರ, ಇಂಧನ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಯಲಿದೆ.
ಕನ್ನಡ-ಸಂಸ್ಕೃತಿ ಕಂದಾಯ ವ್ಯಾಪ್ತಿಗೆ ಸಂಬಂಧಿಸಿದ ಸಭೆ
ಜನವರಿ 20 ರಂದು ಕನ್ನಡ ಮತ್ತು ಸಂಸ್ಕೃತಿ, ಮಕ್ಕಳ ಕಲ್ಯಾಣ, ಕಂದಾಯ ವ್ಯಾಪ್ತಿಗೆ ಒಳಪಟ್ಟ ಮುಜರಾಯಿ, ಜವಳಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಔಕಾಫ್ ಸೇರಿದಂತೆ ಅಲ್ಪಸಂಖ್ಯಾತರ ಕಲ್ಯಾಣ, ಜನವರಿ 22 ರಂದು ಬೃಹತ್ ಮತ್ತು ಮಧ್ಯಮ ನೀರಾವರಿ ಹಾಗೂ ಸಣ್ಣ ನೀರಾವರಿ ಸೇರಿದಂತೆ ಜಲಸಂಪನ್ಮೂಲ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು ಹಾಗೂ ಸಂಸದೀಯ ವ್ಯವಹಾರಗಳು, ತೋಟಗಾರಿಕೆ, ಕೃಷಿ ಮಾರುಕಟ್ಟೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮೀನುಗಾರಿಕಾ ಇಲಾಖೆಗಳ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಗಳು ನಡೆಯಲಿವೆ.
ಪಶುಸಂಗೋಪನೆ, ಸಾರ್ವಜನಿಕ ಉದ್ದಿಮೆಗಳ ಸುಧಾರಣೆ ಕುರಿತ ಸಭೆ
ಅದೇ ರೀತಿ ಜನವರಿ 25 ರಂದು ಕೃಷಿ, ಆಹಾರ ಸಂಸ್ಕರಣೆ, ಪಶುಸಂಗೋಪನೆ,ರೇಷ್ಮೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಇ-ಆಡಳಿತ ಒಳಗೊಂಡಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ.
ಜನವರಿ 30 ರಂದು ಸಹಕಾರ, ವಸತಿ, ಸಾರ್ವಜನಿಕ ಉದ್ದಿಮೆಗಳು, ಪೌರಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳು,ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನೆ ಹಾಗೂ ಮಹಾನಗರ ಪಾಲಿಕೆಗಳು ಒಳಗೊಂಡಂತೆ ನಗರಾಭಿವೃದ್ಧಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ವ್ಯಾಪ್ತಿಯ ಹಜ್, ಜನವರಿ 31 ರಂದು ಗೃಹ, ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ಸಭೆ ನಡೆಯಲಿದೆ.
ಸಾರಿಗೆ, ಯೋಜನೆ ಮತ್ತು ಕಾರ್ಯಕ್ರಮ ಅನುಷ್ಠಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮ ಹಾಗೂ ಫೆಬ್ರವರಿ 1 ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್,ಕಂದಾಯ, ವಾಣ ಜ್ಯ ಮತ್ತು ಕೈಗಾರಿಕಾ ವ್ಯಾಪ್ತಿಯ ಸಣ್ಣ ಕೈಗಾರಿಕೆ, ಸಕ್ಕರೆ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹಾಗೂ ಗಣ ಮತ್ತು ಭೂ ವಿಜ್ಞಾನ ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಯಲಿದೆ.
ಅಂತೆಯೇ, ಫೆಬ್ರವರಿ 2 ರಂದು ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ವಾಣಿಜ್ಯ ಸಂಘಟನೆ ಸಂಸ್ಥೆಗಳು, ಸಾರಿಗೆ ಸಂಘ ಸಂಸ್ಥೆಗಳು, ಅಬಕಾರಿ ಸಂಘ ಸಂಸ್ಥೆಗಳು ಹಾಗೂ ಭೂ ಮಾರುಕಟ್ಟೆ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಬಜೆಟ್ ಪೂರ್ವ ಚರ್ಚೆ ನಡೆಸಲಿದ್ದಾರೆ.
ದಲಿತರ ಆಶೋತ್ತರಗಳಿಗೆ ಸಂಬಂಧಿಸಿದ ಸಭೆ
ಫೆಬ್ರವರಿ 3 ರಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ದಲಿತ ಸಂಘಟನೆಗಳ ಮುಖಂಡರು, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಪದಾಧಿಕಾರಿಗಳು ಅಲ್ಪಸಂಖ್ಯಾತರ ಸಮುದಾಯದ ಸದಸ್ಯರು ಮತ್ತು ಶಾಸಕರೊಂದು ಸಭೆ ನಡೆಸಿ ರಾಜ್ಯ ಆಯವ್ಯಯ ಕುರಿತಂತೆ ಅವರ ಅಮೂಲ್ಯ ಅಭಿಪ್ರಾಯಗಳನ್ನು ಸಂಗ್ರಹಿಸಲಿದ್ದಾರೆ.
ಫೆಬ್ರವರಿ 5 ರಂದು ಶಕ್ತಿ ಭವನದಲ್ಲಿ ಸಭೆ
ಅಂತಿಮವಾಗಿ, ಫೆಬ್ರವರಿ 5 ರಂದು ಕರ್ನಾಟಕ ವಿದ್ಯುತ್ ನಿಗಮದ ಶಕ್ತಿ ಭವನ ಸಭಾಂಗಣದಲ್ಲಿ ವಾಣಿಜ್ಯ ತೆರಿಗೆಗಳು, ಅಬಕಾರಿ, ಸಾರಿಗೆ, ಮುದ್ರಾಂಕ ಮತ್ತು ನೋಂದಣಿ ಹಾಗೂ ಗಣ ಮತ್ತು ಭೂ ವಿಜ್ಞಾನ ಇಲಾಖೆಗಳ ಮುಖ್ಯಸ್ಥರೊಂದಿಗೆ ಪರಿಶೀಲನಾ ಸಭೆ ನಡೆಸಲಿದ್ದಾರೆ.
ಫೆಬ್ರವರಿ 6 ರಂದು ಅದೇ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಅಹವಾಲು ಹಾಗೂ ಅಭಿಪ್ರಾಯಗಳನ್ನು ಸ್ವೀಕರಿಸಿ ತಾವು ಮಂಡಿಸಲಿರುವ ಹದಿಮೂರನೇ ಬಜೆಟ್ ಗೆ ರೂಪು-ರೇಷೆಗಳನ್ನು ಸಿದ್ಧಪಡಿಸಲಿದ್ದಾರೆ.