ಯಡಿಯೂರಪ್ಪ ವಿರುದ್ಧ ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಬರೆದ ಪತ್ರದಲ್ಲಿ ಏನಿದೆ?
ಬೆಂಗಳೂರು, ಆಗಸ್ಟ್ 27: ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ರಾಜ್ಯ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ರದ್ದುಗೊಳಿಸಲು ಸೂಚಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸುದೀರ್ಘ ಪತ್ರ ಬರೆದಿದ್ದಾರೆ.
ಭಾರತದಲ್ಲಿ ಕೃಷಿಯು ಜೀವನೋಪಾಯದ ಅತ್ಯಂತ ದೊಡ್ಡ ಮೂಲವಾಗಿದೆ. ಕೃಷಿ ಉತ್ಪಾದನೆಗೆ ಕೃಷಿ ಭೂಮಿ ಪ್ರಮುಖ ಅಂಶವಾಗಿದೆ. ಕೃಷಿ ಜಮೀನು ಗ್ರಾಮೀಣ ಜೀವನದ ಅವಿಭಾಜ್ಯ ಅಂಗವಾಗಿದ್ದು, ಅದಕ್ಕೆ ಭಾವನಾತ್ಮಕ ಮೌಲ್ಯವೂ ಸೇರಿಕೊಂಡಿದೆ. ಕೃಷಿ ಸಮುದಾಯದ ಸಬಲೀಕರಣದ ಸುರಕ್ಷತೆಯನ್ನು ಕದಡುವ ಯಾವುದೇ ಪ್ರಯತ್ನವು ದೇಶದ ಬೆಳವಣಿಗೆಗೆ ಹೊಡೆತ ನೀಡುತ್ತದೆ.
ಭೂ ಸುಧಾರಣೆ ಸುಗ್ರೀವಾಜ್ಞೆ: ಗಾಂಧಿ ಮಾರ್ಗದಲ್ಲಿ ಚಳವಳಿಗಳು ನಡೆಯಬೇಕು...
ಕರ್ನಾಟಕದಲ್ಲಿ ರೈತರ ಹಕ್ಕುಗಳನ್ನು ಹಾಳುಗೆಡಹುವ ಅಂತಹ ಒಂದು ಪ್ರಯತ್ನ ನಡೆದಿದೆ. ಕರ್ನಾಟಕ ರಾಜ್ಯ ಸರ್ಕಾರವು ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲು ಸುಗ್ರೀವಾಜ್ಞೆಯನ್ನು ಹೊರಡಿಸಿದೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...
ವಿವಿಧ ಸೆಕ್ಷನ್ಗಳ ರದ್ದು
ಕೃಷಿಕರೇತರರು ಕೃಷಿ ಭೂಮಿಯನ್ನು ಖರೀದಿಸಲು ಇದ್ದ ನಿರ್ಬಂಧಗಳನ್ನು ತೆಗೆದುಹಾಕಿ ಮತ್ತು ಎರಡು ಪಟ್ಟು ಹೆಚ್ಚಿನ ಭೂಮಿಯನ್ನು ಹೊಂದಲು ಅವಕಾಶ ನೀಡಲಾಗಿದೆ. ಇದರ ಜತೆಗೆ ಸಂಪುಟವು ಸೆಕ್ಷನ್ 79 (ಎ) (ನಿರ್ದಿಷ್ಟ ವ್ಯಕ್ತಿಗಳಿಂದ ಭೂಮಿ ಖರೀದಿಯ ಮೇಲೆ ನಿರ್ಬಂಧ) 79-B (ನಿರ್ದಿಷ್ಟ ವ್ಯಕ್ತಿಗಳು ಕೃಷಿ ಭೂಮಿ ಹೊಂದುವುದರ ನಿಷೇಧ) 79-C (ಘೋಷಣೆ ನೀಡಲು ವಿಫಲವಾಗಿದ್ದಕ್ಕೆ ದಂಡ) ಮತ್ತು ಸೆಕ್ಷನ್ 80 (ಕೃಷಿಕರೇತರರಿಗೆ ವರ್ಗಾವಣೆ ಮಾಡುವ ನಿರ್ಬಂಧ) ನಿಯಮಗಳನ್ನು ತೆಗೆದು ಹಾಕಲಾಗಿದ್ದು, ಈ ತಿದ್ದುಪಡಿಗಳು ಆಗಸ್ಟ್ 19ರಿಂದ ಜಾರಿಯಾಗಿವೆ.
ರೈತರು, ಆರ್ಥಿಕತೆಗೆ ಹೊಡೆತ
ಬಿಎಸ್ ಯಡಿಯೂರಪ್ಪ ಅವರ ನೇತೃತ್ವದ ಕರ್ನಾಟಕ ಸರ್ಕಾರದ ನಿರ್ಧಾರವು ಕರ್ನಾಟಕದ ರೈತಾಪಿ ಸಮುದಾಯ ಮತ್ತು ರಾಜಕೀಯ ಆರ್ಥಿಕತೆಯ ಮೇಲೆ ಬಹು ರೀತಿಯ ಪರಿಣಾಮಗಳನ್ನು ಬೀರಲಿದೆ. ಉಳುವವನೇ ಹೊಲದೊಡೆಯ ಎಂಬುದನ್ನು ಮಾಡುವ ಐತಿಹಾಸಿಕ ಪ್ರಯತ್ನಗಳನ್ನು ಹದಗೆಡಿಸಿ ಶ್ರೀಮಂತರು ಭೂಮಿ ಒಡೆಯರಾಗುವ ಯುಗಕ್ಕೆ ಅವಕಾಶ ನೀಡಿದೆ. 1961 ಮತ್ತು 1974ರ ಭೂ ಸುಧಾರಣೆಗಳು ತಳವರ್ಗದ, ದಲಿತರು ಮತ್ತು ಇತರೆ ಹಿಂದುಳಿದ ವರ್ಗಗಳ ಜನರು ಭೂಮಿಯ ಒಡೆಯರಾಗುವ ಅವಕಾಶ ನೀಡಿತ್ತು.
ಮೊದಲು ನಮಗೆ ಭೂಮಿ ಕೊಡಿ- ಮಹಿಳಾ ರೈತ ವೇದಿಕೆಯಿಂದ ಹಕ್ಕೊತ್ತಾಯ
ಈಗ ಮತ್ತೆ ದಾಸರಾಗುವ ಸ್ಥಿತಿ
ಭೂ ಸುಧಾರಣೆ ಕಾಯ್ದೆಯು ಬಡತನದ ಸಂಕಷ್ಟವನ್ನು ಮತ್ತು ಜೀತಪದ್ಧತಿಯ ಸಂಕೋಲೆಯನ್ನು ಒಡೆದಿತ್ತು. ಲಕ್ಷಾಂತರ ಶ್ರಮಜೀವಿಗಳು ಸ್ವತಂತ್ರರಾಗಿದ್ದರು. ತಳಮಟ್ಟದ ಜನರಿಗೆ ಭೂಮಿಯು ಸಾಮಾಜಿಕ ಮಾನ್ಯತೆ ನೀಡಿತ್ತು. ಅವರಲ್ಲಿ ಸಮಾಜೋ-ಆರ್ಥಿಕ ಮತ್ತು ರಾಜಕೀಯ ಅನ್ಯಾಯಗಳ ವಿರುದ್ಧ ಹೋರಾಡುವ ಆತ್ಮವಿಶ್ವಾಸ ನೀಡಿತ್ತು. ಆದರೆ ಭೂ ಸುಧಾರಣೆಯ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತರು ಮತ್ತೆ ಶ್ರೀಮಂತ ಹಾಗೂ ಪ್ರಭಾವಶಾಲಿ ಶ್ರೀಮಂತರ ಕಪಿಮುಷ್ಠಿಯಲ್ಲಿ ನಲುಗುವಂತಾಗಲಿದೆ.
ಕಾರ್ಮಿಕರಾಗುವ ಸ್ಥಿತಿ ಬರಲಿದೆ
ಕೆಐಎಡಿಬಿ ಈಗಾಗಲೇ ಅಭಿವೃದ್ಧಿಪಡಿಸದೆ ಉಳಿದಿರುವ 36,000 ಎಕರೆ ಭೂಮಿಯನ್ನು ಹೊಂದಿದ್ದು, ರೈತರ ಸಮೃದ್ಧ ಜಮೀನುಗಳನ್ನು ಕಸಿದುಕೊಳ್ಳುವ ಬದಲು ಅವುಗಳನ್ನು ಉದ್ಯಮ ಅಭಿವೃದ್ಧಿಗೆ ನೀಡಬಹುದಾಗಿದೆ. ರೈತರು ಮತ್ತು ಅವರ ಕುಟುಂಬಗಳಿಗೆ ಇದರಿಂದ ತೀವ್ರ ಕೆಡುಕಿನ ಪರಿಣಾಮವಾಗಲಿದ್ದು, ಆರ್ಥಿಕ ಅಥವಾ ಸಾಮಾಜಿಕ ಸಂಕಷ್ಟದಿಂದಾಗಿ ಉದ್ಯಮಿಗಳು ಅಥವಾ ದೊಡ್ಡ ರೈತರ ಜಮೀನಿನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುವಂತಹ ಸ್ಥಿತಿ ಬರಬಹುದು.
ರಿಯಲ್ ಎಸ್ಟೇಟ್ಗೆ ಲಾಭ
ಇದು ಗ್ರಾಮೀಣ ಪ್ರದೇಶಗಳಲ್ಲಿ ಹಿಂದುಳಿಯುವಿಕೆಗೆ ಮುಖ್ಯ ಕಾರಣವಾಗಿದ್ದ ಜಮೀನ್ದಾರಿ ವ್ಯವಸ್ಥೆಯನ್ನು ಮರಳಿ ತರುವ ಸಾಧ್ಯತೆಗಳಿವೆ. ಭೂ ಸುಧಾರಣೆಯ ಪ್ರಯತ್ನವು ರಿಯಲ್ ಎಸ್ಟೇಟ್ ಮೂಲಕ ಸಮೃದ್ಧ ಲಾಭ ಪಡೆಯಲು ಮತ್ತಷ್ಟು ಭೂಮಿಯ ಲಭ್ಯತೆಗೆ ಕಾದಿರುವ ಬೆಂಗಳೂರಿನ ಭೂ ಮಾಫಿಯಾದ ಹಿತಾಸಕ್ತಿಗಳಿಗೆ ಅನುಕೂಲ ಮಾಡಿಕೊಡುವಂತಿದೆ.
ಹಿಂದಕ್ಕೆ ಪಡೆದುಕೊಳ್ಳಲು ಸೂಚಿಸಿ
ಕರ್ನಾಟಕ ಸರ್ಕಾರ ತೆಗೆದುಕೊಂಡ ಈ ನಿರ್ಧಾರ ಏಕಪಕ್ಷೀಯವಾಗಿದ್ದು, ರೈತಾಪಿ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಈ ತಿದ್ದುಪಡಿಯು ಭಾರಿ ದೊಡ್ಡ ಪರಿಣಾಮ ಬೀರಲಿದೆ. ಇದನ್ನು ಜಾರಿಗೆ ತರುವ ಮುನ್ನ ವಿಧಾನಸಭೆಯಲ್ಲಿ ಚರ್ಚೆಗೆ ಒಳಪಡಿಸಬೇಕಿದೆ. ಹೀಗಾಗಿ ಲಕ್ಷಾಂತರ ಜನ ರೈತರ ಹಿತಾಸಕ್ತಿಗಾಗಿ, ಈ ಸುಗ್ರೀವಾಜ್ಞೆಯನ್ನು ಹಿಂದಕ್ಕೆ ಪಡೆಯುವಂತೆ ಮುಖ್ಯಮಂತ್ರಿಗೆ ಸೂಚನೆ ನೀಡುವಂತೆ ಮನವಿ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಹೇಳಿದ್ದಾರೆ.