ಅನುಮಾನಕ್ಕೆ ಕಾರಣವಾದ ಕೆಎಎಸ್ ಪರೀಕ್ಷೆ
ಬೆಂಗಳೂರು, ಆ. 10: ಕೊರೊನಾ ವೈರಸ್ ಸಂಕಷ್ಟದ ಕಾಲದಲ್ಲಿ ಸರ್ಕಾರದ ಎಲ್ಲ ನೇಮಕಾತಿಗಳನ್ನು ತಡೆಹಿಡಿಲು ರಾಜ್ಯ ಬಿಜೆಪಿ ಸರ್ಕಾರ ಆದೇಶ ಮಾಡಿದೆ. ಅದಕ್ಕಾಗಿ ಪ್ರತ್ಯೇಕ ಸುತ್ತೋಲೆಯನ್ನೂ ಹೊರಡಿಸಿದೆ. ಆದರೆ ಇದೀಗ ತಾನೇ ಹೊರಡಿಸಿದ ಸುತ್ತೋಲೆಯನ್ನು ಬದಿಗೆ ಸರಿಸಿ, ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್ಸಿ) ತರಾತುರಿಯಲ್ಲಿ ಕೆಎಎಸ್ ಪರೀಕ್ಷೆ ನಡೆಸಲು ಮುಂದಾಗಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
Recommended Video
ರಾಜ್ಯದ 6 ಜಿಲ್ಲೆಗಳಲ್ಲಿ ಮಾತ್ರ ಕೆಪಿಎಸ್ಸಿ ಪರೀಕ್ಷಾ ಕೇಂದ್ರಗಳಿವೆ. ಕೊರೊನಾ ವೈರಸ್ ಸಂಕಷ್ಟದ ಈ ವೇಳೆಯಲ್ಲಿ 30 ಜಿಲ್ಲೆಗಳಿಂದ ವಿದ್ಯಾರ್ಥಿಗಳ ಪ್ರಯಾಣ ಮತ್ತು ವಾಸ್ತವ್ಯ ಬಹಳಷ್ಟು ಅಪಾಯಕಾರಿ. ಈ ಎಲ್ಲ ಅಂಶಗಳನ್ನು ಗಮನಿಸಿ ಆಗಷ್ಟ್ 24 ರಂದು ನಿಗದಿ ಮಾಡಿರುವ ಕೆಪಿಎಸ್ಸಿ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಬೇಕೆಂದು ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ.
ಜೊತೆಗೆ ಕೆಪಿಎಎಸ್ಸಿ ಪರೀಕ್ಷೆ ಬರೆಯುವವರಲ್ಲಿ ಶೇಕಡಾ 20ರಷ್ಟು ಅಭ್ಯರ್ಥಿಗಳು ಸರ್ಕಾರಿ ನೌಕರಿಯಲ್ಲಿದ್ದಾರೆ. ಅವರೆಲ್ಲರೂ ಕಡ್ಡಾಯವಾಗಿ ಕೊರೊನಾ ವಾರಿಯರ್ಸ್ ಎಂದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಂತಹ ಕೊರೊನಾ ವಾರಿಯರ್ಸ್ಗಳಲ್ಲಿ ಯಾರಿಗಾದರೂ ಕೋವಿಡ್ ಸೋಂಕು ಇದ್ದಲ್ಲಿ ಅದು ಬೇರೆಯವರಿಗೂ ಹರಡುವ ಸಾಧ್ಯತೆಯಿದೆ.
ಹೀಗಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಕ್ಷಣ ಈ ಬಗ್ಗೆ ಗಮನ ಹರಿಸಿ, ಪರೀಕ್ಷೆ ಮುಂದೂಡಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.