ಕಾರ್ಮಿಕ ಕಾಯ್ದೆ ತಿದ್ದುಪಡಿ ವಿರುದ್ಧ ಸಿದ್ದರಾಮಯ್ಯ ಗರಂ
ಬೆಂಗಳೂರು, ಮೇ 18: ಆರ್ಥಿಕ ಪುನಶ್ಚೇತನ ಗುರಿಯ ಭಾಗವಾಗಿ ಕೇಂದ್ರ ಸರ್ಕಾರ ಕಾರ್ಮಿಕ ಕಾಯ್ದೆಯ ತಿದ್ದುಪಡಿ ಮಾಡಲು ಹೊರಟಿದೆ. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಕೂಡ ಕೇಂದ್ರದ ನಡೆಯನ್ನು ಅನುಸರಿಸಲು ನಿರ್ಧರಿಸಿದೆ.ಇದಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ.
ಲಾಕ್ಡೌನ್ನಿಂದಾಗಿ ಕಾರ್ಮಿಕ ಸ್ಥಿತಿ ಶೋಚನೀಯವಾಗಿದೆ. ಇಂಥ ಸಂದರ್ಭದಲ್ಲಿ ಕಾಯ್ದೆಗೆ ತಿದ್ದುಪಡಿ ಬೇಡ.ನೀವು ಕಾರ್ಮಿಕ ವಿರೋಧಿಯಾಗಬೇಡಿ. ಈಗ ಇರುವ ಕಾಯ್ದೆಯನ್ನ ಅಮಾನ್ಯ ಮಾಡುವುದಾಗಲೀ, ತಿದ್ದುಪಡಿ ತರುವುದಾಗಲೀ ಮಾಡಬೇಡಿ ಎಂದು ಹೇಳಿದ್ದಾರೆ.
ಮೋದಿ ವಿಶೇಷ ಕೊರೊನಾ ಪ್ಯಾಕೇಜ್: 'ಬೆತ್ತಲೆ ಮನುಷ್ಯನ ಮುಂದೆ ಅರಸನ ಬಟ್ಟೆಗಳ ಮೆರವಣಿಗೆ'
ಕಾರ್ಮಿಕರ ದಿನದ ಕೆಲಸದ ಅವಧಿಯನ್ನು 8 ಗಂಟೆಯಿಂದ 12 ಗಂಟೆಗೆ ವಿಸ್ತರಿಸಲಾಗಿದೆ. ಇದು ಫ್ಯಾಕ್ಟರೀಸ್ ಆ್ಯಕ್ಟ್ನ ಉಲ್ಲಂಘನೆಯಾಗಿದೆ. ಲಾಕ್ಡೌನ್ ಪರಿಸ್ಥಿತಿಯನ್ನು ದುರುಪಯೋಗಿಸಿಕೊಂಡು ಕಾರ್ಮಿಕರನ್ನು ಶೋಷಿಸಲಾಗುತ್ತಿದೆ ಎಂಬ ವಿರೋಧ ವ್ಯಕ್ತವಾಗಿದೆ. ಕಾರ್ಮಿಕ ಕಾಯ್ದೆ ತಿದ್ದುಪಡಿಗೆ ರಾಜ್ಯ ಬಿಜೆಪಿಯೊಳಗೆಯೇ ವಿರೋಧ ಸೃಷ್ಟಿಯಾಗಿದೆ.
ಏಕಪಕ್ಷೀಯವಾಗಿ ತಿದ್ದುಪಡಿ ತರಲು ಹೊರಟಿದೆ
ಕಾರ್ಮಿಕ ಕಾಯ್ದೆಗಳಿಗೆ ಅವಸರದಲ್ಲಿ ಮತ್ತು ಏಕಪಕ್ಷೀಯವಾಗಿ ತಿದ್ದುಪಡಿ ತರಲು ಹೊರಟಿರುವ ರಾಜ್ಯ ಸರ್ಕಾರ ಕೊರೊನಾ ಹಾವಳಿಯಿಂದಾಗಿ ಕಷ್ಟದಲ್ಲಿರುವ ಕಾರ್ಮಿಕರ ಗಾಯದ ಮೇಲೆ ಬರೆ ಹಾಕಲು ನಿರ್ಧರಿಸಿದಂತಿದೆ ಎಂದು ಹೇಳಿದ್ದಾರೆ.
ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ
ಕೊರೊನಾ ಸೋಂಕಿನಿಂದಾಗಿ ನಷ್ಟದಲ್ಲಿರುವ ಉದ್ಯಮಗಳಿಗೆ ನೆರವಾಗುವುದೆಂದರೆ ಕಾರ್ಮಿಕರ ನ್ಯಾಯಬದ್ಧ ಹಕ್ಕುಗಳನ್ನು ಕಿತ್ತುಕೊಂಡು ಅವರನ್ನು ನಿರುದ್ಯೋಗಿಗಳನ್ನಾಗಿ ಮಾಡುವುದಲ್ಲ. ಮಾಲೀಕರದ್ದು ಮಾತ್ರವಲ್ಲ, ಕಾರ್ಮಿಕರ ಹಿತರಕ್ಷಣೆ ಕೂಡಾ ಚುನಾಯಿತ ಸರ್ಕಾರದ ಕರ್ತವ್ಯ.
ಸರ್ಕಾರದ ಪ್ಯಾಕೇಜ್ ಆಕರ್ಷಕವಾಗಿದ್ದರೂ, ಪಾರದರ್ಶಕವಾಗಿಲ್ಲ
ಕಾರ್ಮಿಕ ಪ್ರತಿನಿಧಿಗಳ ಜೊತೆ ಮಾತುಕತೆ ನಡೆಸಬೇಕು
ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ಮಾಡುವ ಮೊದಲು ಕಾರ್ಮಿಕ ಪ್ರತಿನಿಧಿಗಳ ಜೊತೆಯೂ ಮುಖ್ಯಮಂತ್ರಿಬಿ.ಎಸ್.ಯಡಿಯೂರಪ್ಪನವರು ಮಾತುಕತೆ ನಡೆಸಬೇಕು.ವಿಧಾನಮಂಡಲ ಅಧಿವೇಶನದಲ್ಲಿಯೂ ಚರ್ಚೆ ನಡೆಯಬೇಕು.ಈಗಿನ ಅವಸರದ ನಡೆಯ ಹಿಂದೆ ದುರುದ್ದೇಶದ ವಾಸನೆ ಹೊಡೆಯುತ್ತಿದೆ.
ಯಾವ ರಾಜ್ಯಗಳಲ್ಲಿ ಕಾರ್ಮಿಕರ ಕಾಯ್ದೆಗೆ ತಿದ್ದುಪಡಿ
ಕೇಂದ್ರ ಸರ್ಕಾರದ ನಿರ್ಧಾರದಂತೆ ಉತ್ತರ ಪ್ರದೇಶ, ಮಧ್ಯ ಪ್ರದೇಶ ಸೇರಿದಂತೆ ಕೆಲವಾರು ರಾಜ್ಯಗಳು ಕಾರ್ಮಿಕ ಕಾಯ್ದೆಯಲ್ಲಿ ಬದಲಾವಣೆ ತಂದಿವೆ. ಕಾಯ್ದೆಗೆ ಆಗುತ್ತಿರುವ ತಿದ್ದುಪಡಿ ವಿರುದ್ಧ ದೇಶಾದ್ಯಂತ ಬಹುತೇಕ ಕಾರ್ಮಿಕ ಸಂಘಟನೆಗಳು, ವಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಬಿಜೆಪಿ ಬೆಂಬಲಿತ ಭಾರತೀಯ ಮಜ್ದೂರ್ ಸಂಘ ಹೊರತುಪಡಿಸಿ ಉಳಿದ ಬಹುತೇಕ ಕಾರ್ಮಿಕ ಸಂಘಟನೆಗಳು ಮೇ 22ರಂದು ದೇಶವ್ಯಾಪಿ ಪ್ರತಿಭಟನೆ ನಡೆಸಲು ನಿರ್ಧರಿಸಿವೆ.