ಜಮೀರ್ ಅಹ್ಮದ್ ನಿವಾಸದಲ್ಲಿ ಡಿ.ಕೆ.ಶಿವಕುಮಾರ್ : ಸಿದ್ದರಾಮಯ್ಯ ಪ್ರತಿಕ್ರಿಯೆ
ಜಾರಿ ನಿರ್ದೇಶನಾಲಯ (ಇಡಿ) ಇಲಾಖೆಯ ದಾಳಿಯ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಭವ್ಯ ಬಂಗಲೆ ನಿವಾಸಕ್ಕೆ ಮಂಗಳವಾರ (ಆ 10) ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
Recommended Video
ಇದರಲ್ಲೇನಿದೆ ಎನ್ನುವುದಕ್ಕಿಂತ, ಇಡಿ ದಾಳಿಯ ಸುತ್ತಮುತ್ತ ನಡೆಯುತ್ತಿದ್ದ ಊಹಾಪೋಹ ಸುದ್ದಿಗಳಿಗೆ ತೆರೆ ಎಳೆಯಲು ಡಿಕೆಶಿಯವರು ಜಮೀರ್ ಅವರನ್ನು ಭೇಟಿಯಾದಂತಿದೆ. ಭೇಟಿಯ ನಂತರ ಜಮೀರ್ ಅತ್ಯಂತ ಲವಲವಿಕೆಯಿಂದ ಇರುವುದು ಕಂಡು ಬಂದಿದೆ.
ಇಡಿ ದಾಳಿ: ಸಿದ್ದರಾಮಯ್ಯ, ಡಿಕೆಶಿ ಇಬ್ಬರಿಗೂ ಬೇಡವಾದ ಜಮೀರ್ ಅಹ್ಮದ್?
ಇತ್ತ, ಮೈಸೂರಿನಲ್ಲಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಕೂಡಾ, ಡಿಕೆಶಿ ಮತ್ತು ತಮ್ಮ ಶಿಷ್ಯವೃಂದ ಎಂದೇ ಗುರುತಿಸಿಕೊಂಡಿದ್ದ ಜಮೀರ್ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ.
ಇಡಿ ದಾಳಿಯಿಂದ ಕೈ ಪಾಳಯದ ಬಣ ರಾಜಕೀಯಕ್ಕೆ ಹೊಸ ತಿರುವು
ಜಮೀರ್ ಅವರ ಮನೆ ನಿವಾಸದ ಮೇಲೆ ಇಡಿ ದಾಳಿ ನಡೆದಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಅವರ ಹೆಸರು ಕೇಳಿ ಬರುತ್ತಿತ್ತು. "ನನ್ನ ಹಳೆಯ ಪಕ್ಷದವರು ದೂರು ನೀಡಿರಬಹುದು"ಎಂದು ಜಮೀರ್ ಕೂಡಾ ಹೇಳಿದ್ದರು.
ಇಡಿ ದಾಳಿ ನಡೆದ ಬೆಂಗಳೂರಿನ ಬಂಬೂ ಬಜಾರ್ ಮನೆಗೆ ಡಿಕೆಶಿ ಭೇಟಿ
ಇಡಿ ದಾಳಿ ನಡೆದ ಬೆಂಗಳೂರಿನ ಬಂಬೂ ಬಜಾರ್ ಮನೆಗೆ ಡಿಕೆಶಿ ಮಂಗಳವಾರ ಭೇಟಿ ನೀಡಿದ್ದರು. "ಜಮೀರ್ ಅವರು ನಮ್ಮ ಪಕ್ಷದ ಹಿರಿಯ ಸದಸ್ಯರು ಮತ್ತು ಶಾಸಕರು. ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಲು ಮಾಡಲು ಹೋಗಿದ್ದೆ.
ಇಡಿ ತನಿಖೆಯ ಅನುಭವ ನನಗೆ ಇರುವುದರಿಂದ, ಕೆಲವೊಂದು ಮಾಹಿತಿಯನ್ನು ಅವರಿಂದ ಪಡೆದುಕೊಂಡಿದ್ದೇನೆ. ಅಕ್ರಮ ಆಸ್ತಿಯ ವಿಚಾರವಾಗಿದ್ದರೆ ಐಟಿಯವರು ದಾಳಿ ನಡೆಸಬೇಕು. ಕಾನೂನು ಹೋರಾಟ ಮುಂದುವರಿಸಲು ಹೇಳಿದ್ದೇನೆ, ನಿಮ್ಮ ಜೊತೆ ನಾವೆಲ್ಲಾ ಇದ್ದೇವೆ ಎನ್ನುವ ಭರವಸೆಯನ್ನು ಅವರಿಗೆ ನೀಡಿದ್ದೇನೆ.
ನಮ್ಮ ನಾಯಕರಾದಂತಹ ಕಪಿಲ್ ಸಿಬಲ್ ಬಳಿ ಈ ವಿಚಾರ ಚರ್ಚಿಸುತ್ತೇನೆ ಎನ್ನುವ ಮಾತನ್ನು ಅವರಿಗೆ ಹೇಳಿದ್ದೇನೆ"ಎಂದು ಡಿಕೆಶಿ, ಜಮೀರ್ ಮನೆಯ ಹೊರಗೆ ಪ್ರತಿಕ್ರಿಯೆ ನೀಡಿದ್ದಾರೆ.
ಜಮೀರ್ ಗೆ ನನ್ನ ಮೇಲೆ ಬೇಸರವಿದೆ ಎನ್ನುವುದು ಮಾಧ್ಯಮವರ ಸೃಷ್ಟಿ, ಸಿದ್ದರಾಮಯ್ಯ
ಡಿ.ಕೆ.ಶಿವಕುಮಾರ್ - ಜಮೀರ್ ಭೇಟಿಯ ಬಗ್ಗೆ ಮೈಸೂರಿನಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡುತ್ತಾ, "ಜಮೀರ್ ಗೆ ನನ್ನ ಮೇಲೆ ಬೇಸರವಿದೆ ಎನ್ನುವುದು ಮಾಧ್ಯಮವರ ಸೃಷ್ಟಿ. ನನ್ನ ಮೇಲೆ ಬೇಸರವಾಗಲು ಕಾರಣವಾದರೂ ಏನು" ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ, ನನಗೂ ಆತನ ನಡುವೆ ಏನೂ ಸಂಬಂಧ ಹಳಸಿರುವ ವಿದ್ಯಮಾನ ನಡೆದಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.
ಜಮೀರ್ ಅವರು ಅಜ್ಮೀರ್ ಯಾತ್ರಾಸ್ಥಳಕ್ಕೆ ಹೋಗಿದ್ದರು, ನಾನು ಪ್ರವಾಸದಲ್ಲಿದ್ದೆ
"ಜಮೀರ್ ಅವರು ಅಜ್ಮೀರ್ ಯಾತ್ರಾಸ್ಥಳಕ್ಕೆ ಹೋಗಿದ್ದರು, ನಾನು ಕೂಡಾ ಪ್ರವಾಸದಲ್ಲಿದ್ದೆ, ಹಾಗಾಗಿ, ಭೇಟಿಯಾಗಿಲ್ಲ. ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಪ್ರೆಸಿಡೆಂಟ್ ಹಾಗಾಗಿ ಅವರ ಮನೆಗೆ ಹೋಗಿದ್ದಾರೆ. ಎಲ್ಲದಕ್ಕೂ ರಾಜಕೀಯ ಬಣ್ಣವನ್ನು ಕಟ್ಟಬೇಡಿ"ಎಂದು ಸಿದ್ದರಾಮಯ್ಯನವರು ಮಾಧ್ಯಮದವರಿಗೆ ತಾಕೀತು ಮಾಡಿದರು. ಇಡಿ ದಾಳಿಯ ನಂತರ ಸಿದ್ದರಾಮಯ್ಯನವರು ಜಮೀರ್ ಜೊತೆ ಅಂತರವನ್ನು ಕಾಯ್ಡುಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು.
ಜಮೀರ್ ಅವರ ನಿವಾಸಕ್ಕೆ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ
ಸಿದ್ದರಾಮಯ್ಯನವರೇ ಮುಂದಿನ ಸಿಎಂ ಎನ್ನುವ ಮೂಲಕ ಜಮೀರ್ ಅವರು ಕಾಂಗ್ರೆಸ್ಸಿನಲ್ಲಿ ಹಲವರ ವಿರೋಧವನ್ನು ಕಟ್ಟಿಕೊಂಡರು. ಒಂದು ಹಂತದಲ್ಲಿ ಉಸ್ತುವಾರಿಯಿಂದಲೂ ಎಚ್ಚರಿಕೆ ಬಂದಿತ್ತು. ಹೀಗಾಗಿ, ಡಿಕೆಶಿಯವರು ಇವರನ್ನು ದೂರವೇ ಇಟ್ಟಿದ್ದರು ಎನ್ನುವ ಸುದ್ದಿ ಹರಿದಾಡುತ್ತಿತ್ತು. ಹಾಗಾಗಿ, ಜಮೀರ್ ಅವರ ನಿವಾಸಕ್ಕೆ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ.