ಕುತೂಹಲ ಮೂಡಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ದೂರವಾಣಿ ಕರೆ!
ಬೆಂಗಳೂರು, ಅ. 30: ಮುಂದಿನ ಮುಖ್ಯಮಂತ್ರಿ ವಿಚಾರ ಕಾಂಗ್ರೆಸ್ ಪಕ್ಷದಲ್ಲಿ ಮತ್ತೆ ಪ್ರತಿಧ್ವನಿಸಿದೆ. ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರು ಆರ್ ಆರ್ ನಗರ ಚುನಾವಣೆ ಪ್ರಚಾರದಲ್ಲಿ ನಿನ್ನೆ (ಅ. 29) ಮತ್ತೆ ಪುನರುಚ್ಚರಿಸಿದ್ದಾರೆ. ಇದೇ ಸಂದರ್ಭದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಜಮೀರ್ ಅಹ್ಮದ್ ಖಾನ್ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಇದು ಕಾಂಗ್ರೆಸ್ ವಲಯದಲ್ಲಿ ಮತ್ತಷ್ಟು ಚರ್ಚೆ ಹುಟ್ಟುಹಾಕಿದೆ.
ಕಳೆದ ಎರಡು ದಿನಗಳಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಶಿರಾ ಉಪ ಚುನಾವಣೆ ಪ್ರಚಾರದಲ್ಲಿದ್ದರು. ಅವರು ಶಿರಾದಲ್ಲಿದ್ದಾಗ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿ ಆಗಬೇಕು ಎಂಬುದು ಜನರ ಒತ್ತಾಯವೂ ಆಗಿದೆ. ಹಾಗೆ ನನ್ನ ವೈಯಕ್ತಿಕ ಅಭಿಪ್ರಾಯವೂ ಆಗಿದೆ ಎಂದು ಹೇಳಿಕೆ ನೀಡಿದ್ದರು. ಹೀಗಾಗಿ ಸಿದ್ದರಾಮಯ್ಯ ಅವರು ಜಮೀರ್ ಅಹ್ಮದ್ ಖಾನ್ ಅವರಿಗೆ ದೂರವಾಣಿ ಕರೆ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜಮೀರ್ ಅಹ್ಮದ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾದರೂ ಏನು? ಮುಂದಿದೆ ಮಾಹಿತಿ.
ಶಿಸ್ತು ಕ್ರಮದ ಎಚ್ಚರಿಕೆ!
ಮುಂದಿನ ಸಿಎಂ ಹೇಳಿಕೆಗಳ ಕುರಿತು ಕೆಪಿಸಿಸಿ ಶಿಸ್ತು ಸಮಿತಿ ಎಚ್ಚರಿಕೆಯನ್ನೂ ಕೊಟ್ಟಿದೆ. ಯಾರು? ಯಾರು? ಈ ಬಗ್ಗೆ ಹೇಳಿಕೆ ಕೊಟ್ಟಿದ್ದಾರೊ ಅವರೆಲ್ಲರಿಗೂ ಕಾಂಗ್ರೆಸ್ ಶಿಸ್ತು ಕ್ರಮ ಸಮಿತಿ ವತಿಯಿಂದ ನೋಟಿಸ್ ಕೊಡಲಾಗುವುದು ಎಂದು ಸಮಿತಿ ಸದಸ್ಯ, ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ್ ಅವರು ಕೆಲ ದಿನಗಳ ಹಿಂದೆ ಎಚ್ಚರಿಕೆಯನ್ನೂ ಕೊಟ್ಟಿದ್ದರು. ಅದಾದ ಬಳಿಕವೂ ಜಮೀರ್ ಅಹ್ಮದ್ ಖಾನ್ ಅವರು ಮತ್ತೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಬೇಕು ಎಂದು ಹೇಳಿಕೆ ಕೊಟ್ಟಿದ್ದಾರೆ.
ಸಿದ್ದರಾಮಯ್ಯ ಸಿಎಂ ಆಗಬೇಕು ಎಂಬ ನನ್ನ ಹೇಳಿಕೆ ಪಕ್ಷ ವಿರೋಧಿ ಚಟುವಟಿಕೆ ಆಗುವುದಿಲ್ಲ. ನನಗೆ ಶಿಸ್ತುಕ್ರಮದ ನೋಟಿಸ್ ಕೊಟ್ಟರೆ ಅದಕ್ಕೆ ಉತ್ತರಿಸುತ್ತೇನೆ ಎಂದು ಜಮೀರ್ ಅಹ್ಮದ್ ಖಾನ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಅದಕ್ಕೆ ಡಿಕೆಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಮೀರ್ ಹೇಳಿಕೆಗೆ ಡಿಕೆಶಿ ಗರಂ
ಆ ಹೇಳಿಕೆ ಕುರಿತು ಪ್ರತಿಕ್ರಿಯೆ ಕೊಟ್ಟಿರುವ ಕಾಂಗ್ರೆಸ್ ಪಕ್ಷದಲ್ಲಿನ ಸಿಎಂ ಸ್ಥಾನದ ಮತ್ತೊಬ್ಬ ಪ್ರಬಲ ಆಕಾಂಕ್ಷಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಆ ಬಗ್ಗೆ ಜಮೀರ್ ಅಹ್ಮದ್ ಅವರನ್ನೇ ಕೇಳಿ ಎಂದು ಹೇಳುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋನಿಯಾ ಗಾಂಧಿ ಅವರೇ ದೂರವಾಣಿ ಕರೆ ಮಾಡಿ ಜಮೀರ್ ಅಹ್ಮದ್ ಅವರಿಗೆ ಮುಂದಿನ ಸಿಎಂ ಕುರಿತು ಮಾತನಾಡಿರಬಹುದು ಎಂದಿದ್ದಾರೆ.
ಮೊದಲ ಬಾರಿ ಜಮೀರ್ ಅಹ್ಮದ್ ಅವರು ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಹೇಳಿಕೆ ಕೊಟ್ಟಾಗ ಡಿಕೆಶಿ ಅದು ಸಹಜ ಮಾತು ಎಂದಿದ್ದರು. ಆದರೆ ಇದೀಗ ಪರೋಕ್ಷವಾಗಿ ಜಮೀರ್ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಮಾತನಾಡಿದ್ದು ಏನು?
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶಾಸಕ ಜಮೀರ್ ಅಹ್ಮದ್ ಅವರಿಗೆ ಫೋನ್ ಕರೆ ಮಾಡಿ ಮಾತನಡಿದ್ದಾರೆ. ಆದರೆ ಮುಂದಿನ ಸಿಎಂ ವಿಚಾರವಾಗಿ ಸಿದ್ದರಾಮಯ್ಯ ಅವರು ಜಮೀರ್ ಅವರೊಂದಿಗೆ ಯಾವುದೇ ಚರ್ಚೆ ಮಾಡಿಲ್ಲ. ಬದಲಿಗೆ ಇದೇ ಶನಿವಾರ (ಅ.29) ಹಾಗೂ ಭಾನುವಾರ (ಅ. 30) ಎರಡೂ ದಿನಗಳಂದು ಶಿರಾ ವಿಧಾನಸಭಾ ಕ್ಷೇತ್ರದಲ್ಲೇ ಉಳಿದು ಎಲ್ಲ ಅಲ್ಪಸಂಖ್ಯಾತ ಮತದಾರರಿಗೆ ಮಾಹಿತಿ ಕೊಡಬೇಕು.
ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಜಾರಿಗೆ ತಂದಿದ್ದ ಕಲ್ಯಾಣ ಯೋಜನೆಗಳು ಅಲ್ಪಸಂಖ್ಯಾತರ ಗಮನಕ್ಕೆ ತರಬೇಕು ಜೊತೆಗೆ ಯಾವುದೇ ಕಾರಣದಿಂದಲೂ ಅಲ್ಪಸಂಖ್ಯಾತ ಮತಗಳು ವಿಭಜನೆ ಆಗದಂತೆ ನೋಡಿಕೊಳ್ಳಬೇಕು. ಎಲ್ಲ ಅಲ್ಪಸಂಖ್ಯಾತ ಸಮುದಾಯಗಳ ಮುಖಂಡರೊಂದಿಗೆ ಸಭೆ ನಡೆಸಿ ಈ ಬಾರಿ ಶಿರಾದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಅವರ ಮನವೊಲಿಸಬೇಕು ಎಂದು ಸೂಚಿಸಿದ್ದಾರೆ.
Recommended Video
ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ
ಒಟ್ಟಾರೆ ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಮುಖ್ಯಮಂತ್ರಿ ವಿಚಾರವಾಗಿ ಎರಡು ಬಣಗಳು ಪ್ರತ್ಯೇಕ ಆಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದರೆ ಅದರ ಹಿಂದಿನ ಮರ್ಮ ಮಾತ್ರ ಯಾರಿಗೂ ಅರ್ಥವಾಗುತ್ತಿಲ್ಲ. ಅದೊಂದು ಮತ ವಿಭಜನೆಯ ತಂತ್ರ ಎಂದು ಹೇಳಲಾಗುತ್ತಿದ್ದರೂ, ನಿನ್ನೆ (ಅ. 29) ಆ ವಿಚಾರದ ಬಗ್ಗೆ ಕೆಪಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಗರಂ ಆಗಿರುವುದು ಇದು ರಾಜಕೀಯ ತಂತ್ರಗಾರಿಕೆ ಇಲ್ಲದಿರಬಹುದು ಎಂಬ ಚರ್ಚೆಗೂ ಮುನ್ನುಡಿ ಬರೆದಿದೆ. ಒಟ್ಟಾರೆ ಮುಂದಿನ ಸಿಎಂ ವಿಚಾರ ಕಾಂಗ್ರೆಸ್ ಪಕ್ಷಕ್ಕೆ ಲಾಭ ತಂದು ಕೊಡುತ್ತದೆಯಾ? ಅಥವಾ ಮತ್ತಷ್ಟು ಹಾನಿಯನ್ನುಂಟು ಮಾಡಲಿದೆಯಾ ಎಂಬುದು ಉಪ ಚುನಾವಣೆ ಫಲಿತಾಂಶದಲ್ಲಿ ಗೊತ್ತಾಗಲಿದೆ.