ಫಿಲಂ ಸಿಟಿ ಎತ್ತಂಗಡಿ: ಎಚ್ಡಿಕೆ ವಿರುದ್ಧ ಸಿದ್ದರಾಮಯ್ಯ ಗುಟುರು
Recommended Video
ಬೆಂಗಳೂರು, ಆಗಸ್ಟ್ 6: ಚಿತ್ರನಗರಿಯನ್ನು ಮೈಸೂರಿನಿಂದ ರಾಮನಗರಕ್ಕೆ ವರ್ಗ ಮಾಡಿದ್ದಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಗಾದೆ ತೆಗೆದಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿಯವರಿಗೆ ಪತ್ರ ಬರೆದು ತಮ್ಮ ಆಕ್ಷೇಪ ಹೊರಹಾಕಿದ್ದಾರೆ.ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆಯಾಗಬೇಕು ಎಂಬುದು ಕನ್ನಡ ಚಿತ್ರರಂಗದ ಬಹು ವರ್ಷಗಳ ಬೇಡಿಕೆ ಹಾಗೂ ಕನಸಾಗಿದೆ.
ಸಿದ್ದರಾಮಯ್ಯ ಕರೆದಿದ್ದ ನೈಟ್ ಪಾರ್ಟಿಯಲ್ಲಿ ಬಿಸಿಬಿಸಿ ಚರ್ಚೆ!
ಮೈಸೂರು ಹಾಗೂ ಸುತ್ತಮುತ್ತಲಿನ ತಾಣ ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು ಸೇರಿದಂತೆ ಹಲವಾರು ಭಾಷೆಗಳ ಚಿತ್ರ ನಿರ್ಮಾಪಕರು ಚಿತ್ರೀಕರಣಕ್ಕಾಗಿ ಇಷ್ಟಪಡುವ ತಾಣ ಮೈಸೂರು. ಇಲ್ಲಿನ ಸುತ್ತಮುತ್ತಲಿನ ಪರಿಸರ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತಿದೆ ಹಾಗಿರುವಾಗ ಮೈಸೂರಿನಿಂದ ರಾಮನಗರಕ್ಕೆ ಚಿತ್ರನಗರಿ ವರ್ಗ ಮಾಡಿರುವುದು ಸಮಂಜಸವಲ್ಲ ಎಂದು ಪತ್ರದಲ್ಲಿ ಬರೆದಿದ್ದಾರೆ.
1945ರಿಂದ ಮೈಸೂರು ಹಾಗೂ ಸುತ್ತಲಿನ ಪ್ರದೇಶದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಮೈಸೂರಿನಲ್ಲಿ ಮೊದಲ ಬಾರಿಗೆ ನವಜ್ಯೋತಿ ಸ್ಟುಡಿಯೋ ಆರಂಭವಾಗಿತ್ತು. ನೂರಾರು ಸಿನಿಮಾಗಳು ಅಲ್ಲಿ ಚಿತ್ರೀಕರಣಗೊಂಡಿವೆ. ಹಲವಾರು ಪ್ರತಿಭಾವಂತ ನಟ-ನಟಿಯರು ಹಾಗೂ ತಾಂತ್ರಿಕ ಬಳಗವನ್ನು ಚಿತ್ರರಂಗಕ್ಕೆ ಪರಿಚಯಿಸಿದೆ.
16 ಅರಮನೆಗಳು, 250ಕ್ಕೂ ಹೆಚ್ಚು ಲೊಕೇಷನ್ಗಳು, ನದಿ, ನಾಲೆ, ಕಾಲುವೆ, ಬೆಟ್ಟಗುಡ್ಡಗಳು ಚಿತ್ರೀಕರಣಕ್ಕೆ ಉತ್ತಮ ತಾಣವಾಗಿದೆ. ಇದೀಗ ವಿಮಾನ ಸೌಲಭ್ಯವೂ ಇದೆ. ಇದೆಲ್ಲದಕ್ಕಿಂತ ಮೈಸೂರಿನಲ್ಲಿಯೇ ಚಿತ್ರನಗರಿ ಸ್ಥಾಪನೆಯಾಗಬೇಕು ಎಂದು ದಿ. ಡಾ. ರಾಜಕುಮಾರ್ ಕನಸು ಕಂಡಿದ್ದರು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಹಿಂದಿನ ಕಾಂಗ್ರೆಸ್ ಸರ್ಕಾರ ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪಿಸುವ ನಿರ್ಣಯವನ್ನು ಕೈಗೊಂಡು ನೂರು ಎಕರೆ ಜಮೀನು ಮಂಜೂರು ಮಾಡಿತ್ತು. ಬಜೆಟ್ನಲ್ಲಿಯೂ ಅಧಿಕೃತವಾಗಿ ಘೋಷಿಸಲಾಗಿತ್ತು. ಆದರೆ ರಾಮನಗರ ಸ್ಥಳಾಂತರಿಸುವ ಬಗ್ಗೆ ಬಜೆಟ್ನಲ್ಲಿ ಘೋಷಣೆ ಮಾಡಿದ್ದೀರಾ, ನಿಮ್ಮ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಿ ಎಂದು ಸಿದ್ದರಾಮಯ್ಯ ಪತ್ರದ ಮೂಲಕ ತಿಳಿಸಿದ್ದಾರೆ.