ನಾನು ಯಾರನ್ನು ಮದುವೆ ಆಗಬೇಕು ಅಂತ ಹೇಳೋದ್ಕೆ ನೀವ್ಯಾರು?: ಸಿದ್ದರಾಮಯ್ಯ!
ಬೆಂಗಳೂರು, ನ. 21: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮದುವೆ ವಿಚಾರದಲ್ಲಿ ಗರಂ ಆಗಿದ್ದಾರೆ. ತಮ್ಮ ಕುರಿತು ಬಿಜೆಪಿ ನಾಯಕರ ಹೇಳಿಕೆಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಇದೇ ಸಂದರ್ಭದಲ್ಲಿ ಬಸವಕಲ್ಯಾಣ ಉಪ ಚುನಾವಣೆಯ ಬಗ್ಗೆಯೂ ಮಾತನಾಡಿದ್ದಾರೆ.
ಲವ್ ಜಿಹಾದ್ ಕುರಿತು ಹಾಗೂ ಅದಕ್ಕೆ ಪ್ರತ್ಯೇಕ ಕಾನೂನು ತರುವ ಬಗ್ಗೆ ಬಿಜೆಪಿ ನಾಯಕರ ಅದರಲ್ಲಿಯೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಆಕ್ಷೇಪ ವ್ಯಕ್ತಡಿಸಿದ್ದಾರೆ. ಮಸ್ಕಿ ಉಪ ಚುನಾವಣೆಯಲ್ಲಿ ಬಿಜೆಪಿಗೆ ಎದಿರೇಟು ಕೊಡಲು ಕಾಂಗ್ರೆಸ್ ನಾಯಕರು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ, ಕಾಂಗ್ರೆಸ್ ನಾಯಕರ ಉಪ ಚುನಾವಣೆ ತಯಾರಿ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ರಿವರ್ಸ್ ಆಪರೇಷನ್ ಫಲಪ್ರದ
ಇದೇ ನವೆಂಬರ್ 23 ರಂದು ರಾಯಚೂರು ಜಿಲ್ಲೆ ಮಸ್ಕಿಯಲ್ಲಿ ಬಸನಗೌಡ ತುರವಿಹಾಳ (ಬಿಜೆಪಿ ನಾಯಕ) ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದಾರೆ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ಕೊಟ್ಟಿದ್ದಾರೆ. ಅವರೇ ಮಸ್ಕಿ ಉಪ ಚುನಾವಣೆಗ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಯಾಗಿದ್ದಾರೆ. ಈ ಬಗ್ಗೆ ಪಕ್ಷದ ಸ್ಥಳೀಯ ಕಾರ್ಯಕರ್ತರ ಜೊತೆ ಸಭೆ ನಡೆಸುತ್ತೇವೆ. ಜೊತೆಗೆ ಅಂದು ಮಸ್ಕಿಯಲ್ಲಿ ಸಮಾವೇಶ ಮಾಡುತ್ತೇವೆ ಎಂದಿದ್ದಾರೆ.
ಲವ್ ಜಿಹಾದ್: ರಾಜ್ಯ ಬಿಜೆಪಿ ಸರ್ಕಾರದ ಮಹತ್ವದ ತೀರ್ಮಾನ!
ಉಪ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ಎರಡು ಲಾಭಗಳಿರುತ್ತವೆ. ಒಂದು ಆಡಳಿತ ದುರುಪಯೋಗ ಮಾಡಿಕೊಳ್ಳುತ್ತಾರೆ, ಎರಡು ಯಾವ ಪಕ್ಷ ಅಧಿಕಾರದಲ್ಲಿರುತ್ತದೆಯೊ ಅವರೇ ಗೆಲ್ಲುತ್ತಾರೆ. ನಾನು ಸಿಎಂ ಆಗಿದ್ದಾಗಲೂ ಹಾಗೇ ಆಗಿತ್ತು. ಒಂದು ಕ್ಷೇತ್ರ ಬಿಟ್ಟು ಉಳಿದೆಲ್ಲವನ್ನೂ ಗೆದ್ದಿದ್ದೆವು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಹಣದ ಕೊರತೆ ಕಾರಣ
ಶಿರಾ ಉಪ ಚುನಾವಣೆಯದಲ್ಲಿ ನಾವು ಹಣದ ಕೊರತೆಯಿಂದ ಸೋತೆವು. ಅಲ್ಲಿ ಬಿಜೆಪಿಯವರು ಸಿಕ್ಕಾಪಟ್ಟೆ ಹಣ ಹಂಚಿದ್ದರು. ಉಪ ಚುನಾವಣೆಗಳ ಫಲಿತಾಂಶ ಸಾರ್ವತ್ರಿಕ ಚುನಾವಣೆಗೆ ಅನ್ವಯವಾಗುವುವುದಿಲ್ಲ ಎಂದು ಹೇಳುವ ಮೂಲಕ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು!
ಗೋ ಹತ್ಯೆ ಮಸೂದೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ವಿರುದ್ಧ ಕಿಡಿಕಾರಿದ್ದಾರೆ. ಉತ್ತರ ಪ್ರದೇಶದಲ್ಲಿ ಗೋ ಮಾಂಸವನ್ನು ಹೆಚ್ಚು ರಪ್ತು ಮಾಡುತ್ತಾರೆ. ಅಲ್ಲಿ ಯಾವ ಪಕ್ಷದ ಆಡಳಿತವಿದೆ ಎಂಬುದನ್ನು ಮೊದಲು ಹೇಳಲಿ. ಆಮೇಲೆ ಗೋ ಹತ್ಯೆ ನಿಷೇಧ ಮಾಡಲಿ. ಇಲ್ಲಿ ಬಂದು ಸಿ.ಟಿ ರವಿ ಬುರುಡೆ ಬಿಡುವುದು ಬೇಡ ಎಂದು ಸಿ.ಟಿ.ರವಿ ಅವರಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
'ಲವ್ ಜಿಹಾದ್' ಕೋಮು ವಿಭಜನೆಗಾಗಿ ಬಿಜೆಪಿಯೇ ಸೃಷ್ಟಿಸಿದ ಪದ: ಗೆಹ್ಲೋಟ್
ಜೊತೆಗೆ ಇದಕ್ಕೆಲ್ಲ ಆರ್ಎಸ್ಎಸ್ ಕಾರಣ ಎಂದಿರುವ ಅವರು, ಆರೆಸ್ಸೆಸ್ ಈಸ್ ಮೈ ಫಸ್ಟ್ ಪೊಲಿಟಿಕಲ್ ಅಪೋನೆಂಟ್. ನಾನು ಆರೆಸ್ಸೆಸ್ ವಿರೋಧಿ. ಆರೆಸ್ಸೆಸ್ ಬಗ್ಗೆ ನನಗೆ ಗೊತ್ತಿಲ್ಲ ಎನ್ನುವ ಸಿ.ಟಿ. ರವಿ, ಹೆಗ್ಡೆವಾರ್ ಅವರ ಜೊತೆ ಇದ್ನಾ? ಸಿ.ಟಿ ರವಿ ಆರ್ಎಸ್ಎಸ್ನ ಸಂಸ್ಥಾಪಕ ಸದಸ್ಯರಾ? ಹೆಗ್ಡೆವಾರ್ ಅವ್ರು ಕಾಂಗ್ರೆಸ್ ಪಕ್ಷದಲ್ಲಿ ಇದ್ದವರು. ಗೋಲ್ವಾಲ್ಕರ್ ಅವರು ಆರ್ಎಸ್ಎಸ್ನ ಎರಡನೇ ಸರಸಂಘಚಾಲಕರು. ಇವರು ಎಲ್ಲಿದ್ದರು? ಕಾಂಗ್ರೆಸ್ನಲ್ಲಿ ತಾನೇ? ಜನ ಸಂಘ ಇದ್ದಾಗ ಸಿಟಿ ರವಿ ಎಲ್ಲಿದ್ದ? ಎಂದು ಏಕವಚನದಲ್ಲಿಯೇ ಸಿ.ಟಿ. ರವಿ ಅವರನ್ನು ಸಿದ್ದರಾಮಯ್ಯ ಅವರು ತಮ್ಮ ಮಾತಿನಲ್ಲಿಯೇ ತರಾಟೆಗೆ ತೆಗೆದುಕೊಂಡರು.
ಮದುವೆ ತೀರ್ಮಾನ ಮಾಡೋದ್ಕೆ ನೀವ್ಯಾರು?
ಲವ್ ಜಿಹಾದ್ಗಾಗಿ ಮತಾಂತರ ನಿಷೇಧ ಕಾನೂನು ತರುವ ಬಗ್ಗೆಯೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ. ಹೊಸ ಕಾನೂನು ತರುವ ಕುರಿತು ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರಿನ್ನೂ ಮನುಸ್ಮೃತಿ ಕಾಲದಲ್ಲಿಯೇ ಇದ್ದಾರೆ. ಸಂವಿಧಾನದ ಬಗ್ಗೆ ಅವರಿಗೆ ಗೌರವ ಇಲ್ಲ. ನಾನು ಯಾರನ್ನು ಮದುವೆ ಆಗಬೇಕು ಅಂತ ಹೇಳಕ್ಕೆ ನೀವ್ಯಾರು? ಅವರು ಹೇಳಿರೋರನ್ನು ಮದುವೆ ಆಗೋಕೆ ಸಾಧ್ಯವೇ? ಮದುವೆ ಆಗೋದು ಅವರವರ ವೈಯುಕ್ತಿಕ ವಿಚಾರ. ಯಾರು ಯಾರ ಮೇಲೆಯೂ ಬಲವಂತ ಮಾಡೋಕೆ ಆಗಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೊಸ ಕಾನೂನಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಯಾರನ್ನು ಮದುವೆ ಆಗಬೇಕು? ಯಾವ ಧರ್ಮ ಆಚರಣೆ ಮಾಡಬೇಕು ಎಂಬುದು ವೈಯಕ್ತಿಕ. ಜೊತೆಗೆ ಮತಾಂತರ ಕೂಡ ವೈಯುಕ್ತಿಕ ನಿರ್ಧಾರ. ಅದನ್ನು ತಡಯಲು ಆಗುವುದಿಲ್ಲ ಎಂದು ಲವ್ ಜಿಹಾದ್ ತಡೆಯಲು ಹೊಸ ಕಾನೂನು ತರುವ ಕುರಿತು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.