ಉಪ ಚುನಾವಣೆ; ಸಿದ್ದರಾಮಯ್ಯ ತಂತ್ರದಿಂದ ಬಿಜೆಪಿಗೆ ಸಂಕಷ್ಟ!
Recommended Video
ಬೆಂಗಳೂರು, ಅಕ್ಟೋಬರ್ 16 : ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾದ ಬಳಿಕ ಸಿದ್ದರಾಮಯ್ಯ ಉಪ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಮಾಜಿ ಮುಖ್ಯಮಂತ್ರಿಗಳ ತಂತ್ರದಿಂದಾಗಿ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿಗೆ ಸಂಕಷ್ಟ ಎದುರಾಗಿದೆ.
ಡಿಸೆಂಬರ್ 5ರಂದು ನಡೆಯುವ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕನಿಷ್ಠ 10 ಕ್ಷೇತ್ರಗಳಲ್ಲಿ ಗೆಲ್ಲಬೇಕು ಎಂಬುದು ಸಿದ್ದರಾಮಯ್ಯ ಪಣ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮೈತ್ರಿ ಸರ್ಕಾರ ಉರುಳಿಸಿದ ಶಾಸಕರಿಗೆ ಉಪ ಚುನಾವಣೆಯಲ್ಲಿ ಮುಖಭಂಗವಾಗಬೇಕು ಎಂದು ತಂತ್ರ ರೂಪಿಸುತ್ತಿದ್ದಾರೆ.
ಉಪ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಹಿನ್ನಡೆ; ಸಮೀಕ್ಷೆ ವರದಿ
ಉಪ ಚುನಾವಣೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಿಜೆಪಿಯಲ್ಲಿ ಅಸಮಾಧಾನ ಉಂಟಾಗಿರುವುದು ಗುಟ್ಟಾಗಿ ಉಳಿದಿಲ್ಲ. ಇದನ್ನು ಬಂಡವಾಳ ಮಾಡಿಕೊಂಡು ಗೆಲುವಿನ ಅಲೆಯಲ್ಲಿ ತೇಲಬೇಕು, ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಬೇಕು ಎಂಬುದು ಸಿದ್ದರಾಮಯ್ಯ ತಂತ್ರವಾಗಿದೆ.
15 ಕ್ಷೇತ್ರದ ಉಪ ಚುನಾವಣೆ; ಸಿದ್ದರಾಮಯ್ಯ ಟಾರ್ಗೆಟ್ 10 ಕ್ಷೇತ್ರ
ಕಾಂಗ್ರೆಸ್ ಉಪ ಚುನಾವಣೆ ಸಂಪೂರ್ಣ ಹೊಣೆಯನ್ನು ಸಿದ್ದರಾಮಯ್ಯಗೆ ವಹಿಸಿದೆ. ಪಕ್ಷದ ಸೋಲು-ಗೆಲುವು ಎಲ್ಲದಕ್ಕೂ ಅವರೇ ಜವಾಬ್ದಾರಿ. ಉಪ ಚುನಾವಣೆಯನ್ನು ಪ್ರತಿಷ್ಠಿಯ ಪ್ರಶ್ನೆಯಾಗಿ ತೆಗೆದುಕೊಂಡಿರುವ ಸಿದ್ದರಾಮಯ್ಯ ಬಿಜೆಪಿಗೆ ಮುಖಭಂಗ ಉಂಟು ಮಾಡಬೇಕು ಎಂದು ತಂತ್ರ ಹಣೆಯುತ್ತಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಮೊದಲ ಟಾಸ್ಕ್ ಕೊಟ್ಟ ಹೈಕಮಾಂಡ್!
ಸಿದ್ದರಾಮಯ್ಯ ತಂತ್ರ -1
15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕನಿಷ್ಠ 10 ಕ್ಷೇತ್ರಗಳಲ್ಲಿ ಗೆಲ್ಲಬೇಕು ಎಂಬುದು ಸಿದ್ದರಾಮಯ್ಯ ತಂತ್ರ. ಅದಕ್ಕಾಗಿ ಗೆದ್ದೆ ಗೆಲ್ಲುವ ಕ್ಷೇತ್ರಗಳ ಪಟ್ಟಿಯನ್ನು ತಯಾರು ಮಾಡಲಿದ್ದಾರೆ. ಕ್ಷೇತ್ರದ ಉಸ್ತುವಾರಿಗಳ ಜೊತೆ ನಿರಂತರ ಸಭೆಗಳನ್ನು ನಡೆಸಿ, ಕ್ಷೇತ್ರ ಕೈ ಬಿಟ್ಟು ಹೋಗದಂತೆ ನೋಡಿಕೊಳ್ಳಲಿದ್ದಾರೆ.
ಸಿದ್ದರಾಮಯ್ಯ ತಂತ್ರ -2
ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿರುವ ಬಿಜೆಪಿ ನಾಯಕರು ಈಗಾಗಲೇ ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಅವರನ್ನು ಕಾಂಗ್ರೆಸ್ಗೆ ಸೆಳೆದು ಟಿಕೆಟ್ ನೀಡುವುದು ಸಿದ್ದರಾಮಯ್ಯ ತಂತ್ರವಾಗಿದೆ. ಅದಕ್ಕಾಗಿ ಹೊಸಕೋಟೆ, ಕಾಗವಾಡ, ಹಿರೇಕೆರೂರು ಕ್ಷೇತ್ರದ ಮೇಲೆ ಸಿದ್ದರಾಮಯ್ಯ ವಿಶೇಷ ಗಮನ ಹರಿಸಿದ್ದಾರೆ.
ಸಿದ್ದರಾಮಯ್ಯ ತಂತ್ರ - 3
ಕೆ. ಆರ್. ಪುರಂ, ಮಹಾಲಕ್ಷ್ಮೀ ಲೇಔಟ್ನಲ್ಲಿ ಬಿಜೆಪಿ ನಾಯಕರನ್ನು ಸೆಳೆಯಲು, ಯಶವಂತಪುರದಲ್ಲಿ ಜೆಡಿಎಸ್ ನಾಯಕರನ್ನು ಸೆಳೆಯಲು ಪಕ್ಷದ ನಾಯಕರಿಗೆ ಸೂಚನೆ ನೀಡಿದ್ದಾರೆ. ಹೈಕಮಾಂಡ್ ಸಹ ವಲಸಿಗರಿಗೆ ಟಿಕೆಟ್ ನೀಡಲು ಒಪ್ಪಿಗೆ ನೀಡಿದೆ ಎಂದು ತಿಳಿದುಬಂದಿದೆ.
ಸಿದ್ದರಾಮಯ್ಯ ತಂತ್ರ -4
ಲೋಕಸಭಾ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ್ದ ಕಾಂಗ್ರೆಸ್ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ನಾಯಕರ ನಡುವಿನ ಅಸಮಾಧಾನಗಳನ್ನು ಬದಿಗೊತ್ತಿ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಸಿದ್ದರಾಮಯ್ಯ ಪಕ್ಷದ ಕ್ಷೇತ್ರದ ನಾಯಕರಿಗೆ ಸೂಚನೆ ಕೊಟ್ಟಿದ್ದಾರೆ.