ಮಂಗಳೂರು ಗಲಭೆ; ಸದನದಲ್ಲಿ ಸಿದ್ದರಾಮಯ್ಯ ಖಡಕ್ ಭಾಷಣ
ಬೆಂಗಳೂರು, ಫೆಬ್ರವರಿ 19 : ಪೌರತ್ವ ತಿದ್ದುಪಡೆ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಡಿಸೆಂಬರ್ 19ರಂದು ನಡೆದ ಪ್ರತಿಭಟನೆ, ಗಲಭೆ, ಪೊಲೀಸ್ ಗೋಲಿಬಾರ್ ಬಗ್ಗೆ ವಿಧಾನಸಭೆಯಲ್ಲಿ ಬುಧವಾರ ಸುಧೀರ್ಘ ಚರ್ಚೆ ನಡೆಯಿತು. ಕಾಂಗ್ರೆಸ್ ಮತ್ತು ಜೆಡಿಎಸ್ನ ಹಲವು ಸದಸ್ಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರು ಗಲಭೆ ಬಗ್ಗೆ ಚರ್ಚೆ ನಡೆಸಲು ಸ್ಪೀಕರ್ ಅನುಮತಿ ಕೊಟ್ಟಿಲ್ಲ ಎಂದು ಮಂಗಳವಾರ ಸನದಲ್ಲಿ ಬಿಸಿ-ಬಿಸಿ ಚರ್ಚೆ ನಡೆದಿತ್ತು. ಕಾಂಗ್ರೆಸ್ ಸದಸ್ಯರು ಸ್ಪೀಕರ್ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಸಭಾತ್ಯಾಗ ನಡೆಸಿದ್ದರು.
ಮಂಗಳೂರು ಗೋಲಿಬಾರ್: ಸರ್ಕಾರವನ್ನು ಬೆತ್ತಲು ಮಾಡಿದ ಕುಮಾರಸ್ವಾಮಿ
ಬುಧವಾರದ ಕಲಾಪದಲ್ಲಿ ಮಂಗಳೂರು ಗಲಭೆ ಬಗ್ಗೆ ಚರ್ಚೆ ನಡೆಯಿತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಸಭಾ ನಾಯಕ ಎಚ್. ಡಿ. ಕುಮಾರಸ್ವಾಮಿ ಮಂಗಳೂರು ಗಲಭೆ, ಪೊಲೀಸರ ಕಾರ್ಯದ ಬಗ್ಗೆ ಸದನದಲ್ಲಿ ಮಾತನಾಡಿದರು.
ಮಂಗಳೂರು ಗೋಲಿಬಾರ್: ಸರ್ಕಾರದಿಂದ ವರದಿ ಕೇಳಿದ ಹೈಕೋರ್ಟ್
ನಿಯಮ 69ರ ಅಡಿ ವಿವರವಾದ ಚರ್ಚೆಗೆ ಸ್ಪೀಕರ್ ಅವಕಾಶ ಮಾಡಿಕೊಟ್ಟಿದ್ದಾರೆ. ಬಿಜೆಪಿಯ ಹಲವು ಸದಸ್ಯರು ಸಹ ಮಂಗಳೂರು ಗಲಭೆ ಬಗ್ಗೆ ಮಾತನಾಡಿದರು. ಪ್ರತಿಪಕ್ಷದ ಸದಸ್ಯರ ಮುಂದೆ ಹಲವು ಪ್ರಶ್ನೆಗಳನ್ನು ಮುಂದಿಟ್ಟರು.
ಮಂಗಳೂರು ಗೋಲಿಬಾರ್; ಮೃತಪಟ್ಟವರಿಗೆ ಪರಿಹಾರ ಘೋಷಿಸಿದ ದೀದಿ!
ಸಂವಿಧಾನದ ಸ್ಪಷ್ಟ ಉಲ್ಲಂಘನೆ
ವಿಧಾನಸಭೆಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, "ಪ್ರತಿರೋಧ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯ ಸೌಂದರ್ಯ. ಸರ್ಕಾರ ರೂಪಿಸಿ ಜಾರಿಗೊಳಿಸುವ ಯಾವುದೇ ಕಾನೂನಿಗೆ ಪರ-ವಿರೋಧದ ಅಭಿಪ್ರಾಯಗಳು ಮೂಡಿಬರುವುದು ಸಾಮಾನ್ಯ. ಹೀಗೆ ಮೂಡಿಬಂದ ಜನರ ಅಭಿಪ್ರಾಯವನ್ನು ಹತ್ತಿಕ್ಕಲು ಸರ್ಕಾರಗಳು ಪ್ರಯತ್ನಿಸಿದರೆ ಅದು ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗುತ್ತದೆ" ಎಂದರು.
144 ಸೆಕ್ಷನ್ ಜಾರಿ ಅಗತ್ಯ ಇರಲಿಲ್ಲ
ಸಿದ್ದರಾಮಯ್ಯ ಅವರು, "ಡಿಸೆಂಬರ್ 19ರಂದು ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಅಲ್ಲಿನ ಸ್ಥಳೀಯರು ಡಿ.18ರ ಬೆಳಿಗ್ಗೆ ಪೊಲೀಸ್ ಇಲಾಖೆಯ ಅನುಮತಿ ಪಡೆದಿದ್ದರು. ಆದರೆ ಇದೇ ದಿನ ಸಂಜೆ ಪೊಲೀಸ್ ಇಲಾಖೆ 144 ಸೆಕ್ಷನ್ ಜಾರಿ ಮಾಡಿತು. ಈ ವಿಚಾರ ಹೆಚ್ಚು ಪ್ರಚಾರವಾಗದ ಕಾರಣ, ಡಿ.19 ರಂದು 100 ರಿಂದ 150 ಮಂದಿ ಪ್ರತಿಭಟನೆಯಲ್ಲಿ ನಿರತರಾಗಿದ್ದರು. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಗೋಪಾಲಗೌಡರ ನೇತೃತ್ವದ ಪೀಪಲ್ಸ್ ಟ್ರಿಬ್ಯುನಲ್ ಮಂಗಳೂರಿಗೆ ತೆರಳಿ ಪರಿಸ್ಥಿತಿಯ ಅಧ್ಯಯನ ಮಾಡಿ ನೀಡಿರುವ ವರದಿಯಲ್ಲಿ, ಆ ದಿನ 144 ಸೆಕ್ಷನ್ ಜಾರಿಗೊಳಿಸುವ ಅಗತ್ಯವೇ ಇರಲಿಲ್ಲ ಎಂದು ಹೇಳಿದೆ" ಎಂದು ಹೇಳಿದರು.
ಅಮಾಯಕರನ್ನು ಬಲಿ ಪಡೆದರು
ನಿಯಮ 69ರ ಅಡಿ ನಡೆದ ಸುಧೀರ್ಘ ಚರ್ಚೆಯಲ್ಲಿ ಪಾಲ್ಗೊಂಡ ಸಿದ್ದರಾಮಯ್ಯ, "ಮಂಗಳೂರಿನ ಸ್ಟೇಟ್ ಬ್ಯಾಂಕ್ ಎಂಬ ಜನನಿಬಿಡ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಲ್ಲದೆ, 144 ಸೆಕ್ಷನ್ ಬಗ್ಗೆ ಮಾಹಿತಿಯಿಲ್ಲದೆ ಪ್ರತಿಭಟನೆಗೆ ಬಂದಿದ್ದ ಪ್ರತಿಭಟನಾಕಾರರ ಮನವೊಲಿಸಿ ಮನೆಗೆ ಕಳುಹಿಸುವ ಬದಲು ಗೋಲಿಬಾರ್ ಮಾಡಿ ಇಬ್ಬರು ಅಮಾಯಕರನ್ನು ಬಲಿ ಪಡೆದರು" ಎಂದು ಆರೋಪಿಸಿದರು.
ಸೂಕ್ತ ದಾಖಲೆಗಳಿಲ್ಲ ಎಂದು ಕೋರ್ಟ್ ಹೇಳಿದೆ
"ಮಂಗಳೂರು ಗೋಲಿಬಾರ್ ಪ್ರಕರಣದಲ್ಲಿ ಸಿಸಿಟಿವಿ ವೀಡಿಯೊ ಹಾಗೂ ಫೋಟೋಗಳಲ್ಲಿ ತೋರಿಸಿರುವಂತೆ ಪ್ರತಿಭಟನಾಕಾರರು ಮಾರಕಾಸ್ತ್ರ ಹೊಂದಿರುವ ಬಗ್ಗೆ ಯಾವುದೇ ಆಧಾರಗಳನ್ನು ಹಾಜರುಪಡಿಸಿಲ್ಲ ಹಾಗೂ ಈ ವೇಳೆ ಏನು 21 ಜನರನ್ನು ಬಂಧಿಸಲಾಗಿತ್ತು, ಅವರಲ್ಲಿ ಯಾರೊಬ್ಬರು ಪ್ರತಿಭಟನೆಯಲ್ಲಿ ಭಾಗವಹಿಸಿದ ಬಗ್ಗೆ ಸೂಕ್ತ ದಾಖಲೆಗಳಿಲ್ಲ ಎಂದು ಹೈಕೋರ್ಟ್ ಹೇಳಿದೆ. ಬಂಧನಕ್ಕೊಳಗಾಗಿದ್ದ 21 ಜನರಿಗೆ ನ್ಯಾಯಾಲಯವು ಜಾಮೀನು ನೀಡಿದೆ. ಆದರೆ ಅವರ ಜೊತೆಯಲ್ಲಿದ್ದ ಇಬ್ಬರು ಗೋಲಿಬಾರ್ಗೆ ಬಲಿಯಾಗಿದ್ದಾರೆ. ಬಂಧನಕ್ಕೊಳಗಾದವರು ಪ್ರತಿಭಟನೆಯಲ್ಲಿ ಭಾಗವಹಿಸಿಲ್ಲ ಎಂದಾದರೆ ಗೋಲಿಬಾರ್ನಲ್ಲಿ ಮೃತಪಟ್ಟವರು ಕೂಡ ಅಮಾಯಕರಲ್ಲವೇ?" ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಗೋಲಿಬಾರ್ ಆದೇಶ ನೀಡಿದ್ದು ಯಾರು?
"ಮಂಗಳೂರು ಗೋಲಿಬಾರ್ ಗೆ ಮುನ್ನದಿನ ಮುಖ್ಯಮಂತ್ರಿಗಳೇ ರಾಜ್ಯದಲ್ಲಿ ಲಾಠಿಚಾರ್ಜ್ ಮಾಡದಂತೆ ಆದೇಶಿಸಿದ್ದೇನೆ ಎಂದು ಹೇಳಿದ್ದರು, ಮರುದಿನವೇ ಗೋಲಿಬಾರ್ ನಡೆದು ಇಬ್ಬರು ಅಮಾಯಕರು ಮೃತರಾದರು. ರಾಜ್ಯದಲ್ಲಿ ಮುಖ್ಯಮಂತ್ರಿಗಳನ್ನು ಮೀರಿ ಆದೇಶ ನೀಡುವ ಕಾಣದ ಕೈಗಳಿವೆ. ಇಲ್ಲದಿದ್ದರೆ ಆದೇಶವಿಲ್ಲದೆ ಪೊಲೀಸರು ಲಾಠಿಚಾರ್ಜ್, ಗೋಲಿಬಾರ್ ಮಾಡಲು ಹೇಗೆ ಸಾಧ್ಯ?" ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ದೇಶದ್ರೋಹದ ಹೆಸರುಗಳು
"ಸಿಎಎ-ಎನ್ ಆರ್ಸಿ ವಿರೋಧಿಸಿ ಕವಿತೆ ಓದಿದ್ದ ಸಿರಾಜ್ ಬಿಸರಳ್ಳಿ ಮತ್ತು ಪತ್ರಕರ್ತ ರಾಜ್ ಬಕ್ಷಿ ಅವರ ಬಂಧನ ಭವಿಷ್ಯದ ಕರಾಳ ದಿನಗಳ ಸೂಚನೆ. ಪ್ರತಿರೋಧವನ್ನು ಸೈದ್ಧಾಂತಿಕವಾಗಿ ಎದುರಿಸಲಾಗದ ಬಿಜೆಪಿ ಪಕ್ಷ ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರಳು ಹಿಚುಕುತ್ತಿರುವುದು ಅದರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ. ಸೋಮಶೇಖರ್ ರೆಡ್ಡಿ, ಕಲ್ಲಡ್ಕ ಪ್ರಭಾಕರ ಭಟ್ ಮೇಲೆ ದಾಖಲಾಗದ ದೇಶದ್ರೋಹದ ಪ್ರಕರಣಗಳು ನಮ್ಮ ಪಕ್ಷದ ನಾಯಕರ ವಿರುದ್ಧ ಮಾತ್ರ ಏಕೆ ದಾಖಲಾಗಿವೆ? ಇದಕ್ಕೆ ಪೊಲೀಸ್ ರಾಜ್ಯವೆನ್ನದೆ ಬೇರೇನು ಕರೆಯಲು ಸಾಧ್ಯ?" ಎಂದು ಸಿದ್ದರಾಮಯ್ಯ ಸರ್ಕಾರವನ್ನು ಪ್ರಶ್ನೆ ಮಾಡಿದರು.