ಬಿಎಸ್ವೈ ಅಭಿನಂದನಾ ಸಮಾರಂಭದಲ್ಲಿ ಸಿದ್ದರಾಮಯ್ಯ ಭಾಷಣದ ಹಿಂದಿನ ಮರ್ಮ?
ಮುಖ್ಯಮಂತ್ರಿ ಯಡಿಯೂರಪ್ಪನವರ ಹುಟ್ಟುಹಬ್ಬದ ಸಂಬಂಧ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದದ್ದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಉಪಸ್ಥಿತಿ ಮತ್ತು ಅವರು ಆಡಿದ ಭಾಷಣ.
ವೇದಿಕೆ ಯಾವುದೇ ಇರಲಿ 'ಮಾತಿನ ಪಟ್ಟು' ನೀಡುವಲ್ಲಿ ಎತ್ತಿದ ಕೈಯಾಗಿರುವ ಸಿದ್ದರಾಮಯ್ಯ, ತಮ್ಮ ಭಾಷಣದಲ್ಲಿ, ಅಲ್ಲಲ್ಲಿ ಲೈಟಾಗಿ ಬಿಜೆಪಿಯವರ ಕಾಲೆಳೆದರು. "ರಾಜಕಾರಣ ಬೇರೆ, ಮನುಷ್ಯ ಸಂಬಂಧ ಬೇರೆ ಎಂದು ನಂಬುವವನು ನಾನು" ಎಂದು ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಹೇಳಿದರು.
"ಯಡಿಯೂರಪ್ಪನವರ ಅಭಿನಂದನಾ ಸಮಾರಂಭಕ್ಕೆ ನನಗೆ ಆಹ್ವಾನ ಬಂದಾಗ, ನಾನು ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡೆ. ನಮ್ಮಿಬ್ಬರ ಸಿದ್ದಾಂತಗಳು ಬೇರೆ ಬೇರೆ ಆಗಿರಬಹುದು. ಆದರೆ, ಇದು ರಾಜಕೀಯೇತರ ಸಂಬಂಧಕ್ಕೆ ಅಡ್ಡಿಯಾಗುವುದಿಲ್ಲ" ಎಂದು ಸಿದ್ದರಾಮಯ್ಯ ಹೇಳಿದರು.
'ಯಡಿಯೂರಪ್ಪ 4 ಬಾರಿ ಸಿಎಂ ಆದರು, ನಾನು ಒಂದೇ ಬಾರಿ ಆದೆ'
ಕಾರ್ಯಕ್ರಮದಲ್ಲಿ ಯಡಿಯೂರಪ್ಪನವರು ನೂರು ವರ್ಷ ಆರೋಗ್ಯವಾಗಿ ಬದುಕಲಿ ಎಂದು ಹಾರೈಸಿದ ಸಿದ್ದರಾಮಯ್ಯ, ರಾಷ್ಟ್ರಪಿತ ಗಾಂಧೀಜಿಯವರ ಹೆಸರನ್ನು ಉಲ್ಲೇಖಿಸುತ್ತಾ ಹಿಂದಿನ ಘಟನೆಯೊಂದನ್ನು ಉಲ್ಲೇಖಿಸಿದ್ದು ಹೀಗೆ..
ರಾಜಕೀಯ ಏನಿದ್ದರೂ ರಾಜಕಾರಣಕ್ಕೆ ಸೀಮಿತ
"ಮೂಲಭೂತವಾಗಿ ನಾವೆಲ್ಲಾ ಮನುಷ್ಯರು. ರಾಜಕೀಯ ಏನಿದ್ದರೂ ರಾಜಕಾರಣಕ್ಕೆ ಸೀಮಿತ. ಅಂತಿಮವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಹಾಗಾಗಿ, ರಾಜಕಾರಣ ವೈಯಕ್ತಿಕ ಸಂಬಂಧಕ್ಕೆ ಅಡ್ಡಿ ಬರಬಾರದು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ" - ಸಿದ್ದರಾಮಯ್ಯ.
ಎಷ್ಟು ವರ್ಷ ಕ್ರಿಯಾಶೀಲವಾಗಿ, ಆರೋಗ್ಯವಂತರಾಗಿ ಬದುಕಿದ್ದ ಎನ್ನುವುದು ಮುಖ್ಯವಾಗುತ್ತದೆ
ಮನುಷ್ಯ ಎಷ್ಟು ವರ್ಷ ಕ್ರಿಯಾಶೀಲವಾಗಿ, ಆರೋಗ್ಯವಂತರಾಗಿ ಬದುಕಿದ್ದ ಎನ್ನುವುದು ಮುಖ್ಯವಾಗುತ್ತದೆ. ಅಭಿಮಾನಿಯೊಬ್ಬ, ಮಹಾತ್ಮ ಗಾಂಧಿಯವರಿಗೆ ಹಿಂದೊಮ್ಮೆ ಪತ್ರವನ್ನು ಬರೆಯುತ್ತಾನೆ. ಅದರಲ್ಲಿ, ನೀವು ನೂರು ವರ್ಷ ಚೆನ್ನಾಗಿ ಬದುಕಿ ಎಂದು ಬರೆದಿರುತ್ತಾನೆ" - ಸಿದ್ದರಾಮಯ್ಯ.
ಹ್ಯಾಪಿ ಬರ್ತ್ಡೇ: 77 ವರ್ಷದ ಯಡಿಯೂರಪ್ಪ ಹೈಕಮಾಂಡ್ ಮಣಿಸಿದ ಕತೆ!
ಗಾಂಧೀಜಿಯವರು ಪತ್ರದ ಮೂಲಕ ಅಭಿಮಾನಿಗೆ ಉತ್ತರ
"ಅದಕ್ಕೆ ಗಾಂಧೀಜಿಯವರು ಪತ್ರದ ಮೂಲಕ ಆತನಿಗೆ ಉತ್ತರಿಸಿ, ನೀನು ಕಡಿಮೆ ಹೇಳಿದ್ದೀಯಾ, ನಾನು 125ವರ್ಷ ಬದುಕಬೇಕು ಎಂದು ಅಂದುಕೊಂಡಿದ್ದೇನೆ ಎಂದು ಹೇಳುತ್ತಾರೆ. ಆದರೆ, ಪಾಪ ಅವರು ಅಷ್ಟು ದಿನ ಬದುಕಲಿಕ್ಕೆ ಆಗಲಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ" ಎಂದು ಸಿದ್ದರಾಮಯ್ಯ ಹೇಳುತ್ತಾ, ತನ್ನದೇ ಶೈಲಿಯಲ್ಲಿ ಲಘುವಾಗಿ ಬಿಜೆಪಿಯವರ ಕಾಲೆಳೆದಿದ್ದಾರೆ.
ಸಂಘ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ನಾಥೂರಾಂ ಗೋಡ್ಸೆ
ಮಹಾತ್ಮ ಗಾಂಧೀಜಿ, ಸಂಘ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ನಾಥೂರಾಂ ಗೋಡ್ಸೆ ಗುಂಡಿಗೆ ಬಲಿಯಾಗಿದ್ದು. ಹಾಗಾಗಿ, ಉದ್ದೇಶಪೂರ್ವಕವಾಗಿಯೇ ಗಾಂಧೀಜಿಯವರ ಹೆಸರನ್ನು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಎಳೆದು ತಂದರೇ ಎನ್ನುವುದು ಇಲ್ಲಿ ಗಮನಿಸಬೇಕಾದ ವಿಚಾರ.