'ಯಡಿಯೂರಪ್ಪ 4 ಬಾರಿ ಸಿಎಂ ಆದರು, ನಾನು ಒಂದೇ ಬಾರಿ ಆದೆ'
ಬೆಂಗಳೂರು, ಫೆಬ್ರವರಿ 27 : ಕರ್ನಾಟಕದ ರಾಜಕೀಯ ಗುರುವಾರ ಮಹತ್ವದ ಬೆಳವಣಿಗೆಗೆ ಸಾಕ್ಷಿಯಾಯಿತು. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ 78ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದರು. ಈ ಅಂಗವಾಗಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪಾಲ್ಗೊಂಡಿದ್ದರು.
Recommended Video
ಗುರುವಾರ ಸಂಜೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಯಡಿಯೂರಪ್ಪಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಸಿದ್ದರಾಮಯ್ಯಗೆ ಆಹ್ವಾನ ನೀಡಲಾಗಿತ್ತು. 'ಕಾಫಿ ಟೇಬಲ್' ಎಂಬ ಪುಸ್ತಕವನ್ನು ಅವರು ಬಿಡುಗಡೆ ಮಾಡಿದರು.
ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, "ರಾಜಕೀಯ ಬೇರೆ ಮಾನವ ಸಂಬಂಧವೇ ಬೇರೆ. ಹೀಗಾಗಿ ನಾನು ಒಪ್ಪಿಕೊಂಡು ಸಮಾರಂಭಕ್ಕೆ ಬಂದೆ. ನಾನು ಎಷ್ಟು ವಿರೋಧ ಮಾಡಿದರು ಮನುಷ್ಯ ಸಂಬಂಧಕ್ಕೆ ಧಕ್ಕೆ ಬಾರದು" ಎಂದು ಹೇಳಿದರು.
ಹ್ಯಾಪಿ ಬರ್ತ್ಡೇ: 77 ವರ್ಷದ ಯಡಿಯೂರಪ್ಪ ಹೈಕಮಾಂಡ್ ಮಣಿಸಿದ ಕತೆ!
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್, ಮಾಜಿ ರಾಜ್ಯಪಾಲ ಎಸ್. ಎಂ. ಕೃಷ್ಣ, ವಿವಿಧ ಕೇಂದ್ರ ಸಚಿವರು, ಯಡಿಯೂರಪ್ಪ ಸಂಪುಟದ ಸಚಿವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಸಿದ್ದಾಂತ ಬೇರೆ-ಬೇರೆ
ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, "ನಮ್ಮ ಸಿದ್ದಾಂತವೇ ಬೇರೆ, ಬಿಜೆಪಿ ಮತ್ತು ಯಡಿಯೂರಪ್ಪ ಸಿದ್ಧಾಂತವೇ ಬೇರೆಯಾಗಿದೆ. ಆದರೆ, ನಾವು ಜನರ ಮುಂದೆ ನಮ್ಮ ಸಿದ್ದಾಂತ ಇಡುತ್ತೇವೆ. ಕೊನೆಗೆ ಜನರೇ ಸಿದ್ದಾಂತವನ್ನು ಆಯ್ಕೆ ಮಾಡುತ್ತಾರೆ" ಎಂದರು.
ನಾಲ್ಕು ಬಾರಿ ಸಿಎಂ ಆಗಿದ್ದಾರೆ
"ಯಡಿಯೂರಪ್ಪ ನೇರವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಬರಲಿಲ್ಲ. ಸಾಮಾನ್ಯ ಕುಟುಂಬದ ಅವರು ಹೋರಾಟದ ಹಿನ್ನಲೆಯಿಂದ ರಾಜಕೀಯಕ್ಕೆ ಬಂದರು. ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ನಾನು ಒಂದೇ ಬಾರಿ ಸಿಎಂ ಆಗಿದ್ದೇನೆ" ಎಂದು ಸಿದ್ದರಾಮಯ್ಯ ಹೇಳಿದರು.
ಯಡಿಯೂರಪ್ಪ ಕಾರಣ
"ಬಿಜೆಪಿ ದಕ್ಷಿಣ ಭಾರತದಲ್ಲಿ ಅಧಿಕಾರಕ್ಕೆ ಬಂದಿದ್ದರೆ ಅದಕ್ಕೆ ಯಡಿಯೂರಪ್ಪ ಕಾರಣ. ಇದನ್ನು ಯಾರೂ ಸಲ ಅಲ್ಲಗಳೆಯಲು ಸಾಧ್ಯವಿಲ್ಲ. ಮುಖ್ಯಮಂತ್ರಿಯಾಗಿದ್ದಾಗ ಅನೇಕ ಒತ್ತಡಗಳು ಇರುವುದು ಸಹಜ. ಅವುಗಳನ್ನು ಸಹಿಸಿಕೊಂಡು ಹೋಗುವ ಶಕ್ತಿ ಸಿಗಲಿ" ಎಂದು ಸಿದ್ದರಾಮಯ್ಯ ಹಾರೈಸಿದರು.
ಒಟ್ಟಿಗೆ ವಿಧಾನಸೌಧ ಪ್ರವೇಶಿಸಿದರು
"1983ರಲ್ಲಿ ಒಟ್ಟಿಗೆ ಯಡಿಯೂರಪ್ಪ ಮತ್ತು ನಾನು ವಿಧಾನಸೌಧಕ್ಕೆ ಕಾಲಿಟ್ಟೆವು. ನನಗೀಗ 73ನೇ ವರ್ಷ, ಅವರು ನನಗಿಂತ ದೊಡ್ಡವರು. ಆದ್ದರಿಂದ, ನನಗಿಂತ 5 ವರ್ಷ ಮೊದಲು ಮುಖ್ಯಮಂತ್ರಿಯಾದರು. ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ನಾನು ಒಂದು ಬಾರಿ ಮಾತ್ರ ಮುಖ್ಯಮಂತ್ರಿಯಾದೆ. ಯಡಿಯೂರಪ್ಪ ನನ್ನಂತೆ ರಾಜಕೀಯ ಹಿನ್ನಲೆ ಇಲ್ಲದೇ ಬಂದವರು. ಹೋರಾಟದ ಮೂಲಕ ಬಂದವರಿಗೆ ಜನರ ಬದುಕು ಅರ್ಥವಾಗುತ್ತದೆ" ಎಂದು ಸಿದ್ದರಾಮಯ್ಯ ಹೇಳಿದರು.
ರಾಜ್ಯದ ಚಿತ್ರಣ ಗೊತ್ತು
"ರಾಜಕೀಯ ಯಾರನ್ನೂ ಕೈ ಬೀಸಿ ಕರೆಯೋದಿಲ್ಲ. ನಾನು ಸೇವೆ ಮಾಡುತ್ತೇವೆ ಎಂದು ಬರುತ್ತೇವೆ. ಮಂಡ್ಯದಲ್ಲಿ ಹುಟ್ಟಿ ಶಿಕಾರಿಪುರಕ್ಕೆ ಹೋಗಿ ಪುರಸಭೆ ಸದಸ್ಯರಾಗಿ, ವಿರೋಧ ಪಕ್ಷದ ನಾಯಕರಾಗಿ, ಉಪ ಮುಖ್ಯಮಂತ್ರಿಯಾಗಿ, ಲೋಕಸಭಾ ಸದಸ್ಯರಾದರು. ಇಡೀ ರಾಜ್ಯದ ಚಿತ್ರಣ ಕೆಲವೇ ರಾಜಕಾರಣಿಗಳಿಗೆ ಗೊತ್ತು. ಅದರಲ್ಲಿ ಯಡಿಯೂರಪ್ಪ ಸಹ ಒಬ್ಬರು" ಎಂದು ಸಿದ್ದರಾಮಯ್ಯ ಹೇಳಿದರು.