ಪುತ್ರಶೋಕ ನಿರಂತರ: ಅಂದು ಸದಾನಂದ ಗೌಡರಿಗೆ, ಇಂದು ಸಿದ್ದುಗೆ
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ರಾಕೇಶ್ ಬೆಲ್ಜಿಯಂನಲ್ಲಿ ಶನಿವಾರ (ಜುಲೈ 30) ವಿಧಿವಶರಾಗಿದ್ದಾರೆ. ಹದಿಮೂರು ವರ್ಷದ ಕೆಳಗೆ ಮಾಜಿ ಸಿಎಂ, ಹಾಲಿ ಕೇಂದ್ರ ಸಚಿವ ಸದಾನಂದ ಗೌಡ ಅವರ ಪುತ್ರ ಕೂಡಾ ನಿಧನಹೊಂದಿದ್ದರು.
ಸದಾನಂದ ಗೌಡರ ಪುತ್ರ ಕೌಶಿಕ್ ಗೌಡ 2003ರಲ್ಲಿ ದಕ್ಷಿಣಕನ್ನಡದ ಪುತ್ತೂರಿನಲ್ಲಿ ರಸ್ತೆ ಅಪಘಾತವೊಂದರಲ್ಲಿ ನಿಧನ ಹೊಂದಿದ್ದರು. ದಕ್ಷಿಣಕನ್ನಡ ಜಿಲ್ಲಾ ಪ್ರವಾಸದಲ್ಲಿರುವ ಡಿವಿಎಸ್, ಸಿದ್ದು ಪುತ್ರನ ನಿಧನದ ಬಗ್ಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. (ಕರಳು ಬೇನೆ ಕಾಯಿಲೆಗೆ ಬಲಿಯಾದ ಸಿದ್ದು ಪುತ್ರ)
ತನ್ನ ಮಗನ ಸಾವನ್ನು ಉಲ್ಲೇಖಿಸಿ ಮಾತನಾಡುತ್ತಿದ್ದ ಡಿವಿಎಸ್, ನಾನು ಮತ್ತು ಸಿದ್ದರಾಮಯ್ಯ ಪುತ್ರಶೋಕದ ವಿಚಾರದಲ್ಲಿ ಒಂದೇ ದೋಣಿಯಲ್ಲಿದ್ದೇವೆ, ರಾಕೇಶ್ ಸಾವು ನನಗೆ ತೀವ್ರ ನೋವನ್ನು ತಂದಿದೆ ಎಂದಿದ್ದಾರೆ.
ಇದು ತೀರಾ ನೋವಿನ ಸಂಗತಿ, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನದಂತಹ ಗುರುತರ ಜವಾಬ್ದಾರಿಯನ್ನು ಹೊಂದಿದ್ದಾರೆ. ಮಗನ ಸಾವಿನ ನೋವು ತಂದೆಗೆ ಯಾವ ರೀತಿ ಇರುತ್ತದೆ ಎನ್ನುವುದನ್ನು ನಾನು ಕೂಡಾ ಬಲ್ಲೆ ಎಂದು ಸದಾನಂದ ಗೌಡ ಹೇಳಿದ್ದಾರೆ.
ಸದಾನಂದ ಗೌಡರ ಪ್ರತಿಕ್ರಿಯೆಯನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ರಾಜ್ಯದ ಜವಾಬ್ದಾರಿ ಎರಡನ್ನೂ ಸಿದ್ದು ನಿಭಾಯಿಸಬೇಕಿದೆ
ಮಗನ ಸಾವಿನ ನೋವು ಮತ್ತು ರಾಜ್ಯದ ಜವಾಬ್ದಾರಿ ಎರಡನ್ನೂ ಸಿದ್ದರಾಮಯ್ಯ ನಿಭಾಯಿಸಬೇಕಿದೆ. ರಾಜ್ಯದ ಯುವಕರಲ್ಲಿ ಸಿದ್ದರಾಮಯ್ಯ ತಮ್ಮ ಪುತ್ರನನ್ನು ಕಂಡು ರಾಜ್ಯದ ಅಭಿವೃದ್ದಿಗೆ ತೊಡಗಲಿ ಎಂದು ಸದಾನಂದ ಗೌಡ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
|
ನೋವಿನಿಂದ ಹೊರಬರುವುದು ಅಷ್ಟು ಸುಲಭವಲ್ಲ
ಪುತ್ರಶೋಕ ನಿರಂತರ ಎನ್ನುವಂತೆ ಮಗನನ್ನು ಕಳೆದುಕೊಂಡ ನೋವಿನಿಂದ ಹೊರಬರುವುದು ಅಷ್ಟು ಸುಲಭವಲ್ಲ. ರಾಕೇಶ್ ಆತ್ಮಕ್ಕೆ ಶಾಂತಿಸಿಗಲಿ, ಸಿದ್ದರಾಮಯ್ಯನವರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ.
ನಾನು ಕೂಡಾ ಇದೇ ನೋವಿನಲ್ಲಿದ್ದೆ
ಕೌಶಿಕ್ ನಿಧನಹೊಂದಿದಾಗ ನಾನು ಕೂಡಾ ಇದೇ ನೋವಿನಲ್ಲಿದ್ದೆ. ಜನರನ್ನು ಭೇಟಿಯಾಗಿ, ಅವರ ಕಷ್ಟಕಾರ್ಪಣ್ಯಗಳನ್ನು ಆಲಿಸಿ, ಈ ನೋವಿನಿಂದ ಹೊರಬಂದಿದ್ದೆ ಎಂದು ಸದಾನಂದ ಗೌಡ ಅಂದಿನ ಘಟನೆಯನ್ನು ಮೆಲುಕು ಹಾಕಿಕೊಂಡಿದ್ದಾರೆ.
ನೋವಿನಿಂದ ಹೊರಬರಲಿ
ಸದ್ಯ ಮುಖ್ಯಮಂತ್ರಿಗಳು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಗಮನ ಹರಿಸಬೇಕಿದೆ. ಜೊತೆಗೆ ಈ ನೋವಿನಿಂದ ಹೊರಬಂದು ಮತ್ತೆ ರಾಜ್ಯದ ಆಡಳಿತದತ್ತ ಗಮನ ಹರಿಸುವಂತಾಗಲಿ ಎನ್ನುವುದು ನನ್ನ ಬಯಕೆ - ಸದಾನಂದ ಗೌಡ.
|
ಪ್ರಧಾನಿ ಮೋದಿ ಸಂತಾಪ
ಪ್ರಧಾನಿ ಮೋದಿ, ಕೇಂದ್ರ ಸಚಿವರಾದ ವೆಂಕಯ್ಯ ನಾಯ್ಡು, ಸದಾನಂದ ಗೌಡ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಹಲವು ಮುಖಂಡರು ಸಿದ್ದರಾಮಯ್ಯನವರ ಪುತ್ರ ನಿಧನದ ಬಗ್ಗೆ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.