ದರ ಏರಿಕೆ; ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ಪ್ರಶ್ನೆಗಳು
ಬೆಂಗಳೂರು, ಜೂನ್ 10; " ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷ ಐದು ದಿನಗಳ ಕಾಲ ದೇಶಾದ್ಯಂತ ಪೆಟ್ರೋಲ್ ಬಂಕ್ಗಳ ಮುಂದೆ ಪ್ರತಿಭಟನೆ ನಡೆಸಲಿದೆ" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, "ಪಕ್ಷದ ಮುಖಂಡರು, ಕಾರ್ಯಕರ್ತರು ಎಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಶುಕ್ರವಾರ ಬೆಂಗಳೂರಿನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ನಾನು ಪಾಲ್ಗೊಳ್ಳುತ್ತೇನೆ" ಎಂದರು.
Breaking news! ಕರ್ನಾಟಕದಲ್ಲಿ ವಿದ್ಯುತ್ ದರ ಏರಿಕೆ
"ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೊನಾ ಸಂದರ್ಭದಲ್ಲಿ ಜನರು ಸುಮ್ಮನಿದ್ದಾರೆ ಎಂದು ಅವರ ತಲೆ ಮೇಲೆ ಕಲ್ಲು ಚಪ್ಪಡಿ ಎಳೆಯುವ ಕೆಲಸ ಮಾಡುತ್ತಿದ್ದಾರೆ. ಬೀದಿಗೆ ಬಂದು ಪ್ರತಿಭಟನೆ ಮಾಡುವ ಹಾಗೆ ಇಲ್ಲ. ಲಾಕ್ಡೌನ್ ಮಾಡಿದ್ದಾರೆ. ಬೆಲೆಯನ್ನು ಏರಿಸುತ್ತಲೇ ಇದ್ದಾರೆ" ಎಂದು ಟೀಕಿಸಿದರು.
ಕರ್ನಾಟಕದಲ್ಲಿ ಎಲ್ಲೆಲ್ಲಿ ಪೆಟ್ರೋಲ್ ದರ 100ರು ಗಡಿ ದಾಟಿದೆ!
ವಿದ್ಯುತ್ ಖರೀದಿ ನಿಲ್ಲಿಸಿ; "ರಾಜ್ಯ ಸರ್ಕಾರ ವಿದ್ಯುತ್ ಬಿಲ್ ಪ್ರತಿ ಯೂನಿಟ್ಗೆ 30 ಪೈಸೆ ಹೆಚ್ಚಿಸಿದೆ. ವಿದ್ಯುತ್ ಸರಬರಾಜು ಕಂಪನಿಗಳು ನಷ್ಟದಲ್ಲಿವೆ. ದರ ಏರಿಕೆ ಅನಿವಾರ್ಯವಾಗಿತ್ತು ಎಂದು ಸರ್ಕಾರ ಸಮರ್ಥನೆ ನೀಡಿದೆ" ಎಂದು ಸಿದ್ದರಾಮಯ್ಯ ಹೇಳಿದರು.
ಅಚ್ಚೇದಿನ್ ಈಗ ದುಸ್ವಪ್ನವಾಗಿ ಕಾಡುತ್ತಿದೆ; ಕುಮಾರಸ್ವಾಮಿ
"ಕೊರೊನಾ ಲಾಕ್ಡೌನ್ ಕಾಲದಲ್ಲಿ ಜನರಿಗೆ ಸರಿಯಾಗಿ ಉದ್ಯೋಗವಿಲ್ಲ. ದುಡಿಮೆ ಇಲ್ಲದೇ ಊಟಕ್ಕೆ ಸಹ ತೊಂದರೆಯಾಗಿದೆ. ಇಂತಹ ಸಮಯದಲ್ಲಿ ದರ ಏರಿಕೆ ಮಾಡಿ ಗಾಯದ ಮೇಲೆ ಬರೆ ಹಾಕಿರುವುದನ್ನು ಖಂಡಿಸುತ್ತೇನೆ" ಎಂದರು.
"ರಾಜ್ಯ ಸರ್ಕಾರ ನಷ್ಟದ ನೆಪ ಹೇಳುತ್ತಿದೆ. ವಿದ್ಯುತ್ ಉತ್ಪಾದನೆ ಹೆಚ್ಚುತ್ತಿದೆ. ಆದರೆ ಕೇಂದ್ರದಿಂದ ವಿದ್ಯುತ್ ಖರೀದಿ, ಅದಾನಿ ಕಂಪನಿಯಿಂದ ಖರೀದಿಯನ್ನು ನಿಲ್ಲಿಸಿಲ್ಲ. ಮೊದಲು ವಿದ್ಯುತ್ ಖರೀದಿ ನಿಲ್ಲಿಸಿ, ಇಲಾಖೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ" ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ಅಚ್ಛೇದಿನ್ ಆಯೇಗ; "ಪ್ರಧಾನಿ ನರೇಂದ್ರ ಮೋದಿ ಅಚ್ಛೇದಿನ್ ಆಯೇಗಾ ಎಂದು ಅಧಿಕಾರಕ್ಕೆ ಬಂದರು. ಕಳೆದ ಒಂದು ವರ್ಷದಲ್ಲಿ ಶೇ 30ರಷ್ಟು ಇಂಧನ ಬೆಲೆಯನ್ನು ಏರಿಕೆ ಮಾಡಿದ್ದಾರೆ. ತೈಲ ಬೆಲೆ ಇಷ್ಟು ಏರಿಕೆಯಾಗಿದ್ದು, ಇತಿಹಾಸದಲ್ಲೇ ಮೊದಲು" ಎಂದು ಸಿದ್ದರಾಮಯ್ಯ ಟೀಕಿಸಿದರು.
"ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 1 ರೂ. ಬೆಲೆ ಏರಿಸಿದಾಗ ತೀವ್ರವಾಗಿ ವಿರೋಧ ಮಾಡಿದ್ದರು, ಬಿಜೆಪಿಯವರು ರಸ್ತೆಗೆ ಬಂದು ಪ್ರತಿಭಟನೆ ಮಾಡಿದ್ದರು. ಈಗ ಪ್ರತಿನಿತ್ಯ ಬೆಲೆ ಏರಿಕೆಯಾಗುತ್ತಲೇ ಇದೆ. ನಮ್ಮ ರಾಜ್ಯ ಮತ್ತು ಹಲವು ರಾಜ್ಯಗಳಲ್ಲಿ ಲೀಟರ್ ಪೆಟ್ರೋಲ್ ಬೆಲೆ 100 ರೂ. ದಾಟಿದೆ. ಡೀಸೆಲ್ ಬೆಲೆ 92 ರೂ. ಆಗಿದೆ" ಎಂದು ಸಿದ್ದರಾಮಯ್ಯ ಹೇಳಿದರು.
"ತೈಲ ಬೆಲೆ ಏರಿಕೆ ಬಗ್ಗೆ ಪ್ರಶ್ನಿಸಿದರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಏರಿಕೆ ಎಂದು ಹೇಳುತ್ತಾರೆ. ಆದರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾದಾಗ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಕೊಟ್ಟರೇ?" ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
"ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 2013-14ರಲ್ಲಿ ಡೀಸೆಲ್ ಮೇಲೆ 3.45 ಪೈಸೆ, ಪೆಟ್ರೋಲ್ ಮೇಲೆ 9 ರೂ. ತೆರಿಗೆ ಇತ್ತು. ಇವತ್ತು ಡೀಸೆಲ್ ಮೇಲೆ 31 ರೂ. ಮತ್ತು ಪೆಟ್ರೋಲ್ ಮೇಲೆ 32 ರೂ. ತೆರಿಗೆ ಇದೆ. ತೆರಿಗೆ ಹೆಚ್ಚಳ ಮಾಡಿದ್ದು ಏಕೆ?" ಎಂದು ಕೇಳಿದರು.
"ಜನರು 100 ರೂ. ಕೊಟ್ಟು ಪೆಟ್ರೋಲ್ ಹಾಕಿಸಿದರೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ತೆರಿಗೆಯೇ 65 ರೂ. ಆಗುತ್ತದೆ. ಇದನ್ನು ಕಡಿಮೆ ಮಾಡಿ, ಲೂಟಿ ಯಾಕೆ ಮಾಡುತ್ತಿದ್ದೀರಿ?. ಗ್ರಾಹಕರಿಗೆ ಅನುಕೂಲ ಮಾಡಿಕೊಡಿ" ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
"ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾದರೆ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗುತ್ತದೆ. ಜನರು ಮನೆಯಲ್ಲಿ ಅಡುಗೆಗೆ ಉಪಯೋಗಿಸುವ ಎಣ್ಣೆ ಬೆಲೆ ಲೀಟರ್ಗೆ 180 ರೂ. ಆಗಿದೆ. ಸಿಲಿಂಡರ್ ಬೆಲೆ 800 ರೂ. ಆಗಿದೆ" ಎಂದು ಸಿದ್ದರಾಮಯ್ಯ ಹೇಳಿದರು.
Recommended Video
"ತೈಲ ಬೆಲೆ ಏರಿಕೆ ವಿಚಾರವನ್ನು ಎಐಸಿಸಿ ಗಂಭೀರವಾಗಿ ಪರಿಗಣಿಸಿದೆ. ಪೆಟ್ರೋಲ್, ಡೀಸೆಲ್ ಮತ್ತು ಸಿಲಿಂಡರ್ ಬೆಲೆ ಹೆಚ್ಚಳ ಖಂಡಿಸಿ ಜೂನ್ 11ರಿಂದ 5 ದಿನಗಳ ಕಾಲ ದೇಶಾದ್ಯಂತ ಪೆಟ್ರೋಲ್ ಬಂಕ್ ಮುಂದೆ ಪ್ರತಿಭಟನೆ ನಡೆಸಲಿದೆ. ಬೆಂಗಳೂರಿನಲ್ಲಿ ಶುಕ್ರವಾರ ನಡೆಯುವ ಪ್ರತಿಭಟನೆಯಲ್ಲಿ ನಾನು ಪಾಲ್ಗೊಳ್ಳುವೆ" ಎಂದು ಸಿದ್ದರಾಮಯ್ಯ ತಿಳಿಸಿದರು.