ಕೇಂದ್ರದಿಂದ ಬಿಎಸ್ವೈಗೆ ಅವಮಾನ, ರಾಜ್ಯಕ್ಕೆ ಅನ್ಯಾಯ: ಸಿದ್ದರಾಮಯ್ಯ ವಾಗ್ದಾಳಿ
Recommended Video
ಬೆಂಗಳೂರು, ಸೆಪ್ಟೆಂಬರ್ 19: ನೆರೆ ಪರಿಹಾರದ ಸಂಬಂಧ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಪ್ರಯತ್ನಿಸುತ್ತಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಸಮಯ ನೀಡದೆ ಮುಂದೂಡುತ್ತಿರುವ ಕ್ರಮವನ್ನು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಪ್ರಧಾನಿ ಕಚೇರಿಯು ಬಿಎಸ್ ಯಡಿಯೂರಪ್ಪ ಅವರಿಗೆ ಭೇಟಿಯ ಅವಕಾಶ ನಿರಾಕರಿಸುತ್ತಿರುವುದು ವೈಯಕ್ತಿಕವಾಗಿ ಅವರಿಗೆ ಮಾಡುತ್ತಿರುವ ಅವಮಾನ ಎಂದು ಸಿದ್ದರಾಮಯ್ಯ ಖಂಡಿಸಿದ್ದಾರೆ. ಅಲ್ಲದೆ, ಈ ಸಂದರ್ಶನಕ್ಕೆ ಅವಕಾಶ ನೀಡದೆ ರಾಜ್ಯಕ್ಕೆ ಅನ್ಯಾಯ ಎಸಗಲಾಗುತ್ತಿದೆ ಎಂದು ಸಹ ಅವರು ಆರೋಪಿಸಿದ್ದಾರೆ.
ಬಿಎಸ್ವೈ ಭೇಟಿಗೆ ಸಮಯ ನೀಡದ ಮೋದಿ, ದೆಹಲಿಗೆ ಪ್ರಯಾಣ ಮುಂದೂಡಿಕೆ
ಸರಣಿ ಟ್ವೀಟ್ಗಳನ್ನು ಮಾಡಿರುವ ಅವರು, ಪ್ರವಾಹ ಪರಿಸ್ಥಿತಿಯ ನಿರ್ವಹಣೆಯಲ್ಲಿ ಸರ್ಕಾರದಿಂದ ಯಾವುದೇ ಕಾರ್ಯಾಚರಣೆಗಳು ನಡೆಯುತ್ತಿಲ್ಲ. ಜನರು ನೀರು, ಜಾನುವಾರುಗಳಿಗೆ ಮೇವಿನ ಕೊರತೆಯಿಂದ ಕಂಗಾಲಾಗಿದ್ದಾರೆ. ಆದರೂ ಸರ್ಕಾರ ನಿದ್ರಾವಸ್ಥೆಯಲ್ಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಯಡಿಯೂರಪ್ಪಗೆ ಅವಮಾನ
ಅತಿವೃಷ್ಟಿಯಂತಹ ತುರ್ತು ಸ್ಥಿತಿಯಲ್ಲಿ ಪ್ರಧಾನಿ ಕಚೇರಿಯು ರಾಜ್ಯದ ಮುಖ್ಯಮಂತ್ರಿಯವರ ಸಂದರ್ಶನ ನಿರಾಕರಿಸುತ್ತಿರುವುದು ಯಡಿಯೂರಪ್ಪ ಅವರಿಗೆ ಮಾಡಿದ ಅವಮಾನವಾದರೆ, ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ. ಸ್ವಾಭಿಮಾನಿ ಕನ್ನಡಿಗರು ಇದನ್ನು ಸಹಿಸರು #InjusticetoKarnataka ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಸರ್ಕಾರ ನಿದ್ರಾವಸ್ಥೆಯಲ್ಲಿದೆ
ಇನ್ನು ರಾಜ್ಯದ 7ಕ್ಕೂ ಹೆಚ್ಚು ಜಿಲ್ಲೆಗಳು ಬರದಿಂದ ಕಂಗೆಟ್ಟಿವೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಬಿತ್ತನೆಗೆ ನೀರಿನ ಸೌಲಭ್ಯವಿಲ್ಲದೆ ಜನ ಕಂಗಾಲಾಗಿದ್ದಾರೆ. ಆದರೆ ರಾಜ್ಯ ಸರ್ಕಾರ ಈ ಜಿಲ್ಲೆಗಳನ್ನು ಇನ್ನೂ ಸಹ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿ, ಪರಿಹಾರ ಕಾರ್ಯಾಚರಣೆ ಕೈಗೊಂಡಿಲ್ಲ. ಸರ್ಕಾರ ಇನ್ನೂ ನಿದ್ರಾವಸ್ಥೆಯಲ್ಲಿದೆ ಎಂದು ಆರೋಪಿಸಿದ್ದಾರೆ.
ಹೈಕಮಾಂಡ್ ಅಂಗಣದಲ್ಲಿ ಸಿದ್ದರಾಮಯ್ಯಗೆ ಸಿಗುತ್ತಿದ್ದ 'ರಾಜ ಮರ್ಯಾದೆ' ಕಮ್ಮಿ ಆಯಿತೇ?
ಕೇಂದ್ರ ಸಂಬಂಧವಿಲ್ಲದಂದೆ ಇದೆ
ಈಗಲೂ ಸಂತ್ರಸ್ತರು ಬಸ್ ಸ್ಟ್ಯಾಂಡ್ಗಳು, ರಸ್ತೆಯಲ್ಲಿ ಜೀವನ ಸಾಗಿಸಬೇಕಾದ ಪರಿಸ್ಥಿತಿಯಿದೆ. ಗ್ರಾಮಗಳ ಸ್ಥಳಾಂತರ, ಪುನರ್ವಸತಿ ಒದಗಿಸುವ ಕಾರ್ಯ ಇನ್ನೂ ಆರಂಭಗೊಂಡಿಲ್ಲ. ನೆಪಮಾತ್ರಕ್ಕೆ ಪರಿಹಾರ ನೀಡಲಾಗಿದೆಯೇ ಹೊರತು ಅದರಿಂದ ಜನರಿಗೆ ಪ್ರಯೋಜನವಾಗುತ್ತಿಲ್ಲ. ಕೇಂದ್ರ ಸರ್ಕಾರವಂತೂ ಪ್ರವಾಹಕ್ಕೂ ತಮಗೂ ಸಂಬಂಧವೇ ಇಲ್ಲವೆಂಬಂತೆ ಇದೆ ಎಂದು ಟೀಕಿಸಿದ್ದಾರೆ.
ಪರಿಹಾರ ಒದಗಿಸುವಲ್ಲಿ ವಿಫಲ
ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಸೇರಿದಂತೆ ರಾಜ್ಯದ 22 ಜಿಲ್ಲೆಗಳು ಭೀಕರ ಪ್ರವಾಹಕ್ಕೆ ಸಿಲುಕಿ ತತ್ತರಿಸಿವೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ತಾತ್ಕಾಲಿಕ್ ಶೆಡ್ ವ್ಯವಸ್ಥೆ ಇಲ್ಲ, ವಾರದೊಳಗೆ ಗಂಜಿ ಕೇಂದ್ರಗಳು ಮುಚ್ಚಿದವು, ಶಾಲೆಗಳು ನಡೆಯುತ್ತಿಲ್ಲ ಎಂದು ಆರೋಪಿಸಿದ್ದಾರೆ.