ಬಿಜೆಪಿಯ ರಹಸ್ಯ ಕಾರ್ಯಸೂಚಿಗೆ ಇಬ್ಬರು ಬಲಿ: ಸಿದ್ದರಾಮಯ್ಯ ಕಿಡಿ
ಬೆಂಗಳೂರು, ಡಿಸೆಂಬರ್ 20: ಪೌರತ್ವ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆ ವೇಳೆ ಮಂಗಳೂರಿನಲ್ಲಿ ಇಬ್ಬರು ಪೊಲೀಸರ ಗುಂಡಿಗೆ ಬಲಿಯಾದ ಘಟನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋಲಿಬಾರ್ ನಡೆಸುವ ಮೂಲಕ ಬಿಜೆಪಿಯು ಜನ ವಿರೋಧಿ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ ಎಂದು ಕಿಡಿಕಾರಿದ್ದಾರೆ.
ಸಿಎಎ ವಿರುದ್ಧ ಪ್ರತಿಭಟನೆ: ಮಂಗಳೂರು ಪೊಲೀಸರ ಗುಂಡಿಗೆ ಇಬ್ಬರು ಬಲಿ
ರಾಜ್ಯದಲ್ಲಿ ವಿಧಿಸಿರುವ ಸೆಕ್ಷನ್ 144 ತೆರವುಗೊಳಿಸುವಂತೆ ಆಗ್ರಹಿಸಿರುವ ಅವರು, ಬಿಎಸ್ ಯಡಿಯೂರಪ್ಪ ಅವರು ಮೊದಲಬಾರಿ ರಾಜ್ಯದ ಮುಖ್ಯಮಂತ್ರಿಯಾದಾಗ ಇಬ್ಬರು ರೈತರು ಗುಂಡಿಗೆ ಆಹುತಿಯಾದರು. ಎರಡನೇ ಬಾರಿ ಮುಖ್ಯಮಂತ್ರಿಯಾದಾಗ ಇಬ್ಬರು ಅಮಾಯಕ ಯುವಕರು ಗುಂಡಿಗೆ ಬಲಿಯಾಗಿದ್ದಾರೆ. ಬಿಜೆಪಿ ಮೂಲತಃ ರೈತ ಮತ್ತು ಯುವಜನ ವಿರೋಧಿ ಎನ್ನುವುದು ಸಾಬೀತಾಗಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಧಾರ್ಮಿಕ ದ್ವೇಷ ಹುಟ್ಟುಹಾಕುವ ಬಿಜೆಪಿಯ ರಹಸ್ಯಕಾರ್ಯಸೂಚಿಗೆ ಮತ್ತು ರಾಜ್ಯ ಸರ್ಕಾರದ ಅಸಾಮರ್ಥ್ಯಕ್ಕೆ ಮಂಗಳೂರಿನ ಇಬ್ಬರು ಯುವಕರು ಬಲಿಯಾಗಿದ್ದಾರೆ. ಮೃತ ಯುವಕರ ದುಃಖತಪ್ತ ಕುಟುಂಬಕ್ಕೆ ನನ್ನ ಸಂತಾಪಗಳು. ಪ್ರತಿಭಟನೆಕಾರರು ಶಾಂತಿ ಕಾಪಾಡಬೇಕೆಂದು ವಿನಂತಿಸುತ್ತಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರತಿಭಟನೆ ಹತ್ತಿಕ್ಕಲು ದ.ಕನ್ನಡದಲ್ಲಿ 48 ಗಂಟೆ ಇಂಟರ್ನೆಟ್ ಬಂದ್
ಮಂಗಳೂರು ನಗರದ ರಾವ್ ಆಂಡ್ ರಾವ್ ವೃತ್ತದ ಬಳಿ ಗುರುವಾರ ಪ್ರತಿಭಟನೆ ಸಂದರ್ಭದಲ್ಲಿ ಕಂದಕ್ ನಿವಾಸಿ ಜಲೀಲ್ ಮತ್ತು ಬೆಂಗ್ರೆ ನಿವಾಸಿ ನೌಶೀನ್ ಪೊಲೀಸರ ಗುಂಡೇಟಿಗೆ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿಭಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹಾಗೂ ಪ್ರಚೋದನಾಕಾರಿ ಮಾಹಿತಿಗಳನ್ನು ಹರಿಬಿಡಲಾಗುತ್ತಿರುವುದರಿಂದ ಅದನ್ನು ನಿಯಂತ್ರಿಸಲು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 48 ಗಂಟೆಗಳವರೆಗೆ ಅಂತರ್ಜಾಲ ಸೇವೆಗಳನ್ನು ಬಂದ್ ಮಾಡಲಾಗಿದೆ.