ವಿಧಾನಸಭೆ ವಿಪಕ್ಷ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಆಯ್ಕೆ
ಬೆಂಗಳೂರು, ಅಕ್ಟೋಬರ್ 09: ರಾಜ್ಯ ಕಾಂಗ್ರೆಸ್ಗೆ ಸಿದ್ದರಾಮಯ್ಯ ಅವರೇ 'ಕಿಂಗ್' ಎಂಬುದು ಮತ್ತೆ ಸಾಬೀತಾಗಿದೆ. ಹಲವು ಪ್ರಯತ್ನಗಳ ನಂತರವೂ ಸಹ ಸಿದ್ದರಾಮಯ್ಯ ವಿರೋಧಿಗಳಿಂದ ವಿಪಕ್ಷ ನಾಯಕ ಸ್ಥಾನವನ್ನು ಪಡೆಯಲಾಗಿಲ್ಲ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಸಿದ್ದರಾಮಯ್ಯ ಅವರನ್ನು ವಿಧಾನಸಭೆ ವಿರೋಧ ಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಿರುವ ವಿಷಯ ಹೇಳಿದ್ದು ಜೊತೆಗೆ ಎಸ್.ಆರ್.ಪಾಟೀಲ್ ಅವರು ವಿಧಾನಪರಿಷತ್ ಪ್ರತಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
ಸಿದ್ದರಾಮಯ್ಯ ಅವರಿಗೆ ವಿರೋಧ ಪಕ್ಷ ನಾಯಕ ಸ್ಥಾನವನ್ನು ನೀಡಲಾಗಿದೆಯಾದರೂ, ಸಣ್ಣ ಹಿನ್ನಡೆಯೂ ಆಗಿದ್ದು ಶಾಸಕಾಂಗ ಪಕ್ಷ ನಾಯಕ ಸ್ಥಾನವನ್ನು ಬಿಟ್ಟುಕೊಡುವಂತೆ ಸೂಚಿಸಲಾಗಿದೆ.
ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯಿಂದ ಸಿದ್ದರಾಮಯ್ಯ ಅವರನ್ನು ಹೊರಗೆ ಕಳುಹಿಸಲಾಗಿದೆ. ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಎಚ್.ಕೆ.ಪಾಟೀಲ್, ಜಿ.ಪರಮೇಶ್ವರ್ ಅಥವಾ ಕೆ.ಎಚ್.ಮುನಿಯಪ್ಪ ಅವರಿಗೆ ಸ್ಥಾನ ನೀಡಿ ಅಸಮಾಧಾನ ಶಮನಗೊಳಿಸುವ ಸಾಧ್ಯತೆ ಇದೆ.
ಪರಮೇಶ್ವರ್-ಎಚ್.ಕೆ.ಪಾಟೀಲ್ ಗೆ ಸ್ಥಾನ ನೀಡಲು ಒತ್ತಾಯ
ಮೂಲ ಕಾಂಗ್ರೆಸ್ಸಿಗರು ಮತ್ತು ವಲಸಿಗ ಕಾಂಗ್ರೆಸ್ಸಿಗರ ನಡುವೆ ತಿಕ್ಕಾಟ ಪ್ರಾರಂಭವಾಗಿ, ಪರಮೇಶ್ವರ್, ಎಚ್.ಕೆ.ಪಾಟೀಲ್ ಅವರಿಗೆ ವಿಪಕ್ಷ ನಾಯಕ ಸ್ಥಾನ ನೀಡಬೇಕೆಂದು ಹಲವು ಬಹಿರಂಗವಾಗಿ ಒತ್ತಾಯ ಹೇರಿದ್ದರು. ಆದರೆ ಹೈಕಮಾಂಡ್ ಮತ್ತೊಮ್ಮೆ ಸಿದ್ದರಾಮಯ್ಯ ಅವರ ಪರವೇ ಒಲವು ತೋರಿದೆ. ಆ ಮೂಲಕ ಸಿದ್ದರಾಮಯ್ಯ ವಿರೋಧಿಗಳಿಗೆ ದೊಡ್ಡ ಸೋಲಾಗಿದೆ.
ಸಿದ್ದರಾಮಯ್ಯ ಆಯ್ಕೆಗೆ ವಿರೋಧ ವ್ಯಕ್ತಪಡಿಸಲಾಗಿತ್ತು
ಕೆ.ಎಚ್.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್ ಸೇರಿ ಹಲವು ಸಿದ್ದರಾಮಯ್ಯ ವಿರುದ್ಧ ಕೆಂಪು ಬಾವುಟ ಹಾರಿಸಿದ್ದರು. ಪಕ್ಷದ ಕಚೇರಿಯಲ್ಲಿ ಮುಂದೆಯೇ ಸಿದ್ದರಾಮಯ್ಯ ವಿರುದ್ಧವೇ ಪ್ರತಿಭಟನೆ ನಡೆಸಿದ್ದ ಇವರು, ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ಗೆ ದೂರು ಸಹ ನೀಡಿದ್ದರು.
ವಿಧಾನಪರಿಷತ್ ವಿಪಕ್ಷನಾಯಕ ಸ್ಥಾನಕ್ಕೆ ಎಸ್.ಆರ್.ಪಾಟೀಲ್
ವಿಧಾನಪರಿಷತ್ ಗೆ ಸಹ ವಿಪಕ್ಷ ನಾಯಕರನ್ನು ಹೈಕಮಾಂಡ್ ಆಯ್ಕೆ ಮಾಡಿದ್ದು, ಎಸ್.ಆರ್.ಪಾಟೀಲ್ ಅವರನ್ನು ವಿಧಾನಸಭೆ ಪರಿಷತ್ ನ ವಿಪಕ್ಷ ನಾಯಕ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.
ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದ ಮುಖಂಡರು
ಸಂಜೆ ಆರು ಗಂಟೆ ವೇಳೆಗೆ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿದ್ದ ಕೃಷ್ಣಬೈರೇಗೌಡ, ರಮೇಶ್ ಕುಮಾರ್, ಜಯಮಾಲಾ ವಿಶೇಷವಾಗಿ ಅಶೋಕ್ ಖೇಣಿ ಮತ್ತಿತರು ಸೇರಿ ಸಿದ್ದರಾಮಯ್ಯಗೆ ಅಭಿನಂದನೆ ಸಲ್ಲಿಸಿದರು. ಅಧಿಕೃತ ಘೋಷಣೆ ಹೊರಬಿದ್ದಬಳಿಕ ಹಲವು ಮುಖಂಡರು ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.