ರಾಜಕೀಯಕೋಸ್ಕರ ಮಹಾರಾಷ್ಟ್ರ ಖ್ಯಾತೆ ತೆಗೆಯುತ್ತಿದೆ: ಸಿದ್ದರಾಮಯ್ಯ
ಶಿವಮೊಗ್ಗ, ನವೆಂಬರ್ 29: ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾಜನ್ ವರದಿಯೇ ಅಂತಿಮ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ತಾರಕ್ಕಕ್ಕೇರಿದ್ದು, ಎರಡು ರಾಜ್ಯಗಳ ನಾಯಕರಿಂದ ಹೇಳಿಕೆ ಹಾಗೂ ಪ್ರತಿ ಹೇಳಿಕೆಗಳು ಬರುತ್ತಿದ್ದು, ಈ ವಿಚಾರವಾಗಿ ಮಾಧ್ಯಗಳ ಜೊತೆಗೆ ಮಾತನಾಡಿ, ಗಡಿ ವಿಚಾರದಲ್ಲಿ ಗಡಿ ವಿಚಾರದಲ್ಲಿ ಮಹಾಜನ್ ಆಯೋಗದ ವರದಿಯೇ ಅಂತಿಮ ಎಂದಿದ್ದು, ನಮಗೆ ಕಲ್ಲು ಹೊಡೆಯೋಕೆ ಬರಲ್ವಾ..? ನಾವು ಆ ರೀತಿ ಪುಂಡಾಟಿಕೆ ಮಾಡಬಾರದು ಅಂತ ಸುಮ್ಮನಿದ್ದೇವೆ ಎಂದು ಹೇಳಿದ್ದಾರೆ. ಗಡಿ ಸಮಸ್ಯೆ ಇತ್ಯರ್ಥವಾದಂಮತಹ ವಿಷಯ, ಮಹಾರಾಷ್ಟ್ರದವರು ರಾಜಕೀಯಕೋಸ್ಕರ ಕಾಲು ಕೆರೆಯುತ್ತಿದ್ದಾರೆ. ಮಹಾರಾಷ್ಟ್ರಕ್ಕೆ ಸೇರಿದ ಮಹಾಜನ್ ಅವರೇ ವರದಿ ನೀಡಿದ್ದಾರೆ, ಅದು ಇತ್ಯರ್ಥವಾಗಿದೆ ಎಂದರು.
ಮಹಾರಾಷ್ಟ್ರದವರು ಈ ವಿಚಾರವಾಗಿ ನ್ಯಾಯಾಲಯದಲ್ಲಿ ಮತ್ತೆ ಖ್ಯಾತೆ ತೆಗೆದಿದ್ದಾರೆ. ಪುಂಡಾಟಿಕೆ ಶುರು ಮಾಡಿದ್ದಾರೆ. ಅದಕ್ಕೆ ಸರಿಯಾದ ಉತ್ತರವನ್ನು ಸರ್ಕಾರ ಕೊಡಬೇಕು. ಮಹಾರಾಷ್ಟ್ರದಲ್ಲಿ ಇವರದ್ದೇ ಸರ್ಕಾರ ಇದೆ. ಅಲ್ಲಿನ ಮುಖ್ಯಮಂತ್ರಿ ಜೊತೆ ಮಾತನಾಡಬೇಕು. ಬಸ್ಗಳಿಗೆ ಕಲ್ಲು ಹೊಡೆಯುವುದು ಮಸಿ ಬಳಿಯೋದು ಸರಿಯಲ್ಲ. ಕಲ್ಲು ಹೊಡೆಯೋದು, ಇವರೊಬ್ಬರಿಗೆ ಬರೋದಾ? ನಾವು ಆ ತರಹದ ಪುಂಡಾಡಿಕೆ ಮಾಡಬಾರದು ಅಂತ ಸುಮ್ಮನಿದ್ದೇವೆ ಎಂದು ಹೇಳಿದರು.
ಶರಾವತಿ ಸಂತ್ರಸ್ತರ ವಿಚಾರವಾಗಿ ಸಿದ್ದರಾಮಯ್ಯ ಮಾತನಾಡಿ, ಡಬಲ್ ಇಂಜಿನ್ ಸರ್ಕಾರ ಮಾಡಬಹುದಲ್ಲ 3.5 ವರ್ಷ ಆಯ್ತು ಸರ್ಕಾರ ಬಂದು ಈತನಕ ಬರಿ ಮೊಸಳೆ ಕಣ್ಣೀರು ಸುರಿಸಿದ್ದು ಬಿಟ್ಟರೆ ರೈತರ ಸಮಸ್ಯೆಗಳಿಗೆ ಸ್ಪಂದಿಸಿಯೇ ಇಲ್ಲ ಬಿಜೆಪಿ ಸರ್ಕಾರದ ಎಂದು ಕಿಡಿಕಾರಿದರು.
ಶರಾವತಿ ಆಣೆಕಟ್ಟನ್ನು ಕಟ್ಟಿದ ಮೇಲೆ ಆ ಭಾಗದಲ್ಲಿ ಸಾವಿರಾರು ಜನ ಸಂತ್ರಸ್ತರಾಗಿದ್ದರು. 130ಕ್ಕೂ ಹೆಚ್ಚು ಹಳ್ಳಿಗಳು ಜಲಾವೃತವಾಗಿ ಅವರಿಗೆ ಅರಣ್ಯ ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಆ ಜಮೀನು ಡಿನೋಟಿಫಿಕೇಶನ್ ಆಗಿರಲಿಲ್ಲ . ನಾನು ಸಿಎಂ ಆಗಿದ್ದಾಗ 2016ರಲ್ಲಿ ಡಿ ನೋಟಿಫೈ ಮಾಡಿದೆ. ಅದರ ವಿರುದ್ಧ ಒಬ್ಬರು ಕೋರ್ಟ್ಗೆ ಹೋದರು. ನ್ಯಾಯಾಲಯ ನಾನ್ ಮಾಡಿದ ಡಿ ನೋಟಿಫಿಕೇಶನ್ ಅನ್ನು ರದ್ದು ಮಾಡಿತು. ಅದಾದ ನಂತರ ನಮ್ಮ ಸರ್ಕಾರ ಹೋಯ್ತು ಎಂದರು.
ಈಗ ಕೇಂದ್ರ ರಾಜ್ಯ ಸರ್ಕಾರಗಳೆರಡೂ ಬಿಜೆಪಿ ಆದ್ರೂ ಏನು ಮಾಡಿಲ್ಲ. ತಮ್ಮದು ಡಬಲ್ ಇಂಜಿನ್ ಸರ್ಕಾರ ಅಂತಾರೆ. ಶರಾವತಿ ಸಂತ್ರಸ್ತರಿಗೆ ಭೂಮಿ ನೀಡಲಿ ರಾಜ್ಯ ಸರ್ಕಾರಕ್ಕೆ ಅಧಿಕಾರ ಇದೆ ಅಂತ ಹೇಳಿ ನಮ್ಮ ಸರ್ಕಾರ ಡಿನೋಟಿಫಿಕೇಷನ್ ಮಾಡಿತ್ತು. ಆದರೆ, ಇದು ರದ್ದಾಗಿದೆ, ಕೇಂದ್ರದ ಅನುಮತಿ ಪಡೆದುಕೊಂಡಿಲ್ಲ ಎಂದು ನ್ಯಾಯಾಲಯ ರದ್ದು ಮಾಡಿದೆ. ಈಗ ಬಿಜೆಪಿ ಸರ್ಕಾರ ಕೇಂದ್ರದಲ್ಲೂ ಇದೆ ಎಂದರು.