ಅಹಿಂದ ಸಂಘಟನೆ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಹತ್ವದ ಹೇಳಿಕೆ!
ಬೆಂಗಳೂರು, ಫೆ. 18: ಕುರುಬ ಎಸ್ಟಿ ಹೋರಾಟದಲ್ಲಿ ಭಾಗವಹಿಸದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇದೀಗ ಅಹಿಂದ ಸಮಾವೇಶದಲ್ಲಿ ಭಾಗವಹಿಸಲು ಮುಂದಾಗಿರುವುದು ಕುತೂಹಲ ಮೂಡಿಸಿದೆ. ಕಲಬುರಗಿಯಲ್ಲಿ ನಡೆಯುತ್ತಿರುವುದು ಪ್ರತಿಭಟನಾ ಸಮಾವೇಶ ಎಂದು ಸಿದ್ದರಾಮಯ್ಯ ಅವರು ಮಂಡ್ಯ ತಾಲೂಕಿನ ಕೋಡಿದೊಡ್ಡಿ ಗ್ರಾಮದಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ ಅದು ಅಹಿಂದಾ ಸಮಾವೇಶ ಎಂದು ವಿರೋಧಿಗಳು ಆರೋಪಿಸಿದ್ದಾರೆ.
ಅಭಿಮಾನಿಯ ಅಂತಿಮಯಾತ್ರೆಯಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಅವರು, ಇತ್ತೀಚೆಗೆ ಸಿಎಂ ಯಡಿಯೂರಪ್ಪ ಅವರ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಅದರಂತೆ ಗೊಂಡಾ, ರಾಜಗೊಂಡಾ ಜಾತಿಯವರು ಎಸ್ಟಿ ಸರ್ಟಿಫಿಕೇಟ್ ತೆಗೆದುಕೊಳ್ಳಬೇಕಾದರೆ ಸಿಆರ್ಇ ಸೆಲ್ನಿಂದ ವರದಿ ತೆಗೆದುಕೊಂಡು ಶಿಫಾರಸ್ಸು ಮಾಡಬೇಕೆಂದು ಹೇಳಿದ್ದಾರೆ. ಅದರಿಂದ ಜಾತಿ ಪ್ರಮಾಣಪತ್ರ ಪಡೆಯಲು ಕಿರುಕುಳ ಹೆಚ್ಚಾಗುತ್ತದೆ. ಹೀಗಾಗಿ ಆ ಆದೇಶವನ್ನು ವಾಪಸ್ಸು ಪಡೆಯಬೇಕು. ಈ ಬಗ್ಗೆ ಒತ್ತಡ ಹಾಕಲು ಕಲಬುರಗಿಯಲ್ಲಿ ಪ್ರತಿಭಟನಾ ಸಭೆ ಕರೆದಿದ್ದಾರೆ. ಅದರಲ್ಲಿ ಭಾಗವಹಿಸುತ್ತಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮಹಾದೇವಪ್ಪ ಹೇಳಿದ್ದೇನು?
ಇನ್ನು ಅಹಿಂದ ಸಮಾವೇಶ ನಡೆಸುವ ಬಗ್ಗೆ ಈ ಬಗ್ಗೆ ವಿರೋಧ ಮಾಡಿದವರು ಯಾರು? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲ ಅಹಿಂದ ಸಂಘಟನೆ ಮಾಡುತ್ತೇವೆ ಎಂದು ಹೇಳಿದವರು ಯಾರು? ಮಾಜಿ ಸಚಿವ ಮಹಾದೇವಪ್ಪ ಹೇಳಿದ್ದಕ್ಕೆ ನಾನು ಉತ್ತರ ಕೊಡಬೇಕಾ? ಅವರು ಸ್ನೇಹಿತರು ನಿಜ, ಆದರೆ ಸ್ನೇಹಿತರು ಹೇಳುವುದಕ್ಕೆಲ್ಲ ನಾನು ಉತ್ತರ ಕೊಡಬೇಕಾ? ಎಂದು ಪ್ರಶ್ನೆ ಮಾಡಿದ್ದಾರೆ.
ಅಹಿಂದ ಎಂದಿಲ್ಲ!
ನಾವು ಎಲ್ಲೂ ಅಹಿಂದ ಸಮಾವೇಶ ಮಾಡುತ್ತೇವೆ ಎಂದು ಹೇಳಿಲ್ಲ. ಮಾಡಿದರೂ ಅದಕ್ಕೆ ಯಾವುದೇ ವಿರೋಧ ಇಲ್ಲ. ಹೀಗಾಗಿ ಈ ಪ್ರಶ್ನೆ ಉದ್ಭವವಾಗಲ್ಲ. ಅಹಿಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭೇಟಿ ಮಾಡಿದ್ದೇನೆ ಎಂಬುದು ಕೇವಲ ಊಹಾಪೋಹ ಅಷ್ಟೇ. ಅಂತೆ ಕಂತೆಗೆಲ್ಲಾ ನಾನು ಉತ್ತರ ಕೊಡುವುದಿಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ಭೇಟಿ ಬಗ್ಗೆ ಹೇಳಿದ್ದಾರೆ.
ಮೀಸಲಾತಿ ಯಾರಿಗೆ ಕೊಡಬೇಕು?
ನಮ್ಮ ದೇಶದಲ್ಲಿ ಒಂದು ಸಂವಿಧಾನ ಇದೆ. ಸಂವಿಧಾನದಲ್ಲಿ ಮೀಸಲಾತಿ ಯಾರಿಗೆ ಕೊಡಬೇಕು? ಯಾಕೆ ಕೊಡಬೇಕು? ಅನ್ನೋದು ಇದೆ. ಅದರ ಪ್ರಕಾರ ಯಾರು ಯಾರು ಅರ್ಹರು ಇರುತ್ತಾರೆ ಅವರಿಗೆ ಮೀಸಲಾತಿ ಕೊಡಬೇಕು. ಅವರು ಯಾರೇ ಆಗಲಿ ಯಾವ ಜಾತಿ ಆಗಲಿ, ಅವಕಾಶಗಳಿಂದ ವಂಚಿತರಾಗಿರುವ ಜಾತಿಗಳು, ಸಂವಿಧಾನ ಬದ್ದವಾಗಿ ಮೀಸಲಾತಿ ಸಿಗಬೇಕಾದರೆ ಅವರಿಗೆ ಕೊಡಬೇಕು ಎಂದು ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.
ಸಂವಿಧಾನಕ್ಕೆ ತಿದ್ದುಪಡಿ!
ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಕೇಂದ್ರ ಸರ್ಕಾರ ಮೀಸಲಾತಿ ನಿಗದಿ ಮಾಡುತ್ತದೆ. ಅದನ್ನು ಬದಲಿಸಲು ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕು. ಜೊತೆಗೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡಲು ಮಂಡಲ್ ಆಯೋಗದ ವರದಿ ಅಥವಾ ಹಾವನೂರು ವರದಿ ಪ್ರಕಾರ ಕೊಡುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಒಟ್ಟಾರೆ ಅಹಿಂದ ಸಮಾವೇಶ ನಡೆಸುವುದು ಸಿದ್ದರಾಮಯ್ಯ ಅವರ ಮಾತಿನಿಂದ ಸ್ಪಷ್ಟವಾಗಿದೆ.