ಮಾನಸಿಕ ಅಸ್ವಸ್ಥ ಎಂದು ಬಾಂಬ್ ಪ್ರಕರಣ ಮುಚ್ಚಿಹಾಕಬೇಡಿ: ಸಿದ್ದರಾಮಯ್ಯ ತಾಕೀತು
ಬೆಂಗಳೂರು, ಜನವರಿ 22: ಮಂಗಳೂರು ಬಜ್ಪೆ ವಿಮಾನ ನಿಲ್ದಾಣದ ಸಮೀಪ ಸ್ಫೋಟಕ ಇರಿಸಿದ ಪ್ರಕರಣದ ಆರೋಪಿಯನ್ನು ಮಾನಸಿಕ ಅಸ್ವಸ್ಥ ಎಂದು ಬಿಂಬಿಸಿ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಬೇಡಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳೂರು ಪ್ರಕರಣದ ಕುರಿತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಪೊಲೀಸರ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ಸಿದ್ದರಾಮಯ್ಯ ಕೂಡ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪೊಲೀಸರು ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಅವರು ವೃತ್ತಿಪರತೆಯಿಂದ ಕೆಲಸ ಮಾಡಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಆರೋಪಿ ಆದಿತ್ಯರಾವ್ ಕೃತ್ಯದ ಕುರಿತು ಸಹೋದರ ಹೇಳಿದ್ದೇನು?
ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪತ್ತೆಯಾದ ಪ್ರಕರಣದಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯನ್ನು ಪತ್ತೆ ಮಾಡಲಾಗಿತ್ತು. ಪೊಲೀಸರ ಕೈಗೆ ಸಿಗದೆ ಬೆಂಗಳೂರಿಗೆ ಲಾರಿ ಮೂಲಕ ಬಂದಿದ್ದ ಆರೋಪಿ ಆದಿತ್ಯರಾವ್, ಬೆಳಿಗ್ಗೆ ಡಿಜಿ & ಐಜಿಪಿ ನೀಲಮಣಿ ರಾಜು ಅವರ ಮುಂದೆ ಶರಣಾಗಿದ್ದಾನೆ. ಹೀಗಾಗಿ ಸಿಎಎ ವಿರುದ್ಧದ ಪ್ರತೀಕಾರದ ಕ್ರಮ, ಉಗ್ರರ ದಾಳಿ, ಜನರಲ್ಲಿ ಭಯ ಹುಟ್ಟಿಸಲು ನಡೆದ ಕೃತ್ಯ ಮುಂತಾದ ರೀತಿ ವ್ಯಾಖ್ಯಾನಗೊಂಡಿದ್ದ ಮಂಗಳೂರು ಸ್ಫೋಟಕ ಪತ್ತೆ ಪ್ರಕರಣದ ಹಿಂದಿನ ವಾಸ್ತವ ಸಂಗತಿ ಬಹುತೇಕ ಬಹಿರಂಗವಾಗಿದೆ.
ಪ್ರಕರಣ ಮುಚ್ಚಿಹಾಕಬೇಡಿ
ಮಂಗಳೂರು ವಿಮಾನನಿಲ್ದಾಣಕ್ಕೆ ಬಾಂಬು ಇಟ್ಟಿರುವ ಆರೋಪಿ ಆದಿತ್ಯರಾವ್ ಎಂಬವನ ಬಗ್ಗೆ ನಿಷ್ಪಕ್ಷಪಾತವಾಗಿ ನಡೆಸಿ ಸತ್ಯ ಸಂಗತಿಯನ್ನು ಬಯಲಿಗೆಳೆಯಬೇಕು ಆತನನ್ನು ಮಾನಸಿಕ ಅಸ್ವಸ್ಥನೆಂದು ಬಿಂಬಿಸಿ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯಬಾರದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಅಜೆಂಡಾಕ್ಕೆ ಬಳಸಲಾಗದ ಪ್ರಕರಣ
ನಿರ್ದಿಷ್ಟ ಸಮುದಾಯದ ಬಗ್ಗೆ ಪೂರ್ವಗ್ರಹ ಹೊಂದಿರುವ ಸಂಘ ಪರಿವಾರದ ನಾಯಕರು ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ಸಾಮಾನ್ಯ ಅಪರಾಧ ಪ್ರಕರಣಗಳಿಗೂ ಕೋಮುಬಣ್ಣ ಬಳಿಯುತ್ತಿರುವುದೇ ಅಲ್ಲಿನ ಶಾಂತಿ ವ್ಯವಸ್ಥೆ ಕದಡಲು ಕಾರಣ. ತಮ್ಮ ಅಜೆಂಡಾಕ್ಕೆ ಬಳಸಲಾಗದ ಪ್ರಕರಣಗಳ ಬಗ್ಗೆ ಅವರ ಮೌನವೇ ಅವರ ದುರುದ್ದೇಶಕ್ಕೆ ಸಾಕ್ಷಿ ಎಂದು ಸಂಘಪರಿವಾರದ ವಿರುದ್ಧ ಕಿಡಿಕಾರಿದ್ದಾರೆ.
ಆರೋಪಿ ಆದಿತ್ಯರಾವ್ ಸ್ಫೋಟಕ ತಯಾರಿಸಿದ್ದು ಹೇಗೆ?
ವೃತ್ತಿಪರತೆಯಿಂದ ಕೆಲಸ ಮಾಡಿ
ಪೊಲೀಸರು ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿಯಲು ಹೋಗದೆ ವೃತ್ತಿಪರತೆಯಿಂದ ಕೆಲಸ ಮಾಡಬೇಕು. ಮಂಗಳೂರು ಪೊಲೀಸರು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಅನಗತ್ಯವಾಗಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲು ಕಾರಣವಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಬ್ಬನೇ ಫಿಕ್ಸ್ ಮಾಡಲು ಸಾಧ್ಯವಿಲ್ಲ
ಆದಿತ್ಯ ರಾವ್ಗೆ ತಲೆ ಸರಿ ಇಲ್ಲ ಎನ್ನುತ್ತಾರೆ. ಬಾಂಬ್ ಫಿಕ್ಸ್ ಮಾಡುವಾಗ ತಲೆ ಸರ ಇತ್ತಾ. ಒಬ್ಬನೇ ಬಾಂಬ್ ಫಿಕ್ಸ್ ಮಾಡಲು ಸಾಧ್ಯವಿಲ್ಲ. ಎಲ್ಲ ಮಾಹಿತಿಯೂ ಪೊಲೀಸರ ಬಳಿಯೇ ಇರುತ್ತದೆ. ಆರೋಪಿ ಬೆಂಗಳೂರಿಗೆ ಬರುವವರೆಗೂ ಅವರು ಏನು ಮಾಡುತ್ತಿದ್ದರು? ಇದರ ಹಿಂದೆ ಬಹಳ ದೊಡ್ಡ ಸಂಚು ಇದೆ ಎಂದು ಮಾಜಿ ಸಚಿವ ಯುಟಿ ಖಾದರ್ ಅನುಮಾನ ವ್ಯಕ್ತಪಡಿಸಿದ್ದಾರೆ.