ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಇದು ಸಿಎಂ ಯಡಿಯೂರಪ್ಪ ಸರ್ಕಾರವೊ? ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸಂಪುಟವೊ?'

|
Google Oneindia Kannada News

ಬೆಂಗಳೂರು, ಫೆ. 11: ಅಂತು ಇಂತು ಮೈತ್ರಿ ಸರ್ಕಾರ ಹೋಗಿ, ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದು, ಬಹುತೇಕ ಪೂರ್ಣ ಪ್ರಮಾಣದ ಸಂಪುಟ ಕೂಡ ರಚನೆ ಆದಂತಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೇರಿದಂತೆ 28 ಮಂತ್ರಿಗಳು ರಾಜ್ಯ ಬಿಜೆಪಿ ಸರ್ಕಾರದಲ್ಲಿ ಖಾತೆ ವಹಿಸಿಕೊಂಡಿದ್ದಾರೆ. ತಾಂತ್ರಿಕವಾಗಿ ಇದು ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಸಂಪುಟವಾಗಿದ್ದರೂ ಕೂಡ, ಆಂತರಿಕವಾಗಿ ಸಂಪುಟದ ಬಹಳಷ್ಟು ಮಂತ್ರಿಗಳು ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಆಪ್ತರು ಎನ್ನುವುದು ಗುಟ್ಟೇನೂ ಅಲ್ಲ.

ಹೌದು! ಮೈತ್ರಿ ಸರ್ಕಾರ ಪತನವಾಗಲು ಬಹುತೇಕ ಮಾಜಿ ಸಿಎಂ ಸಿದ್ದರಾಮಯ್ಯ ಗರಡಿಯಲ್ಲಿನ ಶಾಸಕರೇ ಕಾರಣರಾಗಿದ್ದರು ಎಂಬುದು ಬಹಿರಂಗ ಸತ್ಯ. ಸಿದ್ದರಾಮಯ್ಯ ಅವರ ಆಪ್ತಬಳಗದಲ್ಲಿದ್ದ ಶಾಸಕರು ಏಕಾಏಕಿ ಅಂದಿನ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ತಿರುಗಿ ಬಿದ್ದಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವಾಗ ಯಾರೂ ಕೂಡ 'ಕಾಂಗ್ರೆಸ್ ಪಕ್ಷದಿಂದ ಅನ್ಯಾಯವಾಗಿದೆ' ಎಂಬ ಹೇಳಿಕೆ ಕೊಟ್ಟಿರಲಿಲ್ಲ ಎಂಬುದನ್ನು ಗಮನಿಸಬಹುದು.

ಯಡಿಯೂರಪ್ಪ ಸಚಿವ ಸಂಪುಟ: ಯಾರಿಗೆ ಯಾವ ಖಾತೆ ಅಧಿಕೃತ ಪಟ್ಟಿಯಡಿಯೂರಪ್ಪ ಸಚಿವ ಸಂಪುಟ: ಯಾರಿಗೆ ಯಾವ ಖಾತೆ ಅಧಿಕೃತ ಪಟ್ಟಿ

ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರೆ ಬಿಜೆಪಿ ಸರ್ಕಾರದಲ್ಲಿ ಪ್ರಭಾವಿ ಖಾತೆಗಳನ್ನು ಪಡೆದುಕೊಂಡಿರುವುದು ಮೂಲ ಬಿಜೆಪಿಗರಲ್ಲಿ ಆತಂಕ ಮೂಡಿಸಿದೆ.

ಸಿಎಂ ಯಡಿಯೂರಪ್ಪ ಸಂಪುಟದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರು

ಸಿಎಂ ಯಡಿಯೂರಪ್ಪ ಸಂಪುಟದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರು

ರಾಜಕೀಯದಲ್ಲಿ ಯಾರೂ ಶಾಶ್ವತ ಸ್ನೇಹಿತರು ಅಲ್ಲ, ವಿರೋಧಿಗಳೂ ಅಲ್ಲ ಎನ್ನುವ ಮಾತಿದೆ. ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಕಟುವಾಗಿ ಟೀಕಿಸುತ್ತಿದ್ದವರೇ ಈಗ ಬಿಎಸ್‌ವೈ ಸಂಪುಟದಲ್ಲಿ ಪ್ರಭಾವಿ ಖಾತೆಗಳ ಸಚಿವರು.

ಖಾತೆ ಮರುಹಂಚಿಕೆ ಬಳಿಕ ಯಾರ ಬಳಿ ಯಾವ ಖಾತೆ ಉಳಿದಿದೆ?ಖಾತೆ ಮರುಹಂಚಿಕೆ ಬಳಿಕ ಯಾರ ಬಳಿ ಯಾವ ಖಾತೆ ಉಳಿದಿದೆ?

ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ, ಬಳಿಕ ಮೈತ್ರಿ ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದಾಗ ಆಪ್ತವಲಯದಲ್ಲಿದ್ದ, ಎಸ್.ಟಿ. ಸೋಮಶೇಖರ್, ಬೈರತಿ ಬಸವರಾಜು, ರಮೇಶ್ ಜಾರಕಿಹೊಳಿ, ಡಾ. ಕೆ. ಸುಧಾಕರ್, ಬಿ.ಸಿ. ಪಾಟೀಲ್, ಶ್ರೀಮಂತ್ ಪಾಟೀಲ್, ಶಿವರಾಂ ಹೆಬ್ಬಾರ್, ಆನಂದ್ ಸಿಂಗ್ ಎಲ್ಲರೂ ಪ್ರಭಾವಿ ಖಾತೆಗಳನ್ನು ಹೊಂದಿದ್ದಾರೆ.

ಜೊತೆಗೆ ಜೆಡಿಎಸ್ ನಿಂದ ಬಂದಿದ್ದ ಸಚಿವರಾದ ಕೆ. ಗೋಪಾಲಯ್ಯ ಹಾಗೂ ನಾರಾಯಣಗೌಡ ಅವರು ಕೂಡ ಸಿದ್ದರಾಮಯ್ಯ ಅವರಿಗೆ ಆಪ್ತರೆ. ಇನ್ನು ಆಪ್ತರಾಗಿದ್ದ ಎಂಟಿಬಿ ನಾಗರಾಜ್ ಹಾಗು ಆರ್. ಶಂಕರ್ ಮಾತ್ರ ಸಧ್ಯಕ್ಕೆ ಮಂತ್ರಿ ಆಗಿಲ್ಲ.

ಶ್ರೀಮಂತ್ ಪಾಟೀಲ್, ಆನಂದ್ ಸಿಂಗ್, ಎಂಟಿಬಿ ಸೇರಿದಂತೆ ಬಹುತೇಕರಿಗೆ ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೊಡಿಸಿದ್ದೆ ಸಿದ್ದರಾಮಯ್ಯನವರು ಎಂದು ಬಿಫಾರಂ ಪಡೆದುಕೊಂಡ ನಂತರ ಅವರೇ ಹೇಳಿಕೊಂಡಿದ್ದರು. ಜೊತೆಗೆ ರಾಣಿಬೆನ್ನೂರು ಕ್ಷೇತ್ರದಲ್ಲಿ ಆರ್. ಶಂಕರ್ ಪಕ್ಷೇತರ ಅಭ್ಯರ್ಥಿಯಾಗಿ ಗೆಲ್ಲಲು ಸಿದ್ದರಾಮಯ್ಯ ಅವರ ಸಹಾಯವಿತ್ತು ಎಂಬುದನ್ನು ಮಾಜಿ ಸ್ಪೀಕರ್, ಕಾಂಗ್ರೆಸ್ ಹಿರಿಯ ನಾಯಕ ಕೆ.ಬಿ. ಕೋಳಿವಾಡ ಅವರೇ ನೇರವಾಗಿ ಆರೋಪ ಮಾಡಿದ್ದರು. ಇದರಿಂದಾಗಿ ಈಗಿನದು ಒಂದರ್ಥದಲ್ಲಿ 'ಸಿದ್ದರಾಮಯ್ಯನವರ ಕಿಚನ್ ಕ್ಯಾಬಿನೆಟ್' ಎಂದು ಟೀಕಿಸುವರೂ ಇದ್ದಾರೆ.

'ಮಾಜಿ ಸಿಎಂ ಸಿದ್ದರಾಮಯ್ಯ ಈಗಲೂ ನಮ್ಮ ನಾಯಕರೇ!'

'ಮಾಜಿ ಸಿಎಂ ಸಿದ್ದರಾಮಯ್ಯ ಈಗಲೂ ನಮ್ಮ ನಾಯಕರೇ!'

ಇತ್ತೀಚೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆಸ್ಪತ್ರೆಯಲ್ಲಿದ್ದಾಗ ಈ ಆಪ್ತರೆಲ್ಲರೂ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು. ಮೇಲ್ನೋಟಕ್ಕೆ ಅದೊಂದು ಸೌಜನ್ಯದ ಭೇಟಿ ಆಗಿತ್ತು. ಇದಿಷ್ಟೇ ಆಗಿದ್ದರೇ ಭೇಟಿಯನ್ನು ಹಾಗೇ ಅಂದುಕೊಳ್ಳಬಹುದಿತ್ತು. ಆದರೇ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಬಹುತೇಕರು ಭೇಟಿ ಬಳಿಕ, 'ಸಿದ್ದರಾಮಯ್ಯ ಅವರು ಈಗಲೂ ನಮ್ಮ ನಾಯಕರೇ' ಎಂದು ಹೇಳಿಕೆ ಕೊಟ್ಟಿದ್ದರು.

ಹೈಕಮಾಂಡ್ ಒತ್ತಡದಿಂದ ಕೈ ಜೋಡಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ

ಹೈಕಮಾಂಡ್ ಒತ್ತಡದಿಂದ ಕೈ ಜೋಡಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬರದೇ ಇದ್ದಾಗ, ಜೆಡಿಎಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದು ಸಿದ್ದರಾಮಯ್ಯ ಅವರಿಗೆ ಸುತಾರಾಂ ಇಷ್ಟವಿರಲಿಲ್ಲ. ಆದರೆ ಹೈಕಮಾಂಡ್ ತೀರ್ಮಾನದಂತೆ ಅನಿವಾರ್ಯವಾಗಿ ಮೈತ್ರಿಗೆ ಕೈಜೋಡಿಸಿದ್ದರು ಎಂಬುದನ್ನು ಅವರ ಆಗಿನ ಆಂಗಿಕ ಭಾಷೆಯೆ ಹೇಳುತಿತ್ತು. ರಾಜಕೀಯ ಬದ್ಧ ವಿರೋಧಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಪುತ್ರ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವುದು ಕಷ್ಟವಾದರೂ ತಾತ್ಕಾಲಿಕವಾಗಿ ಸಿದ್ದರಾಮಯ್ಯ ಒಪ್ಪಿಕೊಂಡಿದ್ದರು.

ಯಾವಾಗ ಮಾಜಿ ಸಚಿವರಾದ ಡಿ.ಕೆ. ಶಿವಕುಮಾರ್, ಡಾ. ಜಿ. ಪರಮೇಶ್ವರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಜೆಡಿಎಸ್ ನಾಯಕರೊಂದಿಗೆ ಹೆಚ್ಚು ಆಪ್ತರಾದರೊ ಆಗ, ಸಿದ್ದರಾಮಯ್ಯ ಎಚ್ಚೆತ್ತುಕೊಂಡರು.

ಅದೇ ಸಂದರ್ಭದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲು ಸಿದ್ಧರಾದ ಆಪ್ತರನ್ನು ಸಿದ್ದರಾಮಯ್ಯ ಕರೆದು ಮಾತನಾಡಲೇ ಇಲ್ಲ ಎಂಬ ಆರೋಪ ಈಗಲೂ ಅವರ ಮೇಲಿದೆ. ಯಾಕೆಂದರೆ ಆಗ ಸಿದ್ದರಾಮಯ್ಯ ಬೇಡ ಎಂದಿದ್ದರೆ ಎಸ್ ಟಿ ಸೋಮಶೇಖರ್, ಬೈರತಿ ಬಸವರಾಜು ಸೇರಿದಂತೆ ಯಾರೂ ಕಾಂಗ್ರೆಸ್ ಪಕ್ಷವನ್ನು ಬಿಡುತ್ತಲೇ ಇರಲಿಲ್ಲ, ಮೈತ್ರಿ ಸರ್ಕಾರವೂ ಬೀಳುತ್ತಿರಲಿಲ್ಲ ಎಂದು ಕಾಂಗ್ರೆಸ್ ಪಕ್ಷದ ಮೂಲಗಳೇ ಹೇಳುತ್ತಿವೆ.

ಹೋಗಿದ್ದು ಸಮನ್ವಯ ಸಮಿತಿ ಅಧ್ಯಕ್ಷಸ್ಥಾನ, ಬಂದಿದ್ದು ವಿಪಕ್ಷ ನಾಯಕರ ಸ್ಥಾನ

ಹೋಗಿದ್ದು ಸಮನ್ವಯ ಸಮಿತಿ ಅಧ್ಯಕ್ಷಸ್ಥಾನ, ಬಂದಿದ್ದು ವಿಪಕ್ಷ ನಾಯಕರ ಸ್ಥಾನ

ಇನ್ನು ಮೈತ್ರಿ ಸರ್ಕಾರದ ಪತನದಿಂದ ಯಾರಿಗೆ ಲಾಭವಾಯಿತೊ? ಯಾರಿಗೆ ನಷ್ಟವಾಯಿತೊ ಗೊತ್ತಿಲ್ಲ, ಆದರೆ ಸಿದ್ದರಾಮಯ್ಯ ಅವರಿಗೆ ವೈಯಕ್ತಿಕವಾಗಿ ಲಾಭಗಿದೆ ಎಂದೆ ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.

ಯಾಕೆಂದರೆ ಸರ್ಕಾರದಲ್ಲಿ ಹಿಡಿತವಿಲ್ಲದ ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನ ಎಂಬುದು ಹೋರಾಟದ ರಾಜಕೀಯ ಮಾಡಿಕೊಂಡು ಬಂದಿದ್ದ ಸಿದ್ದರಾಮಯ್ಯರಿಗೆ ಒಂದರ್ಥದಲ್ಲಿ ಬೇಡವಾಗಿತ್ತೇನೊ. ಮೈತ್ರಿ ಸರ್ಕಾರದ ಪತನದೊಂದಿಗೆ ಸಿದ್ದರಾಮಯ್ಯ ಅವರಿಗಿದ್ದ ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನ ಹೋಗಿ ವಿರೋಧ ಪಕ್ಷ ನಾಯಕರ ಸ್ಥಾನ ಬಂತು. ಸರ್ಕಾರ ಹಾಗೂ ಪಕ್ಷದ ಮೇಲೆ ಮತ್ತೆ ಹಿಡಿತವೂ ಬಂದಿತು.

ಅಂದುಕೊಂಡಿದ್ದನ್ನು ಪರೋಕ್ಷವಾಗಿ ಸಾಧಿಸಿದ್ರಾ ಮಾಜಿ ಸಿಎಂ ಸಿದ್ದರಾಮಯ್ಯ?

ಅಂದುಕೊಂಡಿದ್ದನ್ನು ಪರೋಕ್ಷವಾಗಿ ಸಾಧಿಸಿದ್ರಾ ಮಾಜಿ ಸಿಎಂ ಸಿದ್ದರಾಮಯ್ಯ?

ಅಂದುಕೊಂಡಿದ್ದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಸಾಧಿಸಿದ್ರಾ ಎಂಬ ಮಾತುಗಳು ಇವೆ. ಒಂದುಕಡೆ ರಾಜಕೀಯ ಬದ್ದ ವಿರೋಧಿ ಜೆಡಿಎಸ್ ಜೊತೆಗಿನ ಮೈತ್ರಿ ಮುರಿದುಬಿತ್ತು, ಮತ್ತೊಂದೆಡೆ ಪಕ್ಷ ಹಾಗೂ ಸರ್ಕಾರದ ಮೇಲೆ ಹಿಡಿತ ಸಾಧಿಸಿದ್ರು, ಜೊತೆಗೆ ಪಕ್ಷ ಬಿಟ್ಟು ಹೋಗಿದ್ದ ಆಪ್ತರು ಕೂಡ ಈಗ ಬಿಜೆಪಿ ಸರ್ಕಾರದಲ್ಲಿ ಪ್ರಭಾವಿ ಖಾತೆಗಳ ಸಚಿವರು, ಇದೊಂದು ರೀತಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಂದ ಕಲಿತಿದ್ದ ರಾಜಕೀಯವೇ ಎನ್ನುತ್ತಾರೆ ಕಾಂಗ್ರೆಸ್ ಪಕ್ಷದ ಹಿರಿಯರೊಬ್ಬರು.

ಇದೆಲ್ಲವೂ ಬಿಜೆಪಿ ಹೈಕಮಾಂಡ್, ಯಡಿಯೂರಪ್ಪ ಅವರಿಗೆ ಗೊತ್ತಿದೆಯಾ?

ಇದೆಲ್ಲವೂ ಬಿಜೆಪಿ ಹೈಕಮಾಂಡ್, ಯಡಿಯೂರಪ್ಪ ಅವರಿಗೆ ಗೊತ್ತಿದೆಯಾ?

ಖಂಡಿತವಾಗಿಯೂ ಇವೆಲ್ಲ ಸೂಕ್ಷ್ಮಗಳು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ತಿಳಿಯದ ವಿಚಾರಗಳೇನಲ್ಲ. ಆದರೆ ಕಾಂಗ್ರೆಸ್ ಮುಕ್ತ ಭಾರತ ಮಾಡಬೇಕೆಂಬ ಪ್ರಯತ್ನದಲ್ಲಿ ಇವೆಲ್ಲ ಗೊತ್ತಿದ್ದರೂ ಬಿಜೆಪಿ ಹೈಕಮಾಂಡ್ ಸಿಎಂ ಯಡಿಯೂರಪ್ಪ ಹೇಳಿದ್ದನ್ನು ಕೇಳುತ್ತಿದೆ. ಇನ್ನು ಯಡಿಯೂರಪ್ಪ ಅವರು ಸರ್ಕಾರ ರಚನೆ ಜೊತೆಗೆ ಈ ಎಲ್ಲರ ಕ್ಷೇತ್ರಗಳಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿದ್ದಾರೆ. ಕೆಆರ್ ಪೇಟೆಯಂತಹ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿರುವುದರ ಹಿಂದೆ ಯಡಿಯೂರಪ್ಪ ಅವರ ದೂರದೃಷ್ಠಿ ಕೆಲಸ ಮಾಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈಗ ಬಿಜೆಪಿಗೆ ಬಂದವರು ಮುಂದೆ ಬಿಜೆಪಿ ಬಿಟ್ಟು ಬೇರೆ ಪಕ್ಷ ಸೇರಿದರೆ ಗೆಲ್ಲುವುದು ಕಷ್ಟ ಎಂಬಂತಹ ಸ್ಥಿತಿಯನ್ನು ಬಿಜೆಪಿ ನಿರ್ಮಾಣ ಮಾಡುತ್ತಿದೆ.

ಕಳೆದ ಒಂದೂವರೆ ವರ್ಷಗಳ ಕಾಲ ನಡೆದಿದ್ದೇನು?

ಕಳೆದ ಒಂದೂವರೆ ವರ್ಷಗಳ ಕಾಲ ನಡೆದಿದ್ದೇನು?

ಕಳೆದ ಒಂದೂವರೆ ವರ್ಷಗಳಲ್ಲಿ ನಡೆದಿರುವ ರಾಜಕೀಯ ಬೆಳವಣಿಗೆಗಳು ಮೇಲ್ನೋಟಕ್ಕೆ ತಾವಾಗಿಯೇ ಘಟಿಸಿದಂತೆ ಕಂಡು ಬರುತ್ತವೆ. ಆದರೆ ಅವು ಯಾವು ಕೂಡ ತಾವಾಗಿಯೇ ನಡೆದಿಲ್ಲ ಎಂಬುದು ಸತ್ಯ. ರಾಜಕೀಯ ಲೆಕ್ಕಾಚಾರಗಳೇನೆ ಇರಲಿ, ಕಳೆದ ಒಂದೂವರೆ ವರ್ಷಗಳಲ್ಲಿ ಕಂಡುಬಂದಿದ್ದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಜಾಣ್ಮೆ, ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಹೋರಾಟದ ರಾಜಕೀಯ ಹಾಗೂ ಜೆಡಿಎಸ್ ಪಕ್ಷದ ಅವಕಾಶವಾದಿತನ.

ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಅದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸಚಿವ ಸಂಪುಟದಂತಿದೆ ಎಂಬ ಮಾತುಗಳು ಅತಿಶೋಕ್ತಿ ಎನಿಸಿದರು ಒಳಗಿನ ಸತ್ಯ ಇದೇ ಎನ್ನುತ್ತಾರೆ ರಾಜಕೀಯ ಸೂಕ್ಷ್ಮ ಅರಿತವರು.

English summary
Former CM Siddaramaiah's cronies are filled with Chief Minister B.S. Yeddyurappa's cabinet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X