'ಸಿಎಂ ಏನು ದೊಡ್ಡ ಬೆಟ್ಟನಾ?, ಅವನಿನ್ನೂ ಹುಡುಗ'
ಬೆಂಗಳೂರು, ಜೂನ್ 23 : 'ಅವನು ಅಧಿಕಾರಕ್ಕಾಗಿ ಕಾಂಗ್ರೆಸಿಗೆ ಬಂದವನು. ಅಧಿಕಾರ ಹೋದ ಬಳಿಕ ಇಲ್ಲಿರುವುದೇ ಅನುಮಾನ. ಅವನಿನ್ನೂ ಹುಡುಗ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಏಕವಚನದಲ್ಲೇ ಜಾಫರ್ ಷರೀಫ್ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ಸಂಜೆ ಹಿರಿಯ ಕಾಂಗ್ರೆಸ್ ನಾಯಕ ಸಿ.ಕೆ.ಜಾಫರ್ ಷರೀಫ್ ಅವರು ಮಾಜಿ ಸಚಿವ ಅಂಬರೀಶ್ ಅವರನ್ನು ಪ್ರೆಸ್ಟೀಜ್ ಅಪಾರ್ಟ್ಮೆಂಟ್ನಲ್ಲಿನ ಫ್ಲಾಟ್ನಲ್ಲಿ ಭೇಟಿ ಮಾಡಿದರು. ಭೇಟಿಯ ಬಳಿಕ ಮಾತನಾಡಿದ ಅವರು, 'ಕಾಂಗ್ರೆಸ್ನಲ್ಲಿ ಉಂಟಾಗಿರುವ ಗೊಂದಲಗಳಿಗೆ ಸಿದ್ದರಾಮಯ್ಯ ಅವರೇ ಕಾರಣ' ಎಂದು ಆರೋಪಿಸಿದರು. [ಕಾಂಗ್ರೆಸ್ ಬಿಕ್ಕಟ್ಟು, ಬುಧವಾರದ ಬೆಳವಣಿಗೆಗಳು]
'ಮುಖ್ಯಮಂತ್ರಿ ಸಿದ್ದರಾಮಯ್ಯನ ಮೂರ್ಖತನವೇ ಇದಕ್ಕೆಲ್ಲಾ ಕಾರಣ. ರಾಜ್ಯಕ್ಕೆ ಕಾಂಗ್ರೆಸ್ ಪಕ್ಷ, ಮತ್ತು ಜನತೆ ಮುಖ್ಯವೇ ಹೊರತು ಸಿದ್ದರಾಮಯ್ಯ ಅಲ್ಲ. ಸಿಎಂ ಏನು ದೊಡ್ಡ ಬೆಟ್ಟನಾ?, ಅವನಿನ್ನೂ ಹುಡುಗ' ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು. [ರಾಜೀನಾಮೆಗೆ ಮುಂದಾದ ಶಾಸಕ ಮಾಲೀಕಯ್ಯ ಗುತ್ತೇದಾರ್]
'ಯಾರ ಬಳಿಯೂ ಚರ್ಚೆ ನಡೆಸದೇ ಸಂಪುಟ ಪುನರ್ ರಚನೆ ಮಾಡಿದ್ದು ತಪ್ಪು. ಅವನು ಕಾಂಗ್ರೆಸ್ನವ ಎಂಬ ನಂಬಿಕೆ ನನಗಿಲ್ಲ. ಅವನು ಅಧಿಕಾರಕ್ಕಾಗಿ ಕಾಂಗ್ರೆಸಿಗೆ ಬಂದವನು. ಅಧಿಕಾರ ಹೋದ ಬಳಿಕ ಇಲ್ಲಿರುವುದೇ ಅನುಮಾನ' ಎಂದರು.