ಮೈತ್ರಿಯಿಂದ ಕಾಂಗ್ರೆಸ್ಗೆ ಲಾಭವಿಲ್ಲ, ಸಿದ್ದರಾಮಯ್ಯ ವರದಿ 4 ಅಂಶಗಳು
Recommended Video
ಬೆಂಗಳೂರು, ಜೂನ್ 19 : 'ಸಿದ್ದರಾಮಯ್ಯ ಆಶೀರ್ವಾದ ಇದ್ದರೆ ಮೈತ್ರಿ ಸರ್ಕಾರ ಮುಂದುವರೆಯಲಿದೆ' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೆಲವು ದಿನಗ ಹಿಂದೆ ಹೇಳಿದ್ದರು. ಆದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ಗೆ ನಷ್ಟವೇ ಹೆಚ್ಚು ಎಂದು ಸಿದ್ದರಾಮಯ್ಯ ಹೈಕಮಾಂಡ್ಗೆ ವರದಿ ಕೊಟ್ಟಿದ್ದಾರೆ.
ಎರಡು ದಿನದಿಂದ ದೆಹಲಿಯಲ್ಲಿರುವ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಹೈಕಮಾಂಡ್ನ ಹಲವು ನಾಯಕರನ್ನು ಭೇಟಿಯಾಗಿದ್ದಾರೆ. ಕರ್ನಾಟಕದಲ್ಲಿ ಮೈತ್ರಿ ಸರ್ಕಾರವನ್ನು ಮುಂದುವರೆಸುವ ಕುರಿತು ಗಂಭೀರವಾಗಿ ಚಿಂತನೆ ನಡೆಸಿ ಎಂದು ಹೇಳಿದ್ದಾರೆ.
ರಾಹುಲ್ ಭೇಟಿ ಮಾಡಿ ಸೋಲಿನ ಕಾರಣ ಕೊಟ್ಟ ಸಿದ್ದರಾಮಯ್ಯ!
'ಮೈತ್ರಿ ಸರ್ಕಾರದಿಂದ ಜೆಡಿಎಸ್ಗೆ ಹೆಚ್ಚು ಲಾಭವಾಗುತ್ತಿದೆ. ಕಾಂಗ್ರೆಸ್ಗೆ ಲಾಭವಾಗುತ್ತಿಲ್ಲ. ನಮ್ಮ ಕಾರ್ಯಕರ್ತರಿಗೆ ಗೌರವವೂ ಸಿಗುತ್ತಿಲ್ಲ' ಎಂದು ಸಿದ್ದರಾಮಯ್ಯ ಅವರು ಹೈಕಮಾಂಡ್ಗೆ ವರದಿ ಕೊಟ್ಟಿದ್ದಾರೆ.
ಸಂಪುಟ ವಿಸ್ತರಣೆ ಬಳಿಕ ಒಗ್ಗೂಡಿದ ಕಾಂಗ್ರೆಸ್ ಅತೃಪ್ತ ಶಾಸಕರು?
ಎ.ಕೆ.ಆಂಟನಿ ಸೇರಿದಂತೆ ಹಲವು ನಾಯಕರನ್ನು ಸಿದ್ದರಾಮಯ್ಯ ಭೇಟಿ ಮಾಡಿದ್ದಾರೆ. ಬುಧವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಹೈಕಮಾಂಡ್ ನಾಯಕರ ಮುಂದಿನ ನಡೆ ಏನು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಹೇಳಿದ 4 ಪ್ರಮುಖ ಅಂಶಗಳು ಇಲ್ಲಿವೆ.....
ಯಾರಿಗೂ ಬೇಡವಾಯಿತೇ? ಸಿದ್ದರಾಮಯ್ಯ ನೇತೃತ್ವದ ಸಮನ್ವಯ ಸಮಿತಿ!
ಮೈತ್ರಿ ಸರ್ಕಾರದಿಂದ ಕಾಂಗ್ರೆಸ್ಗೆ ಲಾಭವಿಲ್ಲ
ಕರ್ನಾಟಕದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದೇವೆ. ಆದರೆ, ಇದರಿಂದಾಗಿ ಕಾಂಗ್ರೆಸ್ಗಿಂತ ಜೆಡಿಎಸ್ಗೆ ಹೆಚ್ಚು ಲಾಭವಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಹೆಚ್ಚಿನ ಬೆಲೆ ಸಿಗುತ್ತಿಲ್ಲ. ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹೆಚ್ಚು ಸಹಕಾರಿಯಾಗುತ್ತಿದೆ. ಮೈತ್ರಿ ಸರ್ಕಾರವನ್ನು ಮುಂದುವರೆಸುವ ಕುರಿತು ಗಂಭೀರವಾಗಿ ಚಿಂತನೆ ನಡೆಸುವುದು ಉತ್ತಮ ಎಂಬುದು ಸಿದ್ದರಾಮಯ್ಯ ಅವರ ವರದಿಯ ಪ್ರಮುಖವಾದ ಅಂಶವಾಗಿದೆ.
ವಿರೋಧ ಪಕ್ಷದಲ್ಲಿರಬಹುದು
ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ ಮೇಲೆ ಕಾಂಗ್ರೆಸ್ಗೆ ಬಹಳಷ್ಟು ಹಾನಿಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಹೀನಾಯ ಸೋಲಿಗೆ ಮೈತ್ರಿಯೂ ಪ್ರಮುಖ ಕಾರಣವಾಗಿದೆ. ನಾವು ವಿರೋಧ ಪಕ್ಷದಲ್ಲಿದ್ದರೆ ಹೆಚ್ಚು ಲಾಭವಾಗುತ್ತಿತ್ತು. ಮೈತ್ರಿ ಮಾಡಿಕೊಂಡು ಚುನಾವಣೆಗೆ ಹೋದಾರ ಕಾರ್ಯಕರ್ತರು ಒಪ್ಪುವುದಿಲ್ಲ. ಚಿಕ್ಕಬಳ್ಳಾಪುರ, ಮೈಸೂರು ಮತ್ತು ಕೋಲಾರದಲ್ಲಿ ನಮ್ಮ ಸೋಲಿಗೆ ಜೆಡಿಎಸ್ ನೇರವಾಗ ಕಾರಣವಾಗಿದೆ ಎಂದು ಸಿದ್ದರಾಮಯ್ಯ ವರದಿ ಕೊಟ್ಟಿದ್ದಾರೆ.
ಮುಂದಿನ ಪರಿಸ್ಥಿತಿ ಮತ್ತಷ್ಟು ಕಷ್ಟವಿದೆ
ಜೆಡಿಎಸ್ ಜೊತೆಗಿನ ಮೈತ್ರಿ ಸರ್ಕಾರ ಮುಂದುವರೆಸುವ ಕುರಿತು ಚಿಂತಿಸಬೇಕಾದ ಅಗತ್ಯವಿದೆ. ಮೈತ್ರಿ ಸರ್ಕಾರವನ್ನು ಮುಂದುವರೆಸಿದರೆ ಮುಂದಿನ ದಿನಗಳಲ್ಲಿ ಇನ್ನೂ ಸಂಕಷ್ಟ ಎದುರಿಸಬೇಕಿದೆ. ಲೋಕಸಭಾ ಚುನಾವಣೆಯಲ್ಲಿ ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳದೇ ಇರುವುದರಿಂದ ಕಾಂಗ್ರೆಸ್ಗೆ ಹೆಚ್ಚಿನ ಲಾಭವಾಗಿದೆ.
ತಳಮಟ್ಟದಲ್ಲಿ ಕಾರ್ಯಕರ್ತರು ಒಂದಾಗಿಲ್ಲ
ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ತಳಮಟ್ಟದಲ್ಲಿ ಒಂದಾಗಿಲ್ಲ. ಇಬ್ಬರೂ ಒಂದಾಗಿ ಕೆಲಸ ಮಾಡುವುದಿಲ್ಲ ಎಂಬುದಕ್ಕೆ ಲೋಕಸಭೆಯ ಚುಣಾವಣೆ ಫಲಿತಾಂಶವೇ ಸಾಕ್ಷಿಯಾಗಿದೆ. ನಾವು ಮೈತ್ರಿ ಮುಂದುವರೆಸಿದರೂ ಕಾರ್ಯಕರ್ತರು ಒಪ್ಪುವುದಿಲ್ಲ, ಇದರಿಂದಾಗಿ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹಿನ್ನಡೆ ಉಂಟಾಗಲಿದೆ.