ಸಿದ್ದರಾಮಯ್ಯ 'ಉಗ್ರ' ಹೇಳಿಕೆಗೆ ಬಿಜೆಪಿ ವ್ಯಗ್ರ ಪ್ರತಿಕ್ರಿಯೆ
ಮಂಗಳೂರು/ಬೆಳಗಾವಿ/ಕಲಬುರಗಿ, ಜನವರಿ 12: ಆರ್ ಎಸ್ ಎಸ್ ಹಾಗೂ ಬಿಜೆಪಿಯವರು ಉಗ್ರರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯನ್ನು ಖಂಡಿಸಿ ಮಂಗಳೂರು, ಬೆಳಗಾವಿ, ಕಲಬುರಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು (ಜ.12) ಬಿಜೆಪಿ ಕಾರ್ಯಕರ್ತರು ಜೈಲ್ ಭರೋ ಪ್ರತಿಭಟನೆ ನಡೆಸಿದರು.
ಸಿದ್ದರಾಮಯ್ಯ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸಬೇಕು ಎಂದು ಮಂಗಳೂರು, ಬೆಳಗಾವಿ, ಕಲಬುರಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಜೆಪಿ ಕಾರ್ಯರ್ಕರು ಆಗ್ರಹಿಸಿದರು. ನಾನು ಆರ್ ಎಸ್ ಎಸ್, ನಾನು ಬಿಜೆಪಿ ನಮ್ಮನ್ನು ಬಂಧಿಸಿ ಎಂದು ಘೋಷಣೆ ಕೂಗಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
'ಬಿಜೆಪಿ, ಆರ್ ಎಸ್ ಎಸ್, ಬಜರಂಗದಳದವರೇ ಉಗ್ರಗಾಮಿಗಳು'
ಆರ್ ಎಸ್,ಎಸ್ , ಬಜರಂಗದಳ ಮತ್ತು ಬಿಜೆಪಿಯವರೇ ಉಗ್ರಗಾಮಿಗಳೇ ಎಂದು ಇತ್ತೀಚೆಗೆ ಮೈಸೂರಿನಲ್ಲಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಹಿಂದೂಪರ ಸಂಘಟನೆಯ ಮುಖಂಡರು, ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರ ಹೇಳಿಕೆಯಿಂದ ಹೊತ್ತಿಕೊಂಡಿದ್ದ ಬೆಂಕಿಗೆ ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಇನ್ನು ಸ್ವಲ್ಪ ಸೇರಿಸಿ ಉರಿಯುವ ಬೆಂಕಿಗೆ ತುಪ್ಪ ಸುರಿದರು. ಇದೀಗ ರಾಜ್ಯದ್ಯಾಂತ ಬಿಜೆಪಿ ಕಾರ್ಯಕರ್ತರು ಜೈಲ್ ಭರೋ ಚಳವಳಿ ನಡೆಸಿದರು.
ಮಂಗಳೂರಿನಲ್ಲಿ ತೀವ್ರ ಆಕ್ರೊಶ
ನಗರದ ಮಲ್ಲಿಕಟ್ಟೆ ಯಲ್ಲಿರುವ ಕಾಂಗ್ರೆಸ್ ಕಚೇರಿ ಮುಂಭಾಗ ಸೇರಿದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಭಯೋತ್ಪಾದಕರು ಯಾರು? ಸಿದ್ಧರಾಮಯ್ಯನವರೇ ಉತ್ತರಿಸಿ ಎಂಬ ಪೋಸ್ಟರ್ ನೊಂದಿಗೆ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ನಾನು ಆರ್ ಎಸ್ ಎಸ್ , ನಾನು ಬಿಜೆಪಿ ನಮ್ಮನ್ನು ಬಂಧಿಸಿ ಎಂದು ಘೋಷಣೆ ಕೂಗಿದರು. ಬಿಜೆಪಿ ಕಾರ್ಯಕರ್ತರು ರಾಜ್ಯಸರಕಾರದ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆ ತೀವ್ರಗೊಳುತ್ತಿದ್ದಂತೆ ಮದ್ಯಪ್ರವೇಶಿಸಿದ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದರು.
ಬೆಳಗಾವಿಯಲ್ಲಿ ಅಭಯ ಪಾಟೀಲ ನೇತ್ರತ್ವದಲ್ಲಿ ಪ್ರತಿಭಟನೆ
ನಗರದ ಚನ್ನಮ್ಮ ವೃತ್ತದಲ್ಲಿ ಮಾಜಿ ಶಾಸಕ ಅಭಯ ಪಾಟೀಲ ನೇತ್ರತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿ ಕ್ಷಮೆಯಾಚಿಸುವಂತೆ ಆಗ್ರಹಿಸಿದರು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆಯೇ ಮುಂಜಾಗ್ರತೆ ಕ್ರಮವಾಗಿ ಪೊಲೀಸರು ಪ್ರತಿಭಟನಾ ನಿರತ ಕಾರ್ಯಕರ್ತರನ್ನು ಬಂಧಿಸಿದರು.
ಕಲಬುರಗಿ ಕಾಂಗ್ರೆಸ್ ಕಚೇರಿ ಮುಂದೆ ಧರಣಿ
ನಗರದಲ್ಲಿರುವ ಬ್ಯಾರಿಕೇಡ್ ಮುರಿದು ಕಲಬುರಗಿ ಕಾಂಗ್ರೆಸ್ ಕಚೇರಿಯತ್ತ ನುಗ್ಗಿ ಪ್ರತಿಭಟನೆ ನಡೆಸಿದರು. ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಬಳಿಕ ವಾದ-ವಿವಾದ ತಾರಕಕ್ಕೇರುತ್ತಿದ್ದಂತೆಯೇ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್, ಶಾಸಕ ದತ್ತಾತ್ರೆಯ ಪಾಟೀಲ್ ರೇವೂರ, ಬಿ.ಜಿ.ಪಾಟೀಲ್ ಸೇರಿ ಇನ್ನೂರಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದರು.
ಅಷ್ಟಕ್ಕೂ ಸಿದ್ದರಾಮಯ್ಯ ಹೇಳಿದ್ದೇನು?
ಆರ್ ಎಸ್,ಎಸ್ , ಬಜರಂಗದಳ ಮತ್ತು ಬಿಜೆಪಿಯವರೇ ಉಗ್ರಗಾಮಿಗಳೇ ಎಂದು ಇತ್ತೀಚೆಗೆ ಮೈಸೂರಿನಲ್ಲಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಹಿಂದೂಪರ ಸಂಘಟನೆಯ ಮುಖಂಡರು, ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.