ಪಿಎಫ್ಐ ಸಂಘಟನೆ ನಿಷೇಧಕ್ಕೆ ಸಿದ್ದರಾಮಯ್ಯ ನಕಾರ
ಬೆಂಗಳೂರು, ಫೆಬ್ರವರಿ 22: ಹಿಂದೂ ಕಾರ್ಯಕರ್ತರ ಕೊಲೆಯಾದಾಗೆಲ್ಲಾ ಆಗಾಗ ಪ್ರಸ್ತಾಪವಾಗುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ನಿಷೇಧದ ಕೂಗು ಕರ್ನಾಟಕದಲ್ಲಿ ಮತ್ತೆ ಕೇಳಿಸಿದೆ. ಆದರೆ ಇದಕ್ಕೆ ಅಷ್ಟೇ ತಣ್ಣಗೆ ಉತ್ತರ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಘಟನೆ ನಿಷೇಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಜಾರ್ಖಂಡ್ ನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯನ್ನು ನಿಷೇಧ ಮಾಡಲಾಗಿದೆ. ಸಮಾಜದಲ್ಲಿ ಅಹಿತಕರ ಘಟನೆಗಳಿಗೆ ನಾಂದಿಯಾಗುತ್ತಿದೆ ಎಂದು ಹೇಳಿ ಪಿಎಫ್ಐಗೆ ನಿಷೇಧ ಹೇರಲಾಗಿದೆ. ಜಾರ್ಖಂಡ್ ಸರಕಾರದ ಈ ನಿರ್ಧಾರವನ್ನು ಬಿಜೆಪಿ ಮುಕ್ತಕಂಠದಿಂದ ಶ್ಲಾಘಿಸಿದೆ.
ಪಿಎಫ್ಐ ನಿಷೇಧದ ಬಗ್ಗೆ ಸರ್ಕಾರ ಚಿಂತಿಸಿಲ್ಲ : ರಾಮಲಿಂಗಾರೆಡ್ಡಿ
ಜಾರ್ಖಂಡ್ ಸರಕಾರದ ನಿರ್ಧಾರದ ಬೆನ್ನಿಗೆ ಕರ್ನಾಟಕದಲ್ಲೂ ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡಬೇಕು ಎಂಬ ಕೂಗು ಎದ್ದಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, "ಅಲ್ಲಿರುವ ಪರಿಸ್ಥಿತಿ ಇಲ್ಲಿ ಕರ್ನಾಟಕದಲ್ಲಿಇಲ್ಲ," ಎಂದು ಹೇಳಿದ್ದಾರೆ. ಈ ಮೂಲಕ ಪಿಎಫ್ಐ ಸಂಘಟನೆ ನಿಷೇಧಿಸಲು ಸಾಧ್ಯವಿಲ್ಲ ಎಂದು ನಯವಾಗಿ ಹೇಳಿದ್ದಾರೆ.
ಈ ಹಿಂದೆ ಹಲವು ಬಾರಿ ಕರ್ನಾಟಕದಲ್ಲಿ ಪಿಎಫ್ಐ ಸಂಘಟನೆ ನಿಷೇಧಿಸುವಂತೆ ಬಿಜೆಪಿ ಒತ್ತಾಯಿಸಿತ್ತು. ಮತ್ತು ಈ ಸಂಬಂಧ ಪ್ರತಿಭಟನೆಗಳನ್ನೂ ನಡೆಸಿತ್ತು. ಆದರೆ ಸಂಘಟನೆಯನ್ನು ಕೇಂದ್ರ ಸರಕಾರ ಬ್ಯಾನ್ ಮಾಡಬೇಕು ಎಂದು ಸಿದ್ದರಾಮಯ್ಯ ನರೇಂದ್ರ ಮೋದಿ ಮೇಲೆ ಗೂಬೆ ಕೂರಿಸಿದ್ದರು.
ಪಿಎಫ್ಐ ಜತೆ ಬಜರಂಗದಳ, ಶ್ರೀರಾಮ ಸೇನೆ ವಿರುದ್ಧವೂ ಕ್ರಮ: ಸಿದ್ದರಾಮಯ್ಯ
ನಿಷೇಧ ಮಾಡಲು ನಮಗೆ ಕರ್ನಾಟಕದಿಂದ ಪ್ರಸ್ತಾಪ ಬಂದಿಲ್ಲ ಎಂದು ಕೇಂದ್ರದವರೂ ಜಾರಿಕೊಳ್ಳುತ್ತಿದ್ದರು.
ಅಂತೂ ಇಂತೂ ಕರ್ನಾಟಕದಲ್ಲಿ ಪಿಎಫ್ಐ ಬ್ಯಾನ್ ಆಗುವ ಲಕ್ಷಣಗಳು ಮಾತ್ರ ಕಾಣುತ್ತಿಲ್ಲ. ಕರ್ನಾಟಕದವರು ಪ್ರಸ್ತಾಪ ಕಳುಹಿಸುವುದಿಲ್ಲ; ಕೇಂದ್ರದವರು ನಿಷೇಧ ಮಾಡುವುದೂ ಇಲ್ಲ.