ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: ಸಿದ್ಧರಾಮಯ್ಯ ಆಡಿದ ಮಾತಿನ 'ಒಳಮರ್ಮ'ವೇನು.?
ಕೊಪ್ಪಳ, ಜೂನ್ 3: ಬಿಜೆಪಿಯಲ್ಲಿ ಸ್ಫೋಟಗೊಂಡಿರುವ ಭಿನ್ನಮತ ಹಲವು ಹೊಸ ಆಯಾಮಗಳಿಗೆ ವೇದಿಕೆ ಒದಗಿಸಿದೆ. ಒಂದೆಡೆ ಸಿಎಂ ಯಡಿಯೂರಪ್ಪ ರವರ ಕುರ್ಚಿಗೆ ಕುತ್ತು ತರುವ ಮಾತನ್ನಾಡಿಸಿದರೆ, ಮತ್ತೊಂದುಕಡೆ ಉತ್ತರ ಕರ್ನಾಟಕದ ಮುಖಂಡರೋರ್ವರಿಗೆ ಮುಖ್ಯಮಂತ್ರಿಯಾಗುವ ನಸೀಬನ್ನು ಸೃಷ್ಟಿಸ ತೊಡಗಿದೆ. ಜೊತೆಗೆ ಹೊಸ ಸರ್ಕಾರ ರಚನೆಯ ಆಸೆಯನ್ನೂ ಪ್ರತಿಪಕ್ಷಗಳಿಗೆ ಹುಟ್ಟಿಸಿಕೊಟ್ಟಿದೆ.
Recommended Video
ಭಿನ್ನಮತದ ಸ್ವರೂಪ ಅದ್ಹೇಗೆ ಇದ್ದರೂ, ಸದ್ಯಕ್ಕಂತೂ ಈ ವಿಚಾರ ಸರ್ಕಾರ, ರಾಜ್ಯ ಬಿಜೆಪಿ ನಾಯಕರ ನೆಮ್ಮದಿ ಹಾಳು ಮಾಡಿರುವುದಂತೂ ನಿಜ. ಇದರ ನಡುವೆ ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದು ಕೊಪ್ಪಳದಲ್ಲಿ ಆಡಿರುವ ಮಾತುಗಳು ಭಿನ್ನಮತದ ಸ್ವರೂಪ ಏನಾಗಬಹುದು ಎನ್ನುವುದರ ಸಣ್ಣ ಸುಳಿವು ನೀಡಿದೆ.
ತೆರೆಯ ಮೇಲಿನ ಸಿಎಂ ಬಿಎಸ್ವೈ, ತೆರೆಯ ಹಿಂದಿನ ಮುಖ್ಯಮಂತ್ರಿ ಯಾರು?
ಕೊಪ್ಪಳದಲ್ಲಿ ಬಿಜೆಪಿಯಲ್ಲಿನ ಭಿನ್ನಮತದ ಬಗ್ಗೆ ಮಾತನಾಡಿರುವ ಸಿದ್ದರಾಮಯ್ಯ, ''ಬಿಜೆಪಿಯಲ್ಲಿ ಭಿನ್ನಮತ ಇರುವುದು ನಿಜ. ಅದು ಮುಂದುವರೆದುಕೊಂಡು ಹೋಗುತ್ತದೆ. ಪರಿಣಾಮ ಏನು ಬೇಕಾದರೂ ಆಗಬಹುದು. ಒಂದುವೇಳೆ ಸರ್ಕಾರ ಅದಾಗದೆ ಬಿದ್ದು ಹೋದರೆ ನೋಡೋಣ'' ಎಂದಿದ್ದಾರೆ. ಸಿದ್ಧರಾಮಯ್ಯ ರವರ ಈ ಮಾತು ರಾಜಕೀಯ ವಲಯದಲ್ಲಿ ಹೊಸ ಬದಲಾವಣೆಗೆ ಮುನ್ನುಡಿ ಬರೆಯುತ್ತಾ.?
ಸಿದ್ಧರಾಮಯ್ಯ ಹೇಳಿದ್ದೇನು.?
''ಬಿಜೆಪಿಯಲ್ಲಿ ಭಿನ್ನಮತ ಇರೋದು ಸತ್ಯ. ಬಿಜೆಪಿಯಲ್ಲಿ ಭಿನ್ನಮತ ಮುಂದುವರಿಯುತ್ತೆ. ಭಿನ್ನಮತದಿಂದಲೇ ಸರ್ಕಾರ ಬಿದ್ದರೂ ಬೀಳಬಹುದು. ಅದರಲ್ಲಿ ನಾವು ಕೈ ಹಾಕಲ್ಲ. ಸರ್ಕಾರ ಅದಾಗದೆ ಬಿದ್ದು ಹೋದರೆ, ಆಗ ನೋಡೋಣ'' ಎಂದು ಕೊಪ್ಪಳದಲ್ಲಿ ಇಂದು ಸಿದ್ದರಾಮಯ್ಯ ಹೇಳಿದ್ದಾರೆ.
ಯಡಿಯೂರಪ್ಪ ಹೆಸರಿಗಷ್ಟೇ ಸಿಎಂ
''ಯಡಿಯೂರಪ್ಪ ಹೆಸರಿಗಷ್ಟೇ ಸಿಎಂ. ಆದರೆ ಕಡತಗಳಿಗೆ ಸಹಿ ಹಾಕುವುದು ಮಗ ವಿಜಯೇಂದ್ರ. ಅಸಾಂವಿಧಾನಾತ್ಮಕ ಮುಖ್ಯಮಂತ್ರಿಯಾಗಿ ವಿಜಯೇಂದ್ರ ಇದಾರೆ ಅಂತ ಜನ ಹೇಳ್ತಾರೆ, ನಾವಲ್ಲ'' ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ಬಿಎಸ್ವೈ ಬದಲಾವಣೆಗೆ ಯತ್ನಿಸುತ್ತಿರುವ ಬಿಜೆಪಿಯ ಆ ರಾಷ್ಟ್ರ ನಾಯಕರಾರು?
ಸಿದ್ದರಾಮಯ್ಯರನ್ನ ಭೇಟಿ ಮಾಡಿದ ಅಸಮಾಧಾನಿತರು
''ಬಿಜೆಪಿಯಲ್ಲಿನ ಒಳರಾಜಕಾರಣದಿಂದಾಗಿ ಹಲವರು ಅಸಮಾಧಾನಿತರಾಗಿದ್ದಾರೆ. ಅಂಥವರಲ್ಲಿ ಕೆಲವರು ನನ್ನನ್ನು ಭೇಟಿಯಾಗಿದ್ದಾರೆ. ನನ್ನೊಂದಿಗೆ ಮಾತುಕತೆ ನಡೆಸಿದ್ದಾರೆ. ಸಹಜವಾಗಿ ಅಸಮಾಧಾನ ತೋಡಿಕೊಂಡಿದಾರೆ ಅಷ್ಟೇ'' ಎಂದಿದ್ದಾರೆ ಸಿದ್ದರಾಮಯ್ಯ.
ಸಿದ್ದರಾಮಯ್ಯ ಹಾಗೆ ಹೇಳಿದ್ದೇಕೆ.?
ಅಸಮಾಧಾನಿತರೊಂದಿಗಿನ ತಮ್ಮ ಮಾತುಕತೆಯ ಬಳಿಕ ಸಿದ್ದರಾಮಯ್ಯ ಕೊಟ್ಟಿರುವ ಈ ಹೇಳಿಕೆ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಯನ್ನ ಹುಟ್ಟುಹಾಕಿದೆ. ಯಾವ ಅರ್ಥದಲ್ಲಿ ಸಿದ್ದರಾಮಯ್ಯ ಹೀಗೆ ಹೇಳಿದ್ದಾರೆ ಎಂಬುದೇ ಈಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಬಿಜೆಪಿ ಜನನಾಯಕರು ಇರುವ ಪಕ್ಷ: ಹಾಗಾಗಿ ಸಿದ್ದರಾಮಯ್ಯಗೆ ಮುಕ್ತ ಆಹ್ವಾನ
ಸಿದ್ದರಾಮಯ್ಯ ಮಾತಿನ ಒಳಮರ್ಮ ಇದೇನಾ.?
ಮೈತ್ರಿ ಸರ್ಕಾರದ ಅವಧಿಯಲ್ಲೂ ಹೀಗೇ ಆರಂಭಗೊಂಡಿದ್ದ ಭಿನ್ನಮತ ಸರ್ಕಾರ ಪತನಕ್ಕೆ ಕಾರಣವಾಗಿ ಬಿಜೆಪಿಗೆ ಅಧಿಕಾರ ಲಭಿಸುವಂತೆ ಮಾಡಿತ್ತು. ಈಗ ಎದ್ದಿರುವ ಭಿನ್ನಮತವೂ ಇಂಥದ್ದೇ ಮತ್ತೊಂದು ಸನ್ನಿವೇಶವನ್ನು ಸೃಷ್ಟಿಸಬಹುದಾ.? ''ಸರಕಾರ ಅದಾಗದೆ ಬಿದ್ದು ಹೋದರೆ ನೋಡೋಣ'' ಅಂತ ಸಿದ್ದರಾಮಯ್ಯ ನವರ ಹೇಳಿರುವ ಮಾತಿನ ಒಳಮರ್ಮ ಇದೇನಾ.?
ಮತ್ತೊಮ್ಮೆ ಮೈತ್ರಿ ಸುಳಿವು
ಕೆಲವೇ ದಿನಗಳಲ್ಲಿ ನಡೆಯಲಿರುವ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗುವ ಸಾಧ್ಯತೆ ಇದೆ. ಬಲಾಢ್ಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸುವ ಸಲುವಾಗಿ ಕೈ ಮತ್ತು ತೆನೆ ಪಕ್ಷದ ನಡುವೆ ಹೊಂದಾಣಿಕೆ ಆಗುವ ಸುಳಿವು ಸಿಕ್ಕಿದೆ. ಒಂದು ವೇಳೆ ಇದಾಗಿದ್ದೇ ಆದಲ್ಲಿ, ರಾಜ್ಯದಲ್ಲೂ ಮರು ಮೈತ್ರಿ ಪರ್ವ ಆರಂಭವಾಗಬಹುದು ಎನ್ನಲಾಗುತ್ತಿದೆ.