'ಛಲವಾದಿ' ಪಠ್ಯಪರಿಷ್ಕರಣೆ ಅಧ್ಯಕ್ಷರಾಗಲಿ: ಚಡ್ಡಿ ಹೊರುವ ಗುಲಾಮ ಆಗುವುದು ಬೇಡ
ಬೆಂಗಳೂರು, ಮೇ 7: ಸಿದ್ದರಾಮಯ್ಯ ಅವರಿಗೆ ರವಾನಿಸುವುದಕ್ಕಾಗಿ ಹಳೆಯ ಚಡ್ಡಿಗಳನ್ನು ಹೊತ್ತುಕೊಂಡು ಓಡಾಡಿದ ವಿಧಾನ ಪರಿಷತ್ ಸದಸ್ಯ ಛಲವಾದಿ ಲಕ್ಷ್ಮೀನಾರಾಯಣ ಅವರಿಗೆ, ಹಳೆಯ ಚಡ್ಡಿ ಹೊರುವ ಗುಲಾಮಿ ಸ್ಥಿತಿಯಿಂದ ಹೊರಬರುವಂತೆ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣೆಯನ್ನು ವಿರೋಧಿಸಿ ಎನ್ಎಸ್ಯುಐ ಕಾರ್ಯಕರ್ತರು ತುಮಕೂರು ಜಿಲ್ಲೆಯಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ಮನೆಯ ಮುಂದೆ ಚಡ್ಡಿ ಸುಟ್ಟು ಪ್ರತಿಭಟನೆ ನಡೆಸಿದ್ದರು. ಇದನ್ನು ಖಂಡಿಸಿದ್ದ ಸಿದ್ದರಾಮಯ್ಯ ರಾಜ್ಯದಾದ್ಯಂತ ಚಡ್ಡಿ ಸುಡುವ ಚಳವಳಿ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದ್ದರು. ಇದನ್ನೇ ಗಂಭೀರವಾಗಿ ಸ್ವೀಕರಿಸಿದ್ದ, ಇತ್ತೀಚೆಗೆ ವಿಧಾನ ಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾಗಿರುವ ಛಲವಾದಿ ನಾರಾಯಣಸ್ವಾಮಿ, ಮನೆಮನೆಗಳಿಂದ ಚಡ್ಡಿಗಳನ್ನು ಸಂಗ್ರಹಿಸಿ, ಅವುಗಳನ್ನ ತಲೆಯ ಮೇಲೆ ಹೊತ್ತು ಸಿದ್ದರಾಮಯ್ಯ ಅವರಿಗೆ ರವಾನಿಸಲು ಮುಂದಾಗಿದ್ದರು.
ರೋಹಿತ್ ಚಕ್ರತೀರ್ಥ ಸಮಿತಿಗೆ ಪಿಯು ಪಠ್ಯಪರಿಷ್ಕರಣೆಯಿಂದ ಗೇಟ್ಪಾಸ್
ಚಡ್ಡಿ ಹಾಕುವವರು ಮಿಲಿಟರಿಯಲ್ಲಿ, ಪೊಲೀಸ್ ವ್ಯವಸ್ಥೆಯಲ್ಲೂ ಹಿಂದೆ ಇದ್ದರು. ಕರ್ಮಚಾರಿಗಳೂ ಚಡ್ಡಿ ಹಾಕುತ್ತಾರೆ. ರೈತರೆಲ್ಲರೂ ಚಡ್ಡಿ ಧರಿಸುತ್ತಾರೆ. ಚಡ್ಡಿ ಹಾಕುವ ಎಲ್ಲರನ್ನೂ ಸಿದ್ದರಾಮಯ್ಯ ಅಪಮಾನ ಮಾಡಿದ್ದಾರೆ. ಬಿಜೆಪಿ ರಾಜ್ಯ ಎಸ್.ಸಿ. ಮೋರ್ಚಾ ವತಿಯಿಂದ ಜನರಿಂದ ಸಂಗ್ರಹಿಸಿದ ಚಡ್ಡಿಗಳನ್ನು ಸಿದ್ದರಾಮಯ್ಯ ಅವರ ಮನೆಗೆ ತಲುಪಿಸುವ ಆಂದೋಲನ ನಡೆಸಿದ್ದರು.
ದಲಿತರು ಅರ್ಥ ಮಾಡಿಕೊಳ್ಳಬೇಕು:
ಇದಕ್ಕೆ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, "ನಿಮ್ಮ ಸಂಘದಲ್ಲಿ ಉನ್ನತ ಪದಾಧಿಕಾರಿಗಳಲ್ಲಿ ದಲಿತರು ಮತ್ತು ಹಿಂದುಳಿದ ಜಾತಿಗಳು ಯಾಕೆ ಇಲ್ಲ? ಎನ್ನುವ ನನ್ನ ಪ್ರಶ್ನೆಗೆ, ಅರ್ಎಸ್ಎಸ್ನವರು ಶಾಸಕ ಛಲವಾದಿ ನಾರಾಯಣಸ್ವಾಮಿಯವರ ಮೂಲಕ ಉತ್ತರ ನೀಡಿದ್ದಾರೆ. ಈ ಸಂದೇಶವನ್ನು ಬಿಜೆಪಿಯಲ್ಲಿರುವ ದಲಿತ ಬಂಧುಗಳು ಅರ್ಥಮಾಡಿಕೊಳ್ಳಲಿ ಎಂದು ಹಾರೈಸುತ್ತೇನೆ," ಎಂದು ಟ್ವೀಟ್ ಮಾಡಿದ್ದಾರೆ.
ಆರ್ಎಸ್ಎಸ್ಗೆ ಬೆಂಬಲ ಕೊಡಲು ಹಳೆಯ ಚಡ್ಡಿ ಹೊತ್ತುಕೊಂಡು ಮೆರವಣಿಗೆ ಮಾಡಿದ ನಾರಾಯಣಸ್ವಾಮಿಯವರೇ, ನಿಮ್ಮ ಸ್ಥಾನಮಾನ ಏನಿದ್ದರೂ ಇಷ್ಟಕ್ಕೇ ಸೀಮಿತ. ಆ ಸಂಘದ ಉನ್ನತ ಪದಾಧಿಕಾರಕ್ಕೆ ನೀವು ಸದಾ ಅಸ್ಪೃಷ್ಯ ನೆನಪಿರಲಿ.
ಛಲವಾದಿ ನಾರಾಯಣಸ್ವಾಮಿಯವರೇ, ಯಾರು ಯಾರದೋ ಚಡ್ಡಿ ಹೊತ್ತುಕೊಂಡ ನಿಮ್ಮನ್ನು ಕಂಡು ಮನಸ್ಸಿಗೆ ನೋವಾಯಿತು. ನಿಮ್ಮನ್ನು ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷತೆಯಂತಹ ಸ್ಥಾನದಲ್ಲಿ ಕಾಣುವ ಆಸೆ ನನಗೆ.
ಛಲವಾದಿ ನಾರಾಯಣಸ್ವಾಮಿಯವರೇ, ನಿಮ್ಮ ಪ್ರತಿಭಟನೆಯ ಹಕ್ಕನ್ನು ನಾನು ಗೌರವಿಸುತ್ತೇನೆ. ಆದರೆ, ಕೇವಲ ರಾಜಕೀಯ ಜಿದ್ದಾಜಿದ್ದಿಗಾಗಿ ಹಳೆ ಚಡ್ಡಿ ಹೊತ್ತುಕೊಳ್ಳಲೂ ಸಿದ್ಧರಾದ ನಿಮ್ಮ ಗುಲಾಮಿ ಮನಸ್ಥಿತಿಗೆ ನನ್ನ ಧಿಕ್ಕಾರ.
ಛಲವಾದಿ ನಾರಾಯಣಸ್ವಾಮಿಯವರೇ, ಸ್ವಾಭಿಮಾನವನ್ನು ಉಸಿರಾಗಿಸಿಕೊಂಡು ಬದುಕಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸ್ವಲ್ಪ ಓದಿ ಸ್ವಾಭಿಮಾನದ ಪಾಠ ಕಲಿಯಬೇಕೆಂದಷ್ಟೇ ನಿಮಗೆ ನಾನು ನೀಡುವ ಸಲಹೆ.